ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಚಕ್ರವರ್ತಿ ಸೂಲಿಬೆಲೆ ಆಹ್ವಾನಿಸಿ ವಿವಾದಕ್ಕೆ ಕಾರಣವಾಗಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಮತ್ತೊಂದು ವಿವಾದಕ್ಕೆ ಆಹ್ವಾನ ನೀಡಿದ್ದಾರೆ.
“ಜೂ. 12ರಿಂದ ಆರಂಭವಾಗಲಿರುವ ಗ್ರೀಷ್ಮ ರಂಗಾಯಣೋತ್ಸವದಲ್ಲಿ ಬೇಕಂತಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಚರ್ಚೆ ಇಟ್ಟಿದ್ದೇವೆ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಾಟಕೋತ್ಸವದ ಕುರಿತು ಮಾಹಿತಿ ನೀಡಲು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. “ಗ್ರೀಷ್ಮ ರಂಗಾಯಣೋತ್ಸವದಲ್ಲಿ ಆರ್ಎಸ್ಎಸ್ ಕುರಿತಾದ ಚರ್ಚೆ ಅಗತ್ಯವಿತ್ತೇ? ರಂಗಾಯಣಕ್ಕೂ ಸಂಘ ಪರಿವಾರಕ್ಕೂ ಏನು ಸಂಬಂಧ?” ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಪ್ರಸ್ತುತ ರಾಜ್ಯದಲ್ಲಿ ಸಂಘ ಪರಿವಾರದ ಕುರಿತು ಚರ್ಚೆಯಾಗುತ್ತಿದೆ. ಅದರ ಬಗ್ಗೆ ತಿಳಿಯಲೆಂದು ವಿಚಾರ ಪ್ರಸ್ತಾಪ ಮಾಡಿದ್ದೇವೆ” ಎಂದು ಅಡ್ಡಂಡ ಕಾರ್ಯಪ್ಪ ಸಮರ್ಥಿಸಿಕೊಂಡಿದ್ದಾರೆ.
“ವಿವಾದ ಬೆಳೆಸಲೆಂದು ಈ ವಿಚಾರವನ್ನು ತರಲಾಗಿದೆಯೇ?” ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, “ವಿವಾದವಿಲ್ಲದೇ ಏನಾದರೂ ಸಾಧ್ಯವಾಗುತ್ತದೆಯೇ? 32 ವರ್ಷಗಳಿಂದ ರಂಗಾಯಣದಲ್ಲಿ ಏನು ಚರ್ಚೆ ನಡೆದಿದೆ ನಿಮಗೂ ಗೊತ್ತಿದೆ. ಆರ್ಎಸ್ಎಸ್ ಕುರಿತು ಚರ್ಚೆಯಾದರೇ ತಪ್ಪೇನು?” ಎಂದು ಪ್ರಶ್ನಿಸಿದ್ದಾರೆ.
“ಆರ್ಎಸ್ಎಸ್ ಪ್ರಾಂತೀಯ ಸರ ಸಂಚಾಲಕರಾದ ಮಾ.ವೆಂಕಟರಾಮ್ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಾನೇಕೆ ಆರ್ಎಸ್ಎಸ್ನಲ್ಲಿ ಇದ್ದೇನೆ ಎಂಬ ವಿಷಯದ ಕುರಿತು ಮಾತಾಡಲಿದ್ದಾರೆ. ಸಂವಾದದ ವೇಳೆ ಅವರಿಗೆ ಪ್ರಶ್ನೆ ಕೇಳಬಹುದು. ಚರ್ಚೆಯಾದರೇ ತಪ್ಪೇನು? ರಂಗಾಯಣದಲ್ಲಿ ಒಂದೇ ವಿಚಾರ ಚರ್ಚೆಯಾಗಬೇಕೆ?” ಎಂದೂ ಪ್ರತಿಕ್ರಿಯಿಸಿದ್ದಾರೆ.
ಏನಿದು ಗ್ರೀಷ್ಮ ರಂಗೋತ್ಸವ?
“ರಂಗಾಯಣ ಮೈಸೂರು ತನ್ನ ಚಟುವಟಿಕೆಯನ್ನು ನಿರಂತರಗೊಳಿಸಲು ಸದಾ ಪ್ರಯತ್ನಿಸುತ್ತಿರುತ್ತದೆ. ಮಳೆಗಾಲ ಸಮೀಪಿಸುತ್ತಿದ್ದಂತೆ ಗ್ರೀಷ್ಮ ಋತುವಿನಲ್ಲಿ ರಂಗಾಯಣದಲ್ಲಿ ಈಗಾಗಲೇ ಸಿದ್ಧಪಡಿಸಿ ಪ್ರದರ್ಶನಗೊಂಡಿರುವ ನಾಟಕಗಳ ಹಬ್ಬ ಆಚರಿಸಲು ರ್ನಿರಿಸಲಾಗಿದೆ. ಅದೇ ಗ್ರೀಷ್ಮ ರಂಗಾಯಣೋತ್ಸವ” ಎಂದು ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.
ಇದನ್ನೂ ಓದಿರಿ: ಬಿಬಿಸಿ ಸಂದರ್ಶನದ ವೇಳೆ ಸಿಟ್ಟಿಗೆದ್ದ ಸ್ವಘೋಷಿತ ದೇವಮಾನವ ‘ಜಗ್ಗಿ ವಾಸುದೇವ್’
‘ಭಾರತೀಯ ರಂಗವಿದ್ಯಾಲಯ’ದ 2021-22ನೇ ಸಾಲಿನ ವಿದ್ಯಾರ್ಥಿಗಳ ಪರೀಕ್ಷೆಗಳು ನಡೆದಿದ್ದು, ಒಂದು ವರ್ಷದ ರಂಗಶಿಕ್ಷಣ ಡಿಪ್ಲೊಮಾ ಮುಗಿದಿದೆ. ಎರಡು ಚಾತುರ್ಮಾಸಗಳಲ್ಲಿ ಸಿದ್ಧಪಡಿಸಲಾಗದ ನಾಲ್ಕು ನಾಟಕಗಳಾದ- ‘ಪ್ರಮೀಳಾರ್ಜುನೀಯಂ’, ‘ವಾಸಾಂಸಿ ಜೀರ್ಣಾನಿ’, ‘ಬೆಕ್ಕು ಬಾವಿ’, ‘ವಿದಿಶಾ ಪ್ರಹಸನ’- ಪ್ರದರ್ಶನ ಆಯೋಜಿಸಲಾಗಿದೆ. ಇದರ ಜೊತೆಗೆ ಕಿರಿಯ ರೆಪರ್ಟರಿ ಕಲಾವಿದರಿಂದ- ‘ಕೃಷ್ಣೇಗೌಡನ ಆನೆ’, ‘ಮೂಕನ ಮಕ್ಕಳ’ ನಾಟಕಗಳನ್ನು, ಸಂವಿಧಾನದ ಆಶಯ ತಂಡದಿಂದ- ‘ಸೂತ್ರದಾರ’, ಹಿರಿಯ ರೆಪರ್ಟರಿ ಕಲಾವಿದರಿಂದ ‘ಮಿಸ್ಟರ್ ಬೋಗೀಸ್’ ನಾಟಕ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜೂನ್ 12ರಿಂದ 19ರವರೆಗೆ ‘ಗ್ರೀಷ್ಮ ರಂಗಾಯಣೋತ್ಸವ’ ನಡೆಯಲಿದೆ. ಪ್ರತಿದಿನ ಸಂಜೆ 6.30ಕ್ಕೆ ಭೂಮಿಗೀತದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಇದರ ಜೊತೆಗೆ ಹಬ್ಬದ ಸಂದರ್ಭದಲ್ಲಿ ಪ್ರತಿದಿನ ಸಂಜೆ 4ರಿಂದ 5ರವರೆಗೆ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಕಲಾವಿದರೊಂದಿಗೆ ಸಂವಾದ ಆಯೋಜಿಸಲಾಗಿದೆ. ಜೂನ್ 17ರಂದು ಆರ್ಎಸ್ಎಸ್ ಕುರಿತು ಚರ್ಚೆಯನ್ನು ಬೇಕಂತಲೇ ಆಯೋಜಿಸಿದ್ದೇವೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.