ಛತ್ತೀಸ್ಗಢದ ಸರ್ಕಾರಿ ಶಾಲೆಯೊಂದರಲ್ಲಿ ಕನಿಷ್ಠ 25 ವಿದ್ಯಾರ್ಥಿಗಳ ಕೈಗೆ ಬಿಸಿ ಎಣ್ಣೆ ಸುರಿದು ಶಿಕ್ಷಕರು ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ನಡೆದಿದೆ.
ಕೊಂಡಗಾಂವ್ನ ಕೀರ್ವಾಹಿಯ ಸರಕಾರಿ ಪ.ಪೂ.ಶಾಲೆಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಮೂವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಯಾರೋ ವಿದ್ಯಾರ್ಥಿಗಳು ಶೌಚಾಲಯದ ಹೊರಗೆ ಮಲ ವಿಸರ್ಜನೆ ಮಾಡಿದ್ದರು. ಈ ಬಗ್ಗೆ ತಿಳಿದ ಶಿಕ್ಷಕರು ಯಾರು ಶೌಚಾಲಯದ ಹೊರಗೆ ಮಲ ವಿಸರ್ಜನೆ ಮಾಡಿರುವುದು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರಿಸಲು ವಿಫಲವಾದ ಮಕ್ಕಳ ಕೈಗೆ ಶಿಕ್ಷಕರು ಬಿಸಿ ಎಣ್ಣೆ ಸುರಿದಿದ್ದಾರೆ. ಇದರಿಂದ ಮಕ್ಕಳ ಕೈಗಳಿಗೆ ಸುಟ್ಟ ಗಾಯಗಳಾಗಿದೆ.
ಈ ಕುರಿತು ವಿಷಯ ತಿಳಿದು ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಗಳ ಜೊತೆ ಸೇರಿ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಈ ರೀತಿ ಶಿಕ್ಷೆ ಕೊಟ್ಟಿರುವುದು ಆಘಾತಕಾರಿಯಾಗಿದೆ. ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಸಿ ಎಣ್ಣೆ ಸುರಿದ ಕಾರಣ ಮಕ್ಕಳ ಕೈಗಳಲ್ಲಿ ಗುಳ್ಳೆಗಳು ಉಂಟಾಗಿವೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಸಂತ್ರಸ್ತ ಮಕ್ಕಳು 11 ರಿಂದ 12 ವರ್ಷದವರು ಎನ್ನಲಾಗಿದ್ದು, ಮಕ್ಕಳ ಅಂಗೈಯಲ್ಲಿ ಸುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಛತ್ತೀಸ್ಗಢ ಕೊಂಡಗಾಂವ್ ಜಿಲ್ಲಾ ಶಿಕ್ಷಣಾಧಿಕಾರಿ ತಿವಾರಿ, ಎಣ್ಣೆ ಅಷ್ಟೊಂದು ಬಿಸಿ ಇರಲಿಲ್ಲ ಎಂದು ಹೇಳಿ 25 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎಣ್ಣೆಯನ್ನು ವಿದ್ಯಾರ್ಥಿಗಳೇ ಕೈಗೆ ಹಾಕಿಕೊಂಡಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ವಿದ್ಯಾರ್ಥಿಗಳು ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ. ಹೀಗಾಗಿ ಮಕ್ಕಳು ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳಲು ಈ ರೀತಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಜಿಲ್ಲಾ ಶಿಕ್ಷಣಾಧಿಕಾರಿ ಮಧುಲಿಕಾ ತಿವಾರಿ ಈ ಕುರಿತು ಪ್ರತಿಕ್ರಿಯಿಸಿದ್ದು, ತನಿಖಾ ತಂಡವು ಸಲ್ಲಿಸಿದ ವರದಿಯ ಆಧಾರದ ಮೇಲೆ ಶಾಲೆಯ ಸ್ವೀಪರ್ ದಮುರಾಮ್ ಅವರನ್ನು ವಜಾಗೊಳಿಸಲಾಗಿದೆ. ಜೋಹಾರಿ ಮಾರ್ಕಮ್, ಪೂನಂ ಠಾಕೂರ್ ಮತ್ತು ಮಿಥಾಲಿ ವರ್ಮಾ ಎಂಬ ಮೂವರು ಶಿಕ್ಷಕರನ್ನು ಕೂಡ ಪ್ರಕರಣಕ್ಕೆ ಸಂಬಂಧಿಸಿ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಬಿಎಸ್ಪಿ ಪಕ್ಷಕ್ಕೆ ಉತ್ತರಾಧಿಕಾರಿಯನ್ನು ನೇಮಿಸಿದ ಮಾಯಾವತಿ