Homeಮುಖಪುಟಬೆಳ್ಳಿಚುಕ್ಕಿ: ಅನ್ಯಗ್ರಹದಲ್ಲಿ ನಡೆದ ಮೊದಲ ವೈಮಾನಿಕ ಹಾರಾಟ

ಬೆಳ್ಳಿಚುಕ್ಕಿ: ಅನ್ಯಗ್ರಹದಲ್ಲಿ ನಡೆದ ಮೊದಲ ವೈಮಾನಿಕ ಹಾರಾಟ

- Advertisement -
- Advertisement -

ಡಿಸೆಂಬರ್ 17, 1903ರಲ್ಲಿ ಅರ್ವಿಲ್ಲೇ ರೈಟ್ ಮತ್ತು ವಿಲ್ಬರ್ ರೈಟ್ (ರೈಟ್ ಸಹೋದರರು) ತಾವೇ ರೂಪಿಸಿದ ವಿಮಾನವನ್ನು ಕ್ಯಾಲಿಫೋರ್ನಿಯಾದ ಕಿಟ್ಟಿ ಹಾಕ್ ಪ್ರದೇಶದಲ್ಲಿ ಮೊದಲ ಬಾರಿಗೆ ಹಾರಿಸಿದರು. ಈ ವಿಮಾನವು 12 ಸೆಕೆಂಡುಗಳವರೆಗೆ, ಭೂ ಪ್ರದೇಶದಿಂದ 20 ಅಡಿಗಳ ಅಂತರದಲ್ಲಿ ಹಾರಾಟ ನಡೆಸಿತು. ಇದು ಮಾನವನ ಇತಿಹಾಸದಲ್ಲೇ ಒಂದು ಚಾರಿತ್ರಿಕ ಮೈಲುಗಲ್ಲು.

ರೈಟ್ ಬ್ರದರ್ಸ್ ವಿಮಾನ ಹಾರಾಟವಾಗಿ ಒಂದು ದಶಕದ ಅಂತರದಲ್ಲಿಯೇ (1914 ರಲ್ಲಿ) ಪ್ರಪಂಚದ ಮೊದಲ ಪ್ರಯಾಣಿಕ ವಿಮಾನ ಹಾರಿತು. ನಂತರ ವೈಮಾನಿಕ ಕ್ಷೇತ್ರದಲ್ಲಿ ನಡೆದಿರುವುದೆಲ್ಲವೂ ರೋಚಕ ಇತಿಹಾಸ. ಅದರಲ್ಲೂ 1969, ಜುಲೈ 20ರಂದು ಚಂದ್ರನ ಮೇಲೆ ನೀಲ್ ಆರ್ಮ್‌ಸ್ಟ್ರಾಂಗ್ ನುಡಿದ ಮೊದಲ ಮಾತು ಇನ್ನೂ ನಮ್ಮ ಕಿವಿಯಲ್ಲಿ ಗುನುಗುತ್ತಲೇ ಇದೆ:

“That’s one small step for man. One giant leap for Mankind”.

PC : The Becker T3 Group, (ರೈಟ್ ಬ್ರದರ್ಸ್)

ರೈಟ್ ಬ್ರದರ್ಸ್ ಅಂದು ನಡೆಸಿದ ಮೊದಲ ವಿಮಾನ ಹಾರಾಟದಂತೆಯೇ ಇಂದು ನಡೆದ (ಏಪ್ರಿಲ್ 19, 2021) ಮತ್ತೊಂದು ಚಾರಿತ್ರಿಕ ಘಟನೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇದು ನಡೆಯುತ್ತಿರುವುದು ಭೂಮಿಯ ಮೇಲೆ ಅಲ್ಲ, ಬದಲಾಗಿ ಭೂಮಿಯಿಂದ ಸುಮಾರು 48 ಕೋಟಿ ಕಿಲೋಮೀಟರ್ ದೂರದಲ್ಲಿರುವ ಮಂಗಳ ಗ್ರಹದ ಮೇಲೆ.

ನಾಸಾ ಬಾಹ್ಯಾಕಾಶ ಸಂಸ್ಥೆಯು ಜುಲೈ 30, 2020ರಂದು ಅಟ್ಲಾಸ್ ವಿ 541 ರಾಕೆಟ್‌ನಲ್ಲಿ ಪರ್ಸಿವರೆನ್ಸ್ ಎಂಬ ರೋವರ್‌ಅನ್ನು ಮಂಗಳ ಗ್ರಹಕ್ಕೆ ಕಳುಹಿಸಿತು. ಈ ರೋವರ್ ಸುಮಾರು ಏಳು ತಿಂಗಳ ಸಮಯದಲ್ಲಿ, 48 ಕೋಟಿ ಕಿಲೋಮೀಟರ್ ಸಂಚರಿಸಿ ಫೆಬ್ರವರಿ 18, 2021ರಂದು ಸುರಕ್ಷಿತವಾಗಿ ಮಂಗಳನ ಮೇಲೆ ಇಳಿಯಿತು. ಈ ರೋವರ್ ಸುಮಾರು ಒಂದು ಮಂಗಳ-ವರ್ಷಗಳ ಕಾಲ (ಅಂದರೆ 687 ಭೂ ದಿನಗಳು) ಮಂಗಳನ ಮೇಲೆ ತನ್ನಲ್ಲಿರುವ ಏಳು ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಗ್ರಹದ ಅನ್ವೇಷಣೆ ನಡೆಸುತ್ತದೆ.

ಮಾರ್ಸ್ 2020: ಪರ್ಸಿವರೆನ್ಸ್ ರೋವರ್‌ನ ಉದ್ದೇಶವೇನು?

ಮಂಗಳ ಗ್ರಹದ ಮೇಲೆ ಇಳಿದಿರುವ ರೋವರ್‌ಗಳಲ್ಲಿ ಪರ್ಸಿವರೆನ್ಸ್ ರೋವರ್ ಮೊದಲನೆಯ ರೋವರ್ ಏನಲ್ಲ. ಈಗಾಗಲೇ ಹಲವು ರೋವರ್‌ಗಳು ಮಂಗಳ ಗ್ರಹದಲ್ಲಿ ಅನ್ವೇಷಣೆ ಕೈಗೊಂಡಿವೆ. ಈ ಎಲ್ಲಾ ರೋವರ್‌ಗಳಿಂದ ಬಂದ ಮಾಹಿತಿಯ ಪ್ರಕಾರ ಮಂಗಳ ಗ್ರಹದಲ್ಲಿ ಜೀವಿಗಳು ಹಿಂದೆಂದೋ ಇದ್ದಿರಬಹುದಾದ ಸಾಧ್ಯತೆ ಹೆಚ್ಚಿದೆ ಎಂದು ಊಹಿಸಲಾಗುತ್ತಿದೆ. ಆದರೆ ಯಾವ ರೋವರ್‌ಗಳು ಮತ್ತು ಮಂಗಳನ ಕಕ್ಷೆಯಲ್ಲಿ ತಿರುಗುತ್ತಿರುವ ಉಪಗ್ರಹಗಳೂ ಆ ಗ್ರಹದಲ್ಲಿ ಜೀವಿಗಳಿರುವುದರ ಬಗ್ಗೆ ಕಂಡುಹಿಡಿದು ಸಾಬೀತುಪಡಿಸಿಲ್ಲ. ಈಗ ಇಳಿದಿರುವ ಪರ್ಸಿವರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಹಿಂದೆಂದೋ ಇದ್ದ ಜೀವಿಗಳು ಹೇಗಿದ್ದಿರಬಹುದು ಎಂಬ ಅಂಶವನ್ನು ಅನ್ವೇಷಣೆ ಮಾಡಲು ಹೊರಟಿದೆ.

ಜೀವಿಗಳೆಂದರೆ, ಮನುಷ್ಯನ ಗಾತ್ರಕ್ಕೆ ಅಥವಾ ಇನ್ಯಾವುದೋ ಪ್ರಾಣಿಯ ಗಾತ್ರಕ್ಕೆ ಹೋಲುವ ಜೀವಿಗಳಲ್ಲ. ಪರ್ಸಿವರೆನ್ಸ್ ಹುಡುಕಲು ಹೊರಟಿರುವುದು ಸೂಕ್ಷ್ಮಜೀವಿಗಳನ್ನು (Micriobial Life). ಈ ಜೀವಿಗಳನ್ನು ಹುಡುಕಲು ಮಂಗಳನಲ್ಲಿ ಜೆಝೀರೋ ಕುಳಿಯನ್ನು (Jezero Crator) ಆಯ್ಕೆ ಮಾಡಿಕೊಳ್ಳಲಾಗಿದೆ. ಯಾಕೆ ಈ ಜೆಝೀರೋ ಕುಳಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರೆ, ಈ ಹಿಂದಿನ ಮಂಗಳನ ಭೂ ಪ್ರದೇಶಗಳ ಅನ್ವೇಷಣೆಯ ಪ್ರಕಾರ ಜೆಝೀರೋ ಕುಳಿಯಲ್ಲಿ ನೀರು ತುಂಬಿಕೊಳ್ಳುತ್ತಿದ್ದ ಸಾಧ್ಯತೆ ಹೆಚ್ಚಿದ್ದು, ಈ ನೀರಿನಲ್ಲಿ ಸೂಕ್ಷ್ಮಜೀವಿಗಳು ಜೀವಿಸಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಪರ್ಸಿವರೆನ್ಸ್ ತನ್ನ ಉಪಕರಣಗಳಲ್ಲಿ ಒಂದಾದ ಡ್ರಿಲ್ಲಿಂಗ್ ಮೆಷಿನ್ ಸಹಾಯದಿಂದ ಟ್ಯೂಬ್ ಆಕಾರದಲ್ಲಿ ಮಣ್ಣಿನ ಮಾದರಿಯನ್ನು ತೆಗೆದು, ಒಂದು ಟ್ಯೂಬ್‌ನಲ್ಲಿ ತುಂಬಿ, ತನ್ನಲ್ಲಿರುವ ಮತ್ತೆ ಕೆಲವು ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಅದನ್ನು ಪರೀಕ್ಷೆ ಮಾಡಿ ಡೇಟಾವನ್ನು ಭೂಮಿಗೆ ರವಾನಿಸುತ್ತದೆ. ಅಲ್ಲದೆ, ಜೆಝೀರೋ ಕುಳಿಯ ಸುತ್ತಮುತ್ತ ಇಂತಹ ಹಲವು ಮಣ್ಣಿನ ಮಾದರಿಗಳನ್ನು ತೆಗೆದು, ಪರೀಕ್ಷಿಸಿ, ಎಲ್ಲಾ ಟ್ಯೂಬ್‌ಗಳನ್ನು ಒಂದು ಕಡೆ ಗುಡ್ಡೆಹಾಕುತ್ತದೆ. ಮುಂದಿನ ಹತ್ತು ವರ್ಷದಲ್ಲಿ ಮಂಗಳ ಗ್ರಹಕ್ಕೆ ತೆರಳುವ ಮತ್ತೊಂದು ರೋವರ್, ಪರ್ಸಿವರೆನ್ಸ್ ಸಂಗ್ರಹಿಸಿ ಗುಡ್ಡೆ ಮಾಡಿದ ಮಣ್ಣಿನ ಟ್ಯೂಬ್‌ಗಳನ್ನು ಎತ್ತಿಕೊಂಡು ಭೂಮಿಗೆ ಮರಳುತ್ತದೆ. ನಂತರ ಭೂಮಿಯಲ್ಲಿ ಮಂಗಳನ ಮಣ್ಣಿನ ಪೂರ್ಣ ಪ್ರಮಾಣದ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದಕ್ಕೆ ಸುಮಾರು 10 ವರ್ಷಗಳ ಕಾಲಾವಕಾಶ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.

PC : Science News

ಚಂದ್ರನ ನಂತರ ಅತಿ ಹೆಚ್ಚು ಬಾಹ್ಯಾಕಾಶ ಎಕ್ಸಪ್ಲೋರೇಷನ್ ಕೈಗೊಂಡ ಸೌರಮಂಡಲದ ಗ್ರಹ ಎಂದರೆ ಅದು ಮಂಗಳ ಗ್ರಹ. ಮನುಷ್ಯನಿಗೆ ಚಂದ್ರನಲ್ಲಿ ಒಂದು ನಿಲ್ದಾಣ ಮಾಡಿ, ಅಲ್ಲಿಂದ ಮಂಗಳ ಗ್ರಹಕ್ಕೆ ಬಾಹ್ಯಾಕಾಶಯಾನ ಕೈಗೊಳ್ಳುವ ಕನಸು. ಈ ಕನಸನ್ನು ನನಸು ಮಾಡುವುದಕ್ಕೆ ಪರ್ಸಿವರೆನ್ಸ್ ಹಲವು ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕುತ್ತಿದೆ. ಮಂಗಳ ಗ್ರಹದ ಹವಾಮಾನ, ಭೂಪ್ರದೇಶದ ಮಾಹಿತಿ, ಅಲ್ಲಿರುವ ವಾತಾವರಣದಿಂದ ಆಕ್ಸಿಜನ್ ತಯಾರಿಕೆ ಮತ್ತು ಮಾನವನ ಆಗಮನಕ್ಕೆ ಬೇಕಾಗಬಲ್ಲ ಹಲವು ಮಾಹಿತಿಯನ್ನು ತನ್ನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಅದು ಕಲೆಹಾಕಲಿದೆ.

ಇದರ ಜೊತೆಗೆ ಪರ್ಸಿವರೆನ್ಸ್ ರೋವರ್‌ನ ಹೊಟ್ಟೆಯಲ್ಲಿ 1.8 ಕಿಲೋಗ್ರಾಂ ತೂಕದ ಸಣ್ಣ ಮಾರ್ಸ್ ಹೆಲಿಕಾಪ್ಟರ್ ಒಂದಿದೆ. ಇದನ್ನು ಇಂಜಿನ್ಯುಟಿ (Ingenuity) ಎಂದು ಕರೆಯಲಾಗಿದೆ. ಈ ಹೆಲಿಕಾಪ್ಟರ್‌ನಲ್ಲಿ ಕ್ಯಾಮರಾ, ಸಂವೇದಕಗಳು (sensors) ಮತ್ತು ಬ್ಯಾಟರಿಯನ್ನು ಹೊರತುಪಡಿಸಿ ಯಾವ ವೈಜ್ಞಾನಿಕ ಉಪಕರಣವೂ ಇಲ್ಲ. ಇದು ಸಾಮಾನ್ಯವಾಗಿ ಅಂಗಡಿಯಲ್ಲಿ ಸಿಗುವ ರಿಮೋಟ್ ಕಂಟ್ರೋಲ್ ಹೆಲಿಕಾಪ್ಟರ್ ಮಾದರಿಯಲ್ಲೇ ಇದೆ. ಆದರೆ ಇದು ಹಾರುವುದು ಮಾತ್ರ ಮಂಗಳ ಗ್ರಹದಲ್ಲಿ! ಇದೇ ಪ್ರಥಮ ಬಾರಿಗೆ ಅನ್ಯಗ್ರಹದಲ್ಲಿ ವೈಮಾನಿಕ ಸಂಚಾರ ನಡೆಸಲು ಅನುವಾಗುವಂತೆ ಪ್ರಾಯೋಗಿಕವಾಗಿ ಈ ಪುಟ್ಟ ಹೆಲಿಕಾಪ್ಟರ್‌ಅನ್ನು ನಾಸಾ ಮಂಗಳ ಗ್ರಹದಲ್ಲಿ ಹಾರಿಸಿದ್ದು, ಈ ಪ್ರಯೋಗ ಒಂದು ತಂತ್ರಜ್ಞಾನ ಪ್ರದರ್ಶನವಾಗಿದೆ (Technology Demonstration).

ಮಂಗಳ ಗ್ರಹದಲ್ಲಿ ಇಂತಹ ಸಣ್ಣ ಹೆಲಿಕಾಪ್ಟ್‌ರ್ ಹಾರಿಸಲು ಇಷ್ಟು ಕಷ್ಟಾನಾ?

ವಿಮಾನ ಅಥವಾ ಹೆಲಿಕಾಪ್ಟರ್ ಹಾರಿಸಬೇಕಾದರೆ, ಭೂಮಿಯ ವಾತಾವರಣದ ಸಾಂದ್ರತೆ ಎಷ್ಟಿದೆ ಎಂದು ತಿಳಿದು, ಹೆಲಿಕಾಪ್ಟರ್ ಆಗಿದ್ದರೆ ಅದರ ಬ್ಲೇಡ್‌ಗಳನ್ನು ಎಷ್ಟು ವೇಗವಾಗಿ ತಿರುಗಿಸಬೇಕು, ವಿಮಾನವಾಗಿದ್ದರೆ, ಟೇಕ್ ಆಫ್ ಮಾಡಲು ಎಷ್ಟು ವೇಗವಾಗಿ ಚಲಿಸಬೇಕು ಎಂದು ಲೆಕ್ಕ ಹಾಕಿ ಹಾರಿಸಲಾಗುತ್ತಿದೆ. ಇದೇ ರೀತಿ ಮಂಗಳ ಗ್ರಹಕ್ಕೂ ಮಾಡಲಾಗುತ್ತದೆ. ಮಂಗಳ ಗ್ರಹದ ವಾತಾವರಣದ ಸಾಂದ್ರತೆ ಭೂಮಿಯ ಶೇಕಡ ಒಂದರಷ್ಟು ಇರುವುದರಿಂದ ಹೆಲಿಕಾಪ್ಟರ್ ಅಥವಾ ವಿಮಾನವನ್ನು ಇಂತಹ ತೆಳುವಾದ ವಾತಾವರಣದಲ್ಲಿ ಹಾರಿಸುವುದು ಅತ್ಯಂತ ಕಷ್ಟಕರವಾದದ್ದು.

ಮಂಗಳ ಗ್ರಹದ ತೆಳುವಾದ ವಾತಾವರಣದಲ್ಲಿ ಹೆಲಿಕಾಪ್ಟರ್ ಹಾರಬೇಕಾದರೆ, ಅದರ ಬ್ಲೇಡ್‌ಗಳು ಒಂದು ನಿಮಿಷಕ್ಕೆ ಕನಿಷ್ಟ ಅಂದರೂ 25,000 ಬಾರಿ ತಿರುಗಬೇಕು. ಭೂಮಿಯಲ್ಲಿ ಈ ಸಂಖ್ಯೆ ಕೇವಲ 500 ರಿಂದ 600! ಇದು ಅತ್ಯಂತ ಸವಾಲಿನ ಕೆಲಸ. ತಾಂತ್ರಿಕವಾಗಿಯೂ ಇಂತಹ ಹೆಲಿಕಾಪ್ಟರ್ ಒಂದನ್ನು ಡಿಸೈನ್ ಮಾಡಿ, 48 ಕೋಟಿ ಕಿಲೋಮೀಟರ್ ದೂರದಿಂದ ಕಂಟ್ರೋಲ್ ಮಾಡುವುದು ಇನ್ನೂ ಕಷ್ಟದ ಕೆಲಸ. ಇದೇ ಕಾರಣದಿಂದ ಸತತ ಹತ್ತು ವರ್ಷಗಳ ಪ್ರಯತ್ನದಲ್ಲಿ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೆಟರಿ (Jet Propulsion Laboratory- JPL) ವಿಜ್ಞಾನಿಗಳು, ಇಂಜಿನಿಯರ್‌ಗಳು, ಡಿಸೈನರ್‌ಗಳು ಎಲ್ಲರೂ ಸೇರಿ ಇಂಜಿನ್ಯುಟಿ ಎಂಬ ಪುಟ್ಟ ಹೆಲಿಕಾಪ್ಟರ್ ತಯಾರಿಸಿದರು. ಈ ಹೆಲಿಕಾಪ್ಟರ್ ಅನ್ನು ಪರ್ಸಿವರೆನ್ಸ್ ರೋವರ್ ಮುಖಾಂತರ ಯಾವುದೇ ಅಡೆತಡೆ ಇಲ್ಲದೇ ಮಂಗಳನಲ್ಲಿ ಸುರಕ್ಷಿತವಾಗಿ ತಲುಪಿಸುವುದರಲ್ಲಿ ಈ ವಿಜ್ಞಾನಿಗಳು ಯಶಸ್ವಿಯಾದರು.

ಮಂಗಳ ಗ್ರಹದಲ್ಲಿ ಹಾರಿದ ಇಂಜಿನ್ಯುಟಿ ಹೆಲಿಕಾಪ್ಟರ್

ಪರ್ಸಿವರೆನ್ಸ್ ತನ್ನ ಹೊಟ್ಟೆಯಲ್ಲಿದ್ದ ಇಂಜಿನ್ಯುಟಿ ಹೆಲಿಕಾಪ್ಟರ್‌ಅನ್ನು ಏಪ್ರಿಲ್ 03, 2021ರಂದು ಮಂಗಳನ ಅಂಗಳದ ಮೇಲೆ ಇಳಿಬಿಟ್ಟಿತು. ಇದಾದ ನಂತರ ಇಂಜಿನ್ಯುಟಿಯ ಸವಾಲು ಮಂಗಳನ ಹವಾಮಾನವನ್ನು ಎದುರಿಸುವುದು. ರಾತ್ರಿಯ ಸಮಯದಲ್ಲಿ ’-90 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ಇಳಿಯುವುದರಿಂದ, ಇಂಜಿನ್ಯುಟಿಯ ಉಪಕರಣಗಳು ಹಾಳಾಗದಂತೆ ಡಿಸೈನ್ ಮಾಡುವುದು ಸವಾಲಿನ ಕೆಲಸ. ನಾಸಾದ ಜೆಪಿಎಲ್ ವಿಜ್ಞಾನಿಗಳು ಇಂಜಿನ್ಯುಟಿಯನ್ನು ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವಂತೆ ಡಿಸೈನ್ ಮಾಡಿದ್ದರು. ತದನಂತರ ಇಂಜಿನ್ಯುಟಿ ಹೆಲಿಕಾಪ್ಟರ್‌ಗೆ ಏಪ್ರಿಲ್ 19ರಂದು ಸ್ವಯಂಚಾಲಿತವಾಗಿ ನಿರ್ದಿಷ್ಟ ಎತ್ತರಕ್ಕೆ ಹಾರಿ ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ಸಿದ್ಧಪಡಿಸಿದ್ದ ಕೋಡೆಡ್ ಮಾಹಿತಿಯನ್ನು ಡೀಪ್ ಸ್ಪೇಸ್ ನೆಟ್‌ವರ್ಕ್ ಆಂಟೆನಾ ಸಹಾಯದಿಂದ ವಿಜ್ಞಾನಿಗಳು ಕಳುಹಿಸಿದ್ದರು. ಈ ಘಟನೆಯನ್ನು ಅಲ್ಲೆ ದೂರದಲ್ಲಿದ್ದ ಪರ್ಸಿವರೆನ್ಸ್ ರೋವರ್ ತನ್ನ ಕ್ಯಾಮರಾದಿಂದ ವೀಕ್ಷಣೆ ಮಾಡುವ ವ್ಯವಸ್ಥೆ ರೂಪಿಸಲಾಗಿತ್ತು. ಈ ಎಲ್ಲಾ ಘಟನೆಗಳೂ ಸ್ವಯಂಚಾಲಿತವಾಗಿ ನಡೆದು, ಘಟನೆಯ ಪ್ರತಿಯೊಂದು ಡೇಟಾ, ವಿಡಿಯೋಗಳು ರೆಕಾರ್ಡ್ ಆಗಿ ಭೂಮಿಗೆ ಬರಲು ಸುಮಾರು ನಾಲ್ಕು ಗಂಟೆಯ ಸಮಯ ತೆಗೆದುಕೊಂಡಿತು. ಇಂಜಿನ್ಯುಟಿಯಿಂದ ಯಾವ ಡೇಟಾ ಬರಬಹುದು, ಫಲಿತಾಂಶ ಏನಿರಬಹುದೆಂದು ವಿಜ್ಞಾನಿಗಳು ಕಾದುಕುಳಿತರು.

PC : sciencesprngs – WorldPress.com

ಅದೇ ದಿನ ಭಾರತೀಯ ಕಾಲಮಾನದ ಸಮಯ ಸಂಜೆ ನಾಲ್ಕ ಗಂಟೆಯ ಸುಮಾರಿಗೆ ಇಂಜಿನ್ಯುಟಿಯಿಂದ ಡೇಟಾ ಅದೇ ಡೀಪ್ ಸ್ಪೇಸ್ ನೆಟ್‌ವರ್ಕ್ ಆಂಟೆನಾದಿಂದ ಭೂಮಿಗೆ ಬಂದಿತು. ಪರ್ಸಿವರೆನ್ಸ್ ರೋವರ್ ಇಂಜಿನ್ಯುಟಿಯು ಮಂಗಳನ ಮೇಲ್ಮೈನಿಂದ 3 ಮೀಟರ್ ಮೇಲಕ್ಕೆ ಹಾರಿ, ಸ್ವಲ್ಪ ಹೊತ್ತು ಗಾಳಿಯಲ್ಲಿದ್ದು ನಂತರ ನೆಲಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದನ್ನು ತಾನು ತೆಗೆದಿದ್ದ ವಿಡಿಯೋ ಮುಖಾಂತರ ದೃಢಿಕರಿಸಿತು. ಜೆಪಿಎಲ್ ಕೊಠಡಿಯಲ್ಲಿ ಉಸಿರು ಬಿಗಿಹಿಡಿದು ಕಾಯುತ್ತಿದ್ದ ವಿಜ್ಞಾನಿಗಳಿಗೆ ಒಮ್ಮೆಲೆ ಉತ್ಸಾಹ ಮತ್ತು ಸಂತೋಷದ ಕಟ್ಟೆಯೊಡೆಯಿತು. ಮಾನವನ ಇತಿಹಾಸದಲ್ಲಿಯೇ ಅನ್ಯಗ್ರಹದಲ್ಲಿ ನಿಯಂತ್ರಿತ ವೈಮಾನಿಕ ಹಾರಾಟ ನಡೆಸಿರುವುದು ಇದೇ ಮೊದಲನೆಯ ಬಾರಿ.

ಸದ್ಯಕ್ಕೆ ಈ ಹಾರಾಟ ಚಿಕ್ಕದಾದರೂ ಮುಂದಿನ ವರ್ಷದಲ್ಲಿ ಇತರ ಗ್ರಹಗಳ ಮೇಲೂ ಹಾರಲು ಯೋಗ್ಯವಾದ ಹೆಲಿಕಾಪ್ಟರ್ ಮತ್ತು ವಿಮಾನಗಳನ್ನು ತಯಾರಿಸುವುದಕ್ಕೆ ಇಟ್ಟ ಮೊದಲ ಚಾರಿತ್ರಿಕ ಹೆಜ್ಜೆಗೆ ನಾವೆಲ್ಲರೂ ಸಾಕ್ಷಿಯಾಗಿರುವುದಂತೂ ಸತ್ಯ. ಮುಂದಿನ ಒಂದು ತಿಂಗಳಿನಲ್ಲಿ ಇಂಜಿನ್ಯುಟಿ ಇಂತಹ ಐದು ವೈಮಾನಿಕ ಹಾರಾಟ ನಡೆಸಲು ಅನುವಾಗುವಂತೆ ಸಿದ್ಧಪಡಿಸಲಾಗಿದೆ. ಇದು ಮಂಗಳ ಗ್ರಹದ ತೆಳುವಾದ ವಾತಾವರಣದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನಮಗೆ ನೀಡಲಿದೆ.

ಇಂಜಿನ್ಯುಟಿ (Ingenuity) ಎಂದರೆ ಕೆಲಸಗಳನ್ನು ಕೌಶಲ್ಯದಿಂದ ಹೊಸರೀತಿಯಲ್ಲಿ ಮಾಡುವುದು. ಹಾಗೆಯೇ ಮಂಗಳನಲ್ಲಿರುವ ಇಂಜಿನ್ಯುಟಿ, ನಮ್ಮಲ್ಲಿ ಹೊಸ ಯೋಚನೆಗಳನ್ನು, ಹೊಸ ಪ್ರಶ್ನೆಗಳನ್ನು, ಹೊಸ ವಿಚಾರಗಳನ್ನು ಕಲಿಯಲು ಪ್ರೇರೇಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮನುಷ್ಯನು ಮಂಗಳ ಗ್ರಹಕ್ಕೆ ತೆರಳುವ ಕನಸುಗಳನ್ನು ನನಸು ಮಾಡಲು ಮೊದಲ ಅಂಬೆಗಾಲಿಟ್ಟಿರುವುದಂತೂ ನಿಜ.
ವಿಡಿಯೋ ಲಿಂಕ್ 
ಲೈವ್‌ಸ್ಟ್ರೀಮ್ ವಿಡಿಯೋ ಲಿಂಕ್

ಇದನ್ನೂ ಓದಿ: ಮಂಗಳ ಗ್ರಹದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್‌ ಹಾರಿಸಿದ ನಾಸಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...