ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ಪಕ್ಷದ ಉನ್ನತ ನಾಯಕರೊಬ್ಬರು ಲೋಕಸಭೆ ಚುನಾವಣೆ ನಂತರ 50 ಜನ ಶಾಸಕರೊಟ್ಟಿಗೆ ಬಿಜೆಪಿ ಸೇರುವ ಬಗ್ಗೆ ಈಗಾಗಲೇ ಕೇಂದ್ರ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ’ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಪರೋಕ್ಷವಾಗಿ ಹೇಳಿದರು. ‘ಕಾಂಗ್ರೆಸ್ನ ನಾಯಕರೊಬ್ಬರು ಕೇಂದ್ರದ ಬಿಜೆಪಿ ಹಿರಿಯ ನಾಯಕರನ್ನು ಸಂಪರ್ಕಿಸಿ 50 ಶಾಸಕರೊಂದಿಗೆ ಬರುವುದಾಗಿ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಲೋಕಸಭಾ ಚುನಾವಣೆಯ ನಂತರ ತಮ್ಮೊಂದಿಗೆ ಸೇರಿಕೊಳ್ಳಲು ನಾಯಕರೊಬ್ಬರು ಕೇಂದ್ರದ ನಾಯಕರ ಬಳಿ ಅರ್ಜಿ ಸಲ್ಲಿಸಿದ್ದಾರೆ. 50 ಅಥವಾ 60 ಶಾಸಕರೊಂದಿಗೆ ಸೇರಲು ಅವರು ಇನ್ನೂ ಆರು ತಿಂಗಳ ಕಾಲ ಸಮಯ ಕೇಳಿದ್ದಾರೆ’ ಎಂದು ಅವರು ಹೇಳಿದರು.
‘ನಾನು 50 ಶಾಸಕರನ್ನು ಕರೆದುಕೊಂಡು ಬರುತ್ತೇನೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಕೇಂದ್ರ ಬಿಜೆಪಿ ನಾಯಕರೊಬ್ಬರ ಬಳಿ ವ್ಯಾಪಾರ ಮಾಡಲು ಹೋಗಿದ್ದರು. ಅವರು ಮಾಡಿರುವ ಅಕ್ರಮಗಳನೆಲ್ಲ ಸರಿಪಡಿಸಿಕೊಳ್ಳಲು ಕೇಂದ್ರದ ಮುಂದೆ ಹೋಗಿದ್ದಾರೆ’ ಎಂದ ಅವರು, ಆ ‘ನಾಯಕ’ ಯಾರು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.
ಬಿಜೆಪಿಗೆ 50-60 ಜನ ಶಾಸಕರನ್ನು ಕರೆದುಕೊಂಡು ಬರ್ತೀನಿ ಎಂದು ಹೈಕಮಾಂಡ್ ನಾಯಕರ ಬಳಿ ಪ್ರಸ್ತಾಪಿಸುವುದಕ್ಕೆ ಒಬ್ಬರು ಹೊಗಿದ್ದರು ಎಂದು ನನಗೆ ಮಾಹಿತಿ ಸಿಕ್ಕಿದೆ. ಚುನಾವಣೆ ನಂತರ ನಾನು ನಿಮ್ಮೊಟ್ಟಿಗೆ ಬರುತ್ತೇನೆ. ಐದಾರು ತಿಂಗಳು ‘ರಿಲೀಫ್’ ಕೊಡಿ ಎಂದು ಕೇಳಿಕೊಂಡಿದ್ದಾರೆ. ಯಾರನ್ನೆಲ್ಲಾ ಮುಂದೆ ಬಿಟ್ಟು ಇದನ್ನೆಲ್ಲಾ ನಡೆಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಲೋಕಸಭಾ ಚುನಾವಣೆ ಮುಂಗಿದ ಬಳಿಕ ಎಲ್ಲವೂ ಗೊತ್ತಾಗಲಿದೆ. ಮಹಾರಾಷ್ಟ್ರದಲ್ಲಿ ಆದಂತೆ ಇಲ್ಲಿಯು ಸಹ ಯಾರಾದರೂ ಒಬ್ಬರು ದಂಗೆ ಏಳಲಿದ್ದಾರೆ. ಈ ದೇಶದಲ್ಲಿ ಇಂದಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದಾಗ ಮುಂದೆ ಏನಾದರೂ ಆಗಬಹುದು. ಇಲ್ಲಿ ಯಾರಿಗೂ ಪ್ರಾಮಾಣಿಕತೆ ಮತ್ತು ನಿಷ್ಠೆ ಎಂಬುದಿಲ್ಲ. ಇವತ್ತು ಇಲ್ಲಿರುತ್ತಾರೆ, ಅನುಕೂಲ ಸಿಕ್ಕರೆ ನಾಳೆ ಇನ್ನೊಂದು ಕಡೆ ಹೋಗುತ್ತಾರೆ. ಹಲವಾರು ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿದೆ’ ಎಂದರು.
ಇದನ್ನೂ ಓದಿ; ಬುಡಕಟ್ಟು ಮುಖಂಡ ವಿಷ್ಣುದೇವ್ ಸಾಯಿ ಛತ್ತೀಸ್ಘಡದ ನೂತನ ಸಿಎಂ