ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೆಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಮತ್ತೆ ನೋಟಿಸ್ ಕಳುಹಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ದಾಖಲಾದ ಪ್ರಕರಣ ಸಂಬಂಧ ನೋಟಿಸ್ ನೀಡಲಾಗಿದೆ.
ಇಬ್ಬರು ಸಹೋದರಿಯರು ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದರು. ಕಳೆದ ತಿಂಗಳು ಕೂಡ ವಿಚಾರಣೆಗಾಗಿ ಪೊಲೀಸರು ಕಂಗನಾ ರಣಾವತ್ ಮತ್ತು ರಂಗೋಲಿ ಅವರಿಗೆ ನೋಟಿಸ್ ನೀಡಿದ್ದರು.
ಇತ್ತೀಚೆಗೆ, ಬಾಂದ್ರಾ ಪೊಲೀಸರು ನಟಿ ಕಂಗನಾ ಮತ್ತು ಅವರ ಸಹೋದರಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಕಂಗನಾ ರಣಾವತ್ ವಿರುದ್ಧ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎಫ್ಐಆರ್ ದಾಖಲಿಸಲು ಆದೇಶಿಸಿತ್ತು.
ಇದನ್ನೂ ಓದಿ: ಕೋಮು ದ್ವೇಷ ಹರಡಿದ ಆರೋಪ: ವಿಚಾರಣೆಗೆ ಹಾಜರಾಗುವಂತೆ ಕಂಗನಾ ರಣಾವತ್ಗೆ ನೋಟಿಸ್!
ಮೊದಲ ನೋಟಿಸ್ನಲ್ಲಿ, ನಟಿ ಕಂಗನಾ ಮದುವೆ ಇದೆ ಎಂಬ ನೆಪ ನೀಡಿ ವಿಚಾರಣೆಗೆ ಬರುವುದನ್ನು ತಪ್ಪಿಸಿಕೊಂಡಿದ್ದರು. ಈ ಹಿನ್ನೆಲೆ ಎರಡನೇ ಬಾರಿ ನೋಟಿಸ್ ನೀಡಲಾಗಿದ್ದು, ನವೆಂಬರ್ 10 ಮತ್ತು 11 ನೇ ದಿನಾಂಕದಂದು ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ.
ಬಾಲಿವುಡ್ ಕಾಸ್ಟಿಂಗ್ ನಿರ್ದೇಶಕ ಮತ್ತು ಫಿಟ್ನೆಸ್ ತರಬೇತುದಾರ ಮುನಾವರ್ ಅಲಿ ಸಯ್ಯದ್ ಅವರು ಸಲ್ಲಿಸಿದ ದೂರಿನ ಬಗ್ಗೆ ತನಿಖೆ ನಡೆಸುವಂತೆ ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿಯ ಟ್ವೀಟ್ ಮತ್ತು ಇತರ ಹೇಳಿಕೆಗಳನ್ನು ಉಲ್ಲೇಖಿಸಿ ಪೊಲೀಸರಿಗೆ ಆದೇಶಿಸಿತ್ತು.
ನಟಿ ಮತ್ತು ಆಕೆಯ ಸಹೋದರಿ ಹೆಚ್ಚು ಆಕ್ಷೇಪಾರ್ಹ ಹೇಳಿಕೆಗಳನ್ನು ಟ್ವೀಟ್ ಮಾಡಿದ್ದಾರೆ. ಇದು ದೂರುದಾರರ ಧಾರ್ಮಿಕ ಭಾವನೆಗಳನ್ನು ಮಾತ್ರವಲ್ಲದೆ ಅನೇಕ ಕಲಾವಿದರ ಭಾವನೆಗಳನ್ನು ಸಹ ನೋಯಿಸುತ್ತದೆ. ಅವರು ಕಲಾವಿದರನ್ನು ಕೋಮುವಾದಿ ವರ್ಗಗಳಾಗಿ ವಿಂಗಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ನ್ಯಾಯಾಲಯದ ನಿರ್ದೇಶನದ ಮೇರೆಗೆ, ಬಾಂದ್ರಾ ಪೊಲೀಸರು ರಣಾವತ್ ಮತ್ತು ಆಕೆಯ ಸಹೋದರಿಯ ವಿರುದ್ಧ ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶಪೂರ್ವಕ ಕೃತ್ಯಗಳು) ಮತ್ತು 124 (ದೇಶದ್ರೋಹ), ಮತ್ತೆ 34ರ (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.