ಭಿನ್ನ ಧರ್ಮದ ಯುವತಿಯೊಂದಿಗೆ ಸಿನಿಮಾ ವೀಕ್ಷಿಸಲು ಬಂದ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಿಗೆ ಥಳಿಸಿ ಮತೀಯ ಗೂಂಡಾಗಿರಿ ನಡೆಸಿರುವ ಪ್ರಕರಣದ ದಾವಣಗೆರೆಯಲ್ಲಿ ವರದಿಯಾಗಿದೆ. ದಲಿತ ಯುವತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜುಲೈ 9 ರ ಭಾನುವಾರ ಈ ಘಟನೆ ನಡೆದಿದೆ. ದೊಡ್ಡೇಶ್ ಮತ್ತು ಲಿಂಗರಾಜು ಎಂಬ ಯುವಕರೇ ಆರೋಪಿಗಳಾಗಿದ್ದು ಸದ್ಯ ಬಂಧನದಲ್ಲಿದ್ದಾರೆ. ದೊಡ್ಡೇಶ್ ಹಿಂದುತ್ವ ಸಂಘಟನೆಗಳ ಜೊತೆ ಸಂಬಂಧವಿಟ್ಟುಕೊಂಡಿದ್ದರ ಜೊತೆಗೆ ಕನ್ನಡ ಅಭಿಮಾನಿಗಳ ಸಂಘದವನಾದರೆ ಲಿಂಗರಾಜು ಕನ್ನಡಪರ ಹೋರಾಟಗಾರ ಎಂದು ಬಿಂಬಿಸಿಕೊಂಡಿದ್ದ ಎನ್ನಲಾಗಿದೆ.
ಅಂತಿಮ ವರ್ಷದ ಪದವಿ ಓದುತ್ತಿರುವ ದಲಿತ ಯುವತಿಯೊಬ್ಬಳು ಮೊಹಮ್ಮದ್ ಸುಭಾನಿ ಮತ್ತು ಇಬ್ರಾಹಿಂ ಎಂಬ ತನ್ನ ಇಬ್ಬರು ಮುಸ್ಲಿಂ ಸ್ನೇಹಿತರೊಂದಿಗೆ ನಗರದ ಗೀತಾಂಜಲಿ ಸಿನಿಮಾ ಥಿಯೇಟರ್ಗೆ ಹೋಗಿದ್ದಾಗ ಅವರನ್ನು ಹಿಂಬಾಲಿಸಿದ ಆರೋಪಿಗಳು ಅವಾಚ್ಯ ಪದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ತಳ್ಳಾಡಿದ್ದಾರೆ. ಅವರ ಜೊತೆಗಿದ್ದ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಘಟನೆಯನ್ನು ಫೇಸ್ಬುಕ್ ಲೈವ್ ಮಾಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಕೆಟಿಜೆ ನಗರ ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 341, 323, 504, 505 (2) ಮತ್ತು SC/ST ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತ ಯುವತಿಯಿಂದ ದೂರನ್ನು ಸ್ವೀಕರಿಸಿದ ಕೂಡಲೇ ನಾವು ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಪ್ರಸಾರವಾದ ವೀಡಿಯೊದಲ್ಲಿ ಅಪರಾಧ ನಡೆದಿರುವ ಪುರಾವೆಯಿದೆ. ಆರೋಪಿಗಳು ವಿದ್ಯಾರ್ಥಿಗಳನ್ನು ಥಳಿಸಿ ನೈತಿಕ ಪೊಲೀಸ್ಗಿರಿ ಮಾಡಿದ್ದಾರೆ. ಅವರು ಈ ಮುಂಚೆ ಯಾವುದಾದರೂ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದೇವೆ ಎಂದು ದಾವಣಗೆರೆ ಎಸ್ಪಿ ಡಾ ಅರುಣ್ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ನೈತಿಕ ಪೊಲೀಸ್ ಗಿರಿಯನ್ನು ತಡೆಯಲು ಇಲಾಖೆ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಜೂನ್ 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೈತಿಕ ಪೊಲೀಸ್ ಗಿರಿಯನ್ನು ತಡೆಯುವಂತೆ ಸೂಚನೆ ನೀಡಿದ್ದರು. ರಾಜ್ಯ ಸರ್ಕಾರವು ಕರಾವಳಿಯಲ್ಲಿ ಆಂಟಿ ಕಮ್ಯುನಲ್ ವಿಂಗ್ ಅನ್ನು ರಚಿಸಿದ್ದು, ಮತೀಯ ಗೂಂಡಾಗಿರಿಯ ವಿರುದ್ಧ ಹೋರಾಡುವುದಾಗಿ ಹೇಳಿಕೊಂಡಿದೆ. ಆದರೂ ರಾಜ್ಯದ ನಾನಾ ಭಾಗಗಳಲ್ಲಿ ಈ ಮತೀಯ ಗೂಂಡಾಗಿರಿ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇವುಗಳನ್ನು ನಿಗ್ರಹಿಸಲು ಸರ್ಕಾರ ಮತ್ತಷ್ಟು ಕಾರ್ಯಪ್ರವೃತ್ತರಾಗಬೇಕಿದೆ.
ಇದನ್ನೂ ಓದಿ : ಟಿ.ನರಸೀಪುರ: ಗುಂಪು ಘರ್ಷಣೆಯಲ್ಲಿ ಯುವಕನ ಕೊಲೆ – ಇಬ್ಬರು ಆರೋಪಿಗಳ ಬಂಧನ