ಕೇರಳದ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತನ್ನ ಪುತ್ರ ಅನಿಲ್ ಕೆ ಆ್ಯಂಟನಿ ಚುನಾವಣೆಯಲ್ಲಿ ಸೋಲಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಎ.ಕೆ ಆ್ಯಂಟನಿ ಮಂಗಳವಾರ (ಏ. 9) ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎ.ಕೆ ಆ್ಯಂಟನಿ, “ನನ್ನ ಮಗನ ಪಕ್ಷ ಸೋಲಬೇಕು, ಆತನ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಆಂಟೊ ಆ್ಯಂಟನಿ ಗೆಲ್ಲಬೇಕು” ಎಂದಿದ್ದಾರೆ.
Kerala: On his son and BJP leader Anil Antony contesting elections from Pathanamthitta Lok Sabha seat, Congress leader AK Antony says, "BJP should lose there and Congress should win in Pathanamthitta. Anto Antony (Congress candidate) will win. Congress is my religion."… pic.twitter.com/xJKdAUoEVG
— ANI (@ANI) April 9, 2024
“ಅವರು (ಅನಿಲ್ ಕೆ ಆ್ಯಂಟನಿ) ಚುನಾವಣೆಯಲ್ಲಿ ಸೋಲುತ್ತಾರೆ. ಆಂಟೊ ವಿಜಯಿಯಾಗಲಿದ್ದಾರೆ. ನಾನು ಯುಡಿಎಫ್ ಅಭ್ಯರ್ಥಿ ಪರ ಪ್ರಚಾರಕ್ಕೆ ಪತ್ತನಂತಿಟ್ಟಕ್ಕೆ ಹೋಗುತ್ತಿಲ್ಲ. ನನಗೆ ಆರೋಗ್ಯ ಸಮಸ್ಯೆಗಳಿವೆ ಮತ್ತು ಅಷ್ಟು ದೂರ ಪ್ರಯಾಣಿಸಲು ಸಾಧ್ಯವಿಲ್ಲ” ಎಂದು ಎ.ಕೆ ಆ್ಯಂಟನಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರ ಮಕ್ಕಳು ಬಿಜೆಪಿಗೆ ಸೇರ್ಪಡೆಯಾಗಿರುವುದು ತಪ್ಪು ಎಂದಿರುವ ಆ್ಯಂಟನಿ, ಮಗನ ರಾಜಕೀಯ ನಡೆಯ ಬಗ್ಗೆ ಪತ್ರಕರ್ತರು ಪದೇ ಪದೇ ಕೇಳಿದ ಪ್ರಶ್ನೆಗೆ ” ಕಾಂಗ್ರೆಸ್ ನನ್ನ ಧರ್ಮ” ಎಂದಷ್ಟೇ ಉತ್ತರಿಸಿದ್ದಾರೆ.
ಅಪ್ಪನ ವಿರುದ್ದ ಅನಿಲ್ ಆ್ಯಂಟನಿ ವಾಗ್ದಾಳಿ :
ಎ.ಕೆ ಆ್ಯಂಟನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅನಿಲ್ ಆ್ಯಂಟನಿ, “ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಲು ಪ್ರಯತ್ನಿಸಿದ ವ್ಯಕ್ತಿಯ ಪರ ಪ್ರಚಾರ ಮಾಡುತ್ತಿರುವ ತನ್ನ ತಂದೆ ಆ್ಯಂಟನಿ ಬಗ್ಗೆ ನನಗೆ ವಿಷಾದವಿದೆ ಎಂದು ಪುಲ್ವಾಮಾ ದಾಳಿಯ ಕುರಿತು ಆಂಟೊ ಆ್ಯಂಟನಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ.
“ಅವರು (ಎ.ಕೆ ಆ್ಯಂಟನಿ) ಭಾರತದ ಮಾಜಿ ರಕ್ಷಣಾ ಸಚಿವರಾಗಿದ್ದರು. ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಲು ಪ್ರಯತ್ನಿಸಿದ ವ್ಯಕ್ತಿಯನ್ನು ಅವರು ಬೆಂಬಲಿಸಿದ್ದರು. ಆಂಟೊ ಆಂಟೋನಿ ಈ ಚುನಾವಣೆಯಲ್ಲಿ ಸೋಲುತ್ತಾರೆ” ಎಂದು ಅನಿಲ್ ಹೇಳಿದ್ದಾರೆ.
ಪತ್ತನಂತಿಟ್ಟದಲ್ಲಿ, ಅನಿಲ್ ಆ್ಯಂಟನಿ ಅವರು ಹಾಲಿ ಕಾಂಗ್ರೆಸ್ ಸಂಸದ ಆಂಟೋ ಆ್ಯಂಟನಿ ಮತ್ತು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ರಾಜ್ಯ ಹಣಕಾಸು ಸಚಿವ ಡಾ. ಟಿಎಂ ಥಾಮಸ್ ಐಸಾಕ್ ಅವರನ್ನು ಎದುರಿಸಲಿದ್ದಾರೆ.
ಪ್ರಸಿದ್ದ ಧಾರ್ಮಿಕ ಕೇಂದ್ರ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಇದೇ ಪತ್ತನಂತಿಟ್ಟ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಈ ಹಿಂದೆ ಸುಪ್ರೀಂ ಕೋರ್ಟ್ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ಕಲ್ಪಿಸಿದ್ದ ವೇಳೆ, ಹಿಂದುತ್ವ ಸಂಘಟನೆಗಳು ಮತ್ತು ಬಿಜೆಪಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿತ್ತು.
ಮಾರ್ಚ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪತ್ತನಂತಿಟ್ಟದಲ್ಲಿ ಅನಿಲ್ ಪರ ಮತ ಯಾಚಿಸಲಿದ್ದಾರೆ. ಕೇರಳದಲ್ಲಿ ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ : ಮಹಾರಾಷ್ಟ್ರ: ಸೀಟು ಹಂಚಿಕೆ ಅಂತಿಮಗೊಳಿಸಿದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ