ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯ ಬಳಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಬೆಳ್ತಂಗಡಿ ಮೂಲದ ಮೂವರ ಮೃತದೇಹ ಪತ್ತೆಯಾಗಿತ್ತು. ಈ ಕುರಿತ ತನಿಖೆಯ ಹಂತದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಕುಪ್ರಸಿದ್ಧ ನಕಲಿ ಚಿನ್ನದ ವಂಚನಾ ಜಾಲ ಈ ಭಯಾನಕ ಕೃತ್ಯವನ್ನು ಎಸಗಿರುವ ಶಂಕೆ ಮೂಡಿದೆ.
ಘಟನೆಯಲ್ಲಿ ಸಾಹುಲ್ ಹಮೀದ್ (45), ಇಸಾಕ್ (56) ಹಾಗೂ ಸಿದ್ದಿಕ್ (34) ಎಂಬುವವರು ಮೃತರು. ಸಾಹುಲ್ ಹಮೀದ್, ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾನ್ ನಿವಾಸಿಯಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇಸಾಕ್ ಕುವೆಟ್ಟು ಗ್ರಾಮದ ಮದಡ್ಕ ನಿವಾಸಿಯಾಗಿದ್ದು, ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರು ಮತ್ತು ಸಿದ್ದಿಕ್ ಶಿರ್ಲಾಲು ಗ್ರಾಮದ ನಿವಾಸಿಯಾಗಿದ್ದರು.
ಈ ಮೂವರು 12 ದಿನಗಳ ಹಿಂದೆ ಬೆಳ್ತಂಗಡಿ ಮದ್ದಡ್ಕದ ರಫೀಕ್ ಎಂಬವರ ಕಾರನ್ನು ಬಾಡಿಗೆ ಪಡೆದುಕೊಂಡು ತುಮಕೂರಿಗೆ ಆಗಮಿಸಿದ್ದರು. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ, ಕಡಿಮೆ ಬೆಲೆಗೆ ಚಿನ್ನವನ್ನು ನೀಡುತ್ತೇವೆ ಎಂದು ದುಷ್ಕರ್ಮಿಗಳು ಸುಳ್ಳು ಹೇಳಿ ಹಣ ದೋಚುವ ಪ್ಲಾನ್ ಮಾಡಿ ಈ ಮೂವರನ್ನು ತುಮಕೂರಿಗೆ ಕರೆಸಿಕೊಂಡಿದ್ದರು. ಗುರುವಾರ ಸಂಜೆವರೆಗೂ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದ ಇಸಾಕ್ನ ಮೊಬೈಲ್ ಗುರುವಾರ ರಾತ್ರಿ ಸ್ವಿಚ್ ಆಫ್ ಆಗಿತ್ತು. ಬಳಿಕ ಕೈಕಾಲು ಕಟ್ಟಿ ಹಾಕಿ ಕೊಲೆ ಮಾಡಿ ಗುರತು ಪತ್ತೆಯಾಗದಂತೆ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಮೃತದೇಹ ಸುಟ್ಟು ಕರಕಲಾಗಿದ್ದು, ಇಬ್ಬರ ಮೃತದೇಹ ಕಾರಿನ ಢಿಕ್ಕಿಯಲ್ಲಿ ಮತ್ತು ಓರ್ವನ ಮೃತದೇಹ ಕಾರಿನ ಮಧ್ಯದಲ್ಲಿತ್ತು ಎಂದು ತಿಳಿದು ಬಂದಿದೆ.
ಮೂವರ ಶವ ಕಾರಿನಲ್ಲಿ ಪತ್ತೆಯಾಗಿರುವ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾರು, ದಕ್ಷಿಣ ಕನ್ನಡ ಜಿಲ್ಲೆಯ ರಫೀಕ್ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಅವರನ್ನು ಪೊಲೀಸರು ವಿಚಾರಿಸಿದಾಗ ಅವರು ಇಸಾಕ್ ಎಂಬಾತನಿಗೆ 15 ದಿನಗಳ ಹಿಂದೆ ಕಾರು ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಮೃತರ ಗುರುತು ಪತ್ತೆಕಾರ್ಯ ಸುಲಭವಾಗಿದೆ.
ಪೊಲೀಸರು ವಶಕ್ಕೆ ಪಡೆದುಕೊಂಡಿರುವ ದುಷ್ಕರ್ಮಿಗಳ ಹೆಸರನ್ನು ಈವರೆಗೆ ಬಹಿರಂಗಪಡಿಸಲಾಗಿಲ್ಲ. ಚಿನ್ನದ ಆಮಿಷವೊಡ್ಡಿ ಮೂವರನ್ನು ತುಮಕೂರಿಗೆ ಕರೆದು ಹಣ ದೋಚಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇನ್ನು ಚಿನ್ನದ ಡೀಲ್ಗೆ ಸಂಬಂಧಿಸಿದ್ದು ಎಂದು ಹೇಳಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಆಡಿಯೋದಲ್ಲಿ ಚಿನ್ನದ ವ್ಯವಹಾರದ ಬಗ್ಗೆ ಮಾತನಾಡುವ, ಹಣಕಾಸಿನ ಬಗ್ಗೆ ಮಾತನಾಡುವುದು, 250ಗ್ರಾಂ ಡೀಲ್ ಮಾಡುವುದು ಸೆರೆಯಾಗಿದೆ.
ಯುಟಿ ಖಾದರ್ ಪ್ರತಿಕ್ರಿಯೆ:
ತುಮಕೂರಿನ ಕುಚ್ಚಂಗಿ ಕೆರೆಯ ಬಳಿ ಬೆಳಕಿಗೆ ಬಂದ ಬೆಳ್ತಂಗಡಿ ತಾಲೂಕಿನ ಮೂವರು ವ್ಯಕ್ತಿಗಳ ಕೊಲೆ ಕೃತ್ಯಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಆಘಾತವನ್ನು ವ್ಯಕ್ತಪಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಐಜಿಪಿ ರವಿಕಾಂತೇಗೌಡ ಹಾಗೂ ತುಮಕೂರು ಎಸ್ಪಿ ಜೊತೆ ಮಾತುಕತೆ ನಡೆಸಿದ್ದೇನೆ. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆಯ ವೈಫಲ್ಯ: ಭಾಸ್ಕರ್ ಪ್ರಸಾದ್
ನಕಲಿ ಚಿನ್ನದ ವಂಚನಾ ಜಾಲ ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರನ್ನು ಕಾರಿನಲ್ಲಿ ಸುಟ್ಟು ಹಾಕಿ ಹತ್ಯೆ ಮಾಡಿರುವ ಘಟನೆ ರಾಜ್ಯದ ಗುಪ್ತಚರ ಇಲಾಖೆ ಮತ್ತು ಕಾನೂನು ಸುವ್ಯವಸ್ಥೆಯ ವೈಫಲ್ಯವಾಗಿದೆ. ಇಂತಹ ಜಾಲಗಳ ಬಗೆಗಿನ ವರದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೂ ಸಹ, ಜನರು ಮತ್ತೆ ಮತ್ತೆ ಅಂತಹದ್ದೇ ಜಾಲಗಳ ಆಮಿಷಗಳಿಗೆ ಒಳಗಾಗಿ ಹಣ ಮತ್ತು ಜೀವ ಎರಡನ್ನೂ ಕಳೆದುಕೊಳ್ಳುತ್ತಿರುವುದು ದುರಂತ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
ಸರ್ಕಾರ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಇದರ ಹಿಂದಿರುವ ಗುಂಪು ಅಥವಾ ವ್ಯಕ್ತಿಗಳನ್ನು ಶೀಘ್ರವೇ ಬಂಧಿಸುವ ಮೂಲಕ ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು, ಈ ಜಾಲದ ವಂಚನೆ ಮತ್ತು ಕೌರ್ಯಕ್ಕೆ ಇನ್ನೊಂದಷ್ಟು ಜನರು ಸಿಲುಕಿಕೊಳ್ಳದಂತೆ ನೋಡಿಕೊಳ್ಳಬೇಕು. ಈ ಘಟನೆಯಲ್ಲಿ ಜೀವ ಕಳೆದುಕೊಂಡಿರುವವರ ಕುಟುಂಬಗಳಿಗೆ ತಕ್ಷಣ ತಲಾ 50 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಭಾಸ್ಕರ್ ಪ್ರಸಾದ್ ಆಗ್ರಹಿಸಿದ್ದಾರೆ.
ಇದಲ್ಲದೆ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ನೈಜ ವಿಷಯವನ್ನು ಸಾರ್ವಜನಿಕಗೊಳಿಸಬೇಕೆಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಬ್ದುಲ್ ಮಜೀದ್, ತುಮಕೂರಿನ ಬಳಿಯ ಹಳ್ಳಿ ಒಂದರಲ್ಲಿ, ಬೆಳ್ತಂಗಡಿ ಮೂಲದ ಮೂವರು ಕಾರೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಅತ್ಯಂತ ಆತಂಕಕಾರಿಯಾದ ಘಟನೆಯಾಗಿದೆ. ಅತೀ ಸಂಶಯಾಸ್ಪದ ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ನೈಜ ವಿಷಯವನ್ನು ಸಾರ್ವಜನಿಕಗೊಳಿಸಬೇಕೆಂದು ತುಮಕೂರು ಎಸ್ಪಿ ಮತ್ತು ಕರ್ನಾಟಕದ ಡಿಜಿಪಿಗೆ ಅಗ್ರಹಿಸಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ: ತಿರುವಳ್ಳೂರಿನಿಂದ ಸಸಿಕಾಂತ್ ಸೆಂಥಿಲ್, ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ