ಬಲಪಂಥೀಯ ಸಂಘಟನೆಗಳು ಮತ್ತು ಅದರ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚಲು (Fact Check) ಸರ್ಕಾರ ಆಯ್ಕೆ ಮಾಡಿರುವ ಮಾಧ್ಯಮ ಸಂಸ್ಥೆಗಳಲ್ಲಿ ಗೌರಿ ಮೀಡಿಯಾ ಕೂಡಾ ಆಯ್ಕೆಯಾಗಿದೆ. ಹಿಂದುತ್ವ ಸಂಘಟನೆಗಳ ಕಾರ್ಯಕರ್ತರಿಂದ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾನು ಗೌರಿ.ಕಾಂ ಮತ್ತು ಏನ್ ಸುದ್ದಿ ಮಾಧ್ಯಮ ಸಂಸ್ಥೆಗಳು ಸರ್ಕಾರದ ನಕಲಿ ಸುದ್ದಿ ವಿರೋಧಿ ಘಟಕವನ್ನು ನಡೆಸಲು ಆಯ್ಕೆಯಾಗಿರುವ ಐದು ಕಂಪನಿಗಳಲ್ಲಿ ಸೇರಿವೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಈ ಸಂಸ್ಥೆಗಳು ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿವೆ.
2024ರ ಲೋಕಸಭೆ ಚುನಾವಣೆ ಮತ್ತು ರಾಜ್ಯದ ಬಲಪಂಥೀಯ ಸಂಘಟನೆಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಜೂನ್ನಲ್ಲೇ ನಕಲಿ ಸುದ್ದಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶಿಸಿದ್ದರು.
ನಕಲಿ ಸುದ್ದಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಕರ್ನಾಟಕ ಮಾಹಿತಿ ಅಸ್ವಸ್ಥತೆ ನಿವಾರಣಾ ಘಟಕ (IDTU) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಈ ಐದು ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ.
ಗೌರಿ ಮೀಡಿಯಾ, ಲಾಜಿಕಲಿ ಇನ್ಫೋ ಮೀಡಿಯಾ ಪ್ರೈವೇಟ್ ಲಿಮಿಟೆಡ್, ಟ್ರೈಲಿಕಾ ಟೆಕ್ನಾಲಜಿ ಲಿಮಿಟೆಡ್, ನ್ಯೂಸ್ಪ್ಲಸ್ ಕಮ್ಯುನಿಕೇಷನ್ಸ್ ಮತ್ತು ಒಡಬ್ಲ್ಯೂ ಡಾಟಾಲೀಡ್ಸ್ ಆಂಟಿ ಫೇಕ್ ನ್ಯೂಸ್ ಯೂನಿಟ್ ಸಂಸ್ಥೆಗಳು ಸುಳ್ಳು ಸುದ್ದಿ ವಿರುದ್ಧ ಕಾರ್ಯಾಚರಣೆ ನಡೆಸಲು ಸರ್ಕಾರದಿಂದ ಅರ್ಹತೆ ಪಡೆದುಕೊಂಡಿವೆ.
ಈ ಫ್ಯಾಕ್ಟ್ ಚೆಕ್ ಸಂಸ್ಥೆಗಳು ಬಲಪಂಥೀಯ ಗುಂಪುಗಳು ಹರಡುವ ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಪತ್ತೆ ಮಾಡಿ ನೈಜತೆಯನ್ನು ಜನರ ಮುಂದಿಡುತ್ತವೆ. ಜನಸಮೂಹದಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಡೇಟಾ ವಿಶ್ಲೇಷಣೆ ಜತೆಗೆ ಕೃತಕ ಬುದ್ಧಿಮತ್ತೆಯಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸುತ್ತದೆ. ಜತೆಗೆ, ಸುಳ್ಳು ಸುದ್ದಿಗಳನ್ನು ಹಿಮ್ಮೆಟ್ಟಿಸಲು ಸುಳ್ಳು ಸುದ್ದಿಗಳ ದುಷ್ಟಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ.
ನಕಲಿ ಸುದ್ದಿಗಳ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರು ಸಂಸ್ಥೆಗಳಿಂದ ಗುಣಮಟ್ಟ ಮತ್ತು ವೇಗವನ್ನು ಸರ್ಕಾರ ಬಯಸುತ್ತದೆ. ಇದು ಸಾರ್ವಜನಿಕ ಹಿತಕ್ಕಾಗಿ ಮಾಡುತ್ತಿರುವ ಕೆಲಸವಾಗಿರುವದರಿಂದ ನಾವು ಏನು ಮಾಡುತ್ತೇವೆ ಎಂಬುದನ್ನು ಜನರಿಗೆ ತಿಳಿಸಬೇಕು. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಇರುತ್ತದೆ. ನಕಲಿ ಸುದ್ದಿಗಳು ಕೆಲವೇ ಗಂಟೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹರಡಬಹುದಾಗಿದ್ದು ಅವರ ವಿರುದ್ಧದ ಕಾರ್ಯಾಚರಣೆ ತ್ವರಿತವಾಗಿರಬೇಕು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ; ಮಹಿಳೆಯರ ಮೇಲೆ ಆ್ಯಸಿಡ್ ದಾಳಿ: ಅಗ್ರಸ್ಥಾನದಲ್ಲಿರುವ ಬೆಂಗಳೂರು