“ನನ್ನ ಮಗಳು ಹಾದಿಯಾಳನ್ನು ಆಕೆಯ ಪತಿ ಶಫಿನ್ ಜಹಾನ್ ಮತ್ತು ಇತರರು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ” ಎಂದು ಆರೋಪಿಸಿ ಹಾದಿಯಾ ತಂದೆ ಅಶೋಕನ್ ನೀಡಿದ ದೂರಿನ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಒದಗಿಸುವಂತೆ ಅಡ್ವೊಕೇಟ್ ಜನರಲ್ ಅವರಿಗೆ ಕೇರಳ ಹೈಕೋರ್ಟ್ ಆದೇಶಿಸಿದೆ ಎಂದು Bar and Bench ವರದಿ ಮಾಡಿದೆ.
ಅಶೋಕನ್ ಅವರು ಇನ್ಸ್ಪೆಕ್ಟರ್ ಜನರಲ್ಗೆ ದೂರು ಸಲ್ಲಿಸಿದ ನಂತರ ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ವಿವರಗಳನ್ನು ಪಡೆಯುವಂತೆ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಸಿ ಪ್ರದೀಪ್ ಕುಮಾರ್ ಅವರ ವಿಭಾಗೀಯ ಪೀಠವು ರಾಜ್ಯ ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ.
“ಕಳೆದ ಒಂದು ತಿಂಗಳಿನಿಂದ ನನ್ನ ಮಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಆಕೆ ಮಲಪ್ಪುರಂನಲ್ಲಿ ನಡೆಸುತ್ತಿದ್ದ ಹೊಮಿಯೋ ಕ್ಲೀನಿಕ್ ಕೂಡ ಬಾಗಿಲು ಮುಚ್ಚಿದೆ”. ಹಾಗಾಗಿ ಆಕೆಯನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಹೇಬಿಯಸ್ ಕಾರ್ಪಸ್ ರಿಟ್ ಹೊರಡಿಸಲು ಅಶೋಕನ್ ಕೋರಿದ್ದಾರೆ.
ತನ್ನ ದೂರಿನಲ್ಲಿ, “ಹಾದಿಯಾ ಮತ್ತು ಶಫಿನ್ ಜಹಾನ್ ಮದುವೆ ಕೇವಲ ಕಾಗದದಲ್ಲಿ ಮಾತ್ರ ಇತ್ತು. ಅವರ ನಡುವೆ ಯಾವುದೇ ವೈವಾಹಿಕ ಸಂಬಂಧವಿರಲಿಲ್ಲ. ವೈದ್ಯೆಯಾಗಿದ್ದ ಹಾದಿಯಾ ನಡೆಸುತ್ತಿದ್ದ ಕ್ಲೀನಿಕ್ ಕೂಡ ಮುಚ್ಚಲಾಗಿದೆ. ಆಕೆ, ಮಾನಸಿಕ ಮತ್ತು ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದಳು” ಎಂದು ಅಶೋಕನ್ ಹೇಳಿದ್ದಾರೆ.
ಯಾರು ಈ ಹಾದಿಯಾ?
2016ರಲ್ಲಿ ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಹಿಂದೂ ಹುಡುಗಿ ಹಾದಿಯಾ(ಅಖಿಲಾ ಅಶೋಕ್), ಶಫೀನ್ ಜಹಾನ್ ಎಂಬಾತನ್ನು ಪ್ರೀತಿಸಿ, ಇಸ್ಲಾಮ್ಗೆ ಮತಾಂತರಗೊಂಡು ಮದುವೆಯಾಗಿದ್ದರು. ಹಾದಿಯಾಳ ಪೋಷಕರು ಇದೊಂದು ‘ಲವ್ ಜಿಹಾದ್ ಕೇಸ್’ ಎಂದು ಆರೋಪಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಹಾದಿಯಾಳ ವಿವಾಹವನ್ನು ಅಮಾನ್ಯಗೊಳಿಸಿ ಆಕೆಯನ್ನು ಪೋಷಕರ ಸುಪರ್ದಿಗೆ ಒಪ್ಪಿಸಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಹಾದಿಯಾ ಪತಿ ಶಫೀನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಮೂಲಕ ಈ ಪ್ರಕರಣ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಹಾದಿಯಾ ಮತ್ತು ಆಕೆಯ ಪತಿಯ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅವರ ಮದುವೆಯನ್ನು ಊರ್ಜಿತಗೊಳಿಸಿತ್ತು. ಹಾದಿಯಾಗೆ ಆಕೆಯ ಇಚ್ಚೆಯಂತೆ ಬಾಳಬಹುದು ಎಂದಿತ್ತು.
ಪತಿಗೆ ವಿಚ್ಚೇದನ ಕೊಟ್ಟು ಎರಡನೇ ಮದುವೆಯಾದ ಹಾದಿಯಾ?
ಕಳೆದ ಕೆಲ ದಿನಗಳ ಹಿಂದೆ ತನ್ನ ಪತಿ ಶಫೀನ್ ಜಹಾನ್ಗೆ ವಿಚ್ಚೇದನ ಕೊಟ್ಟು ಹಾದಿಯಾ ಮುಸ್ಲಿಂ ವ್ಯಕ್ತಿಯನ್ನೇ ಎರಡನೇ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಮಗಳು ನಾಪತ್ತೆಯಾಗಿದ್ದಾಳೆ. ಆಕೆಯನ್ನು ಪತಿ ಶಫೀನ್ ಜಹಾನ್ ಮತ್ತು ಇತರರು ಬಂಧಿಸಿಟ್ಟಿದ್ದಾರೆ ಎಂದು ತಂದೆ ಅಶೋಕನ್ ದೂರು ನೀಡಿದ್ದಾರೆ. ಹಾದಿಯಾಳ ಎರಡನೇ ಮದುವೆ ಕುರಿತು ಖಚಿತ ಮಾಹಿತಿ ದೊರೆತಿಲ್ಲ.
ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ: ಜಯಸುಖ್ ಪಟೇಲ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್