ಬುಡಕಟ್ಟು ಮುಖಂಡ, ಕೇಂದ್ರದ ಮಾಜಿ ಸಚಿವ ವಿಷ್ಣುದೇವ್ ಸಾಯಿ ಅವರು ಛತ್ತೀಸ್ಘಢದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ಹಿರಿಯ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಸಾಯಿ ಆಪ್ತರಾಗಿದ್ದರು.
ಸಾಯಿ ಅವರು ಈ ಹಿಂದೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು; ಹಾಲಿ ವಿಧಾನಸಭಾ ಸದಸ್ಯರಾಗಿದ್ದಾರೆ.
ಇಂದು ನಡೆದ ಛತ್ತೀಸ್ಘಡ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನ ಶಾಸಕಾಂಗ ಪಕ್ಷದ ಸಭೆಗಳು ಇನ್ನೆರಡು ದಿನಗಳಲ್ಲಿ ನಡೆಯಲಿವೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಬುಡಕಟ್ಟು ಜನಾಂಗದ ಮುಖಂಡ, ರಾಜಕೀಯ ಅನುಭವಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಅವರು ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಕಳೆದ ಒಂದು ವಾರದಿಂದ ಮುಂಚೂಣಿಯಲ್ಲಿದ್ದರು. ರಮಣ್ ಸಿಂಗ್ ಮತ್ತು ರೇಣುಕಾ ಸಿಂಗ್ ನಡುವಿನ ಸ್ಪರ್ಧೆಯಲ್ಲಿ ಆದಿವಾಸಿ ಮುಖಂಡನಿಗೆ ಅದೃಷ್ಟ ಒಲಿದುಬಂದಿದೆ.
ವಿಷ್ಣು ದೇವ ಸಾಯಿ ಯಾರು?
ವಿಷ್ಣು ದೇವ್ ಸಾಯಿ ಅವರು 2020 ರಿಂದ 2022 ರವರೆಗೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಜಿತ್ ಜೋಗಿ ನಂತರ ಛತ್ತೀಸ್ಘಢದ ಎರಡನೇ ಬುಡಕಟ್ಟು ಮುಖ್ಯಮಂತ್ರಿಯಾಗುತ್ತಾರೆ. ರಾಯಗಢ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಇವರು, ಪ್ರಧಾನಿ ಮೋದಿಯವರ ಮೊದಲ ಕ್ಯಾಬಿನೆಟ್ನಲ್ಲಿ ರಾಜ್ಯ ಸಚಿವರಾಗಿದ್ದರು. 1990-98ರ ನಡುವೆ ಮಧ್ಯಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು. ರಾಜ್ಯವನ್ನು ಮಧ್ಯಪ್ರದೇಶದಿಂದ ಬೇರ್ಪಡಿಸುವ ಮೊದಲು ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.
कुनकुरी से विधायक एवं राष्ट्रीय कार्यसमिति सदस्य श्री @vishnudsai जी को छत्तीसगढ़ भाजपा विधायक दल का नेता चुना गया। pic.twitter.com/kEKINFZdeG
— BJP Chhattisgarh (@BJP4CGState) December 10, 2023
ಛತ್ತೀಸ್ಘಢದಲ್ಲಿಇತ್ತೀಚೆಗಷ್ಟೇ ಮುಕ್ತಾಯಗೊಂಡ 2023ರ ವಿಧಾನಸಭಾ ಚುನಾವಣೆಯಲ್ಲಿ, ವಿಷ್ಣು ದೇವ್ ಸಾಯಿ ಅವರು ಉತ್ತರ ಛತ್ತೀಸ್ಘಢದ ಕುಂಕುರಿ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಾದ ಯುಡಿ ಮಿಂಜ್ ಅವರನ್ನು ಸೋಲಿಸಿದ್ದಾರೆ. ಅವರು 1999 ರಿಂದ 2014 ರವರೆಗೆ ರಾಯ್ಘಡ ಕ್ಷೇತ್ರದಿಂದ ಸತತ ನಾಲ್ಕು ಅವಧಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ವಿಷ್ಣು ದೇವ್ ಅವರಿಗೆ ಟಿಕೆಟ್ ನೀಡಲಿಲ್ಲ.
ಕನ್ವರ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಾಯಿ ಅವರು ಜಶ್ಪುರದಲ್ಲಿ 1964ರ ಫೆಬ್ರವರಿ 21ರಂದು ಜನಿಸಿದರು. ರಾಜಕೀಯಕ್ಕೆ ಸೇರುವ ಮೊದಲು ಅವರು ವೃತ್ತಿಯಲ್ಲಿ ಕೃಷಿಕರಾಗಿದ್ದರು.
ಇದನ್ನೂ ಓದಿ; ಛತ್ತೀಸ್ಗಢ: 25 ವಿದ್ಯಾರ್ಥಿಗಳ ಕೈಗೆ ಬಿಸಿ ಎಣ್ಣೆ ಸುರಿದ ಶಿಕ್ಷಕರು