ಸಂಸತ್ತಿನ ಭಾರೀ ಭದ್ರತೆಯನ್ನು ಬೇದಿಸಿ, ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗ ಸದನದೊಳಗೆ ಜಿಗಿದು ಆತಂಕ ಸೃಷ್ಠಿಸಿದ್ದ ಇಬ್ಬರು ಯುವಕರಲ್ಲಿ ಒಬ್ಬನಾಗಿರುವ ಮನೋರಂಜನ್ ಅಪ್ಪಟ ನರೇಂದ್ರ ಮೋದಿ ಅಭಿಮಾನಿ ಎಂದು ಖುದ್ದು ಆತನ ತಂದೆ ದೇವರಾಜ್ ಗೌಡ ಹೇಳಿದ್ದಾರೆ.
ಘಟನೆ ನಂತರ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ‘ಪ್ರಧಾನಿಯವರ ಬಗ್ಗೆ ನನ್ನ ಮಗನಿಗೆ ಬಹಳ ಗೌರವ, ಒಳ್ಳೆಯ ಅಭಿಪ್ರಾಯ ಇತ್ತು. ಅಂಥಹ ಪ್ರಧಾನಿ ಸಿಕ್ಕಿರುವುದು ನಮಗೆ ಅದೃಷ್ಟ ಎನ್ನುತ್ತಿದ್ದ. ರಾಜಕೀಯ ಎಲ್ಲ ಬೇಡ ಎಂದು ಮಗನಿಗೆ ಹೇಳಿದ್ದೆ. ನಮ್ಮ ಕುಟುಂಬದ ಹಲವು ಮಂದಿ ರಾಜಕೀಯದಲ್ಲಿದ್ದರು’ ಎಂದು ಹೇಳಿದರು.
‘ಪ್ರತಾಪ್ ಸಿಂಹ ಅವರಿಗೆ ನಾವು ವೋಟ್ ಹಾಕುತ್ತೇವೆ, ನಮ್ಮ ಹೆಸರೇಳಿದ್ದಕ್ಕೆ ಅವರು ಪಾಸ್ ಕೊಟ್ಟಿರಬಹುದು, ಪಾಸ್ ಕೊಟ್ಟಿದ್ದರೆ ಅದನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಬೇಕಲ್ಲವೇ? ಪ್ರತಾಪ್ ಸಿಂಹ ಅವರನ್ನು ಎಂಪಿ ಮಾಡಿದ್ದೆ ನಾವು. ಈಗಲೂ ನಾವು ಅವರಿಗೇ ವೋಟ್ ಹಾಕುತ್ತೇವೆ. ಆದರೆ, ನನ್ನ ಮಗ ಮಾಡಿದ್ದು ತಪ್ಪು’ ಎಂದರು.
‘ಮಗ ಎಲ್ಲಿಗೆ ಓದರೂ, ಏನೇ ಮಾಡಿದರೂ ಮೂರೇ ದಿನಕ್ಕೆ ಮನೆಗೆ ಬರುತ್ತಿದ್ದ; ಆತನಿಗೆ ಯಾವುದೆ ಕೆಟ್ಟ ಚಟ ಇಲ್ಲ. ಪೋಷಕರು ಮಕ್ಕಳಿಗೆ ಒಳ್ಳೆಯದನ್ನೆ ಬಯಸುತ್ತಾರೆ. ನಾವೂ ಅದನ್ನೇ ಮಾಡಿದ್ದೇವೆ’ ಎಂದು ಹೇಳಿದರು.
‘ನನ್ನ ಮಗ ಕೆಟ್ಟದ್ದು ಮಾಡಿದ್ದರೆ ಅವನನ್ನು ಗಲ್ಲಿಗೇರಿಸಲಿ. ಸಮಾಜಕ್ಕೆ ಅನ್ಯಾಯ ಮಾಡಿದರೆ ಅವನು ನನ್ನ ಮಗನೇ ಅಲ್ಲ. ಅವನು ಕೆಟ್ಟ ಕೆಲಸ ಮಾಡುವವನಲ್ಲ; ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂಬ ಕಾರಣಕ್ಕೆ ಅವನು ಒಂದು ಸಂಘಟನೆಯಲ್ಲಿದ್ದ. ನಾನು ಇದೆಲ್ಲಾ ಬೇಡ ಎಂದು ಬುದ್ಧಿ ಹೇಳಿದ್ದೆ. ಆದರೆ, ಅವನ ಅತಿಯಾದ ವಿದ್ಯಾಭ್ಯಾಸ ಹಾಗೂ ಓದು ಅವನಿಗೆ ಮುಳುವಾಗಿದೆ. ಇಂದು ನನ್ನ ಮಗ ಮಾಡಿರುವ ಕೆಲಸವನ್ನು ಯಾರೇ ಮಾಡಿದ್ದರೂ ಅವರನ್ನು ಗಲ್ಲಿಗೇರಿಸಬೇಕು’ ಎಂದರು.
‘ನನ್ನ ಮಗ ವಿದ್ಯಾಭ್ಯಾಸ ಮಾಡಿದ್ದು ಮೈಸೂರಿನಲ್ಲೆ, ಸೆಂಟ್ ಜೋಸೆಫ್ ಶಾಲೆಯಲ್ಲಿ ಓದಿಕೊಂಡಿದ್ದಾನೆ. ನಾವು ಮೂಲತಃ ಹಾಸನ ಜಿಲ್ಲೆ ಅರಕಲಗೂಡಿನವರಾಗಿದ್ದು, ನಮ್ಮದು ಕೃಷಿಕ ಕುಟುಂಬ. ಮಗನ ವಿದ್ಯಾಭ್ಯಾಕ್ಕಾಗಿ ನಾವು 15 ವರ್ಷಗಳ ಹಿಂದೆ ಮೈಸೂರಿಗೆ ಬಂದೆವು. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಅವನಿಗೆ ದೇವೇಗೌಡರು ಇಂಜಿನಿಯರಿಂಗ್ ಸೀಟು ಕೊಡಿಸಿದ್ದರು. ಅವನಿಗೋಸ್ಕರ ಕುರಿ ಸಾಗಾಣಿಕೆ ಹಾಗೂ ಕೋಳಿ ಸಾಗಾಣಿಕೆ ಮಾಡಿಕೊಟ್ಟಿದ್ದೇವೆ. ಮನೆ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಬೆಂಗಳೂರಿ ಹೋಗಿ ಬರುತ್ತಿದ್ದ. ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದಿಕೊಂಡಿದ್ದ, 35 ವರ್ಷ ಆದರೂ ಆತ ಇನ್ನೂ ಮದುವೆ ಆಗಿರಲಿಲ್ಲ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ; ಲೋಕಸಭೆ ಭದ್ರತಾ ಲೋಪ; ಸಂಸದ ಪ್ರತಾಪ್ ಸಿಂಹರನ್ನು ವಿಚಾರಣೆಗೆ ಒಳಪಡಿಸಬೇಕು: ಸಿಎಂ