ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ, ಮಹಂತ್ ನರೇಂದ್ರ ಗಿರಿ ಮಹಾರಾಜ್ ಅವರು ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಎಂದು ಪೊಲೀಸರು ಹೇಳಿದ್ದು, ಡೆತ್ ನೋಟ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಅಖಿಲ ಭಾರತೀಯ ಅಖಾಡ ಪರಿಷತ್ ದೇಶದ ಅತಿದೊಡ್ಡ ಸಂತರ ಧಾರ್ಮಿಕ ಸಂಸ್ಥೆಯಾಗಿದೆ ಎಂದು ಎನ್ಡಿಟಿವಿ ಉಲ್ಲೇಖ ಮಾಡಿದೆ. ನರೇಂದ್ರ ಗಿರಿ ಅದರ ಮುಖ್ಯಸ್ಥರಾಗಿದ್ದರು.
ಅವರ ದೇಹವು ನೈಲಾನ್ ಹಗ್ಗಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಡೆತ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಪತ್ರವನ್ನು ಓದುತ್ತಿದ್ದು, ಅವರು ಅದರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ‘ಅರ್ನಾಬ್ ಗೋಸ್ವಾಮಿ ಇಂಟಲಿಜೆನ್ಸ್!’ – ಟ್ರೋಲ್ ಮಾಡುತ್ತಿರುವ ಪಾಕಿಸ್ತಾನಿಯರು
ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದರಿಂದ ಅದನ್ನು ಮುರಿಯಬೇಕಾಯಿತು ಮತ್ತು ನರೇಂದ್ರ ಗಿರಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಮಾಡಿದೆ.
ಆತ್ಮಹತ್ಯೆ ಪತ್ರದಲ್ಲಿ ನರೇಂದ್ರ ಗಿರಿ ಅವರು ಶಿಷ್ಯರಾಗಿರುವ ಆನಂದ್ ಗಿರಿ ಮತ್ತು ಇತರ ಶಿಷ್ಯರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಪ್ರಯಾಗರಾಜ್ ಪೊಲೀಸರು ತಿಳಿಸಿದ್ದಾರೆ. “ಅವರು ಅನೇಕ ಕಾರಣಗಳಿಗಾಗಿ ಅಸಮಾಧಾನಗೊಂಡಿದ್ದರು ಮತ್ತು ಅದಕ್ಕಾಗಿಯೇ ಅವರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ” ಎಂದು ಅದು ಹೇಳುತ್ತದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಆತ್ಮಹತ್ಯೆ ಪತ್ರವು 7-8 ಪುಟಗಳಷ್ಟು ಉದ್ದವಾಗಿದೆ ಎಂದು ವರದಿಯಾಗಿದೆ.
ಈ ಮಧ್ಯೆ, ನರೇಂದ್ರ ಮಹಾರಾಜ್ ಗಿರಿ ಅವರ ಶಿಷ್ಯ ಆನಂದ್ ಗಿರಿ, “ಗುರೂಜಿ ಆತ್ಮಹತ್ಯೆ ಮಾಡಿಕೊಳ್ಳಲಾರರು, ಹಣದ ಕಾರಣದಿಂದ ಅವರನ್ನು ಹಿಂಸಿಸಲಾಗಿದೆ. ಇದು ನನ್ನ ವಿರುದ್ಧದ ದೊಡ್ಡ ಪಿತೂರಿ. ಪಕ್ಷಪಾತವಿಲ್ಲದ ತನಿಖೆ ನಡೆಸಬೇಕು. ಪೊಲೀಸ್ ಅಧಿಕಾರಿಗಳು, ಭೂ ಮಾಫಿಯಾ ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ತನಿಖೆಯಲ್ಲಿ ನಾನು ಪೊಲೀಸರಿಗೆ ಸಹಕರಿಸುತ್ತೇನೆ. ಗುರೂಜಿ ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಾನು ತಪ್ಪಿತಸ್ಥನಾಗಿದ್ದರೆ ಶಿಕ್ಷೆಯನ್ನು ಎದುರಿಸಲು ಸಿದ್ಧ. 15 ದಿನಗಳ ಹಿಂದೆ ಗುರುಜಿಯೊಂದಿಗೆ ಮಾತನಾಡಿದ್ದೆ” ಎಂದು ಹೇಳಿದ್ದಾರೆ.
ಆನಂದ್ ಗಿರಿ ಅವರು ಇನ್ಸ್ಪೆಕ್ಟರ್ ಆಫ್ ಜನರಲ್ ಕೆಪಿ ಸಿಂಗ್ ವಿರುದ್ಧ ತನಿಖೆಗೆ ಒತ್ತಾಯಿಸಿದ್ದಾರೆ.
ನರೇಂದ್ರೆ ಗಿರಿಯ ಸಾವಿಗೆ ಪ್ರಧಾನಿ ಮೋದಿ, ಯುಪಿ ಮುಖ್ಯಮಂತ್ರಿ ಆದಿತ್ಯನಾಥ್, ಎಸ್ಪಿ ನಾಯಕ ಅಖಿಲೇಶ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ಆರ್ಥಿಕತೆ ಸರಿಪಡಿಸಲು 12 ಪತ್ರ ಬರೆದೆ, ಕ್ರಮ ಕೈಗೊಳ್ಳದ ಮೋದಿ ಸರ್ಕಾರ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟೀಕೆ