ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಮೋದಿ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ವಿಜಯಸಿಂಹ ಮೋಹಿತೆ ಪಾಟೀಲ್ ಅವರ ನಿವಾಸಕ್ಕೆ ಮಾಧಾ ಮತ್ತು ಸೊಲ್ಲಾಪುರ ಲೋಕಸಭಾ ಸ್ಥಾನಗಳ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಭೇಟಿ ನೀಡಿದ ವೇಳೆ ಸೋಲಾಪುರ ಜಿಲ್ಲೆಯ ಅಕ್ಲುಜ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಮೋದಿ ವಿರೋಧ ಪಕ್ಷದಿಂದ ಯಾರೂ ಆಯ್ಕೆಯಾಗಬೇಕೆಂದು ಬಯಸುವುದಿಲ್ಲ. ಪ್ರಧಾನಿಯ ಇಂತಹ ನಿಲುವು, ಅವರು ಮತ್ತು ರಷ್ಯಾದ ವ್ಲಾಡಿಮಿರ್ ಪುಟಿನ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ದೆಹಲಿಯ ಹಾಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ನ್ನು ಬಂಧಿಸಿರುವುದು ಮೋದಿ ಸಂಸದೀಯ ಪ್ರಜಾಪ್ರಭುತ್ವವನ್ನು ನಿಧಾನವಾಗಿ ನಾಶಪಡಿಸುತ್ತಿದ್ದಾರೆ ಮತ್ತು ದೇಶವು ನಿರಂಕುಶಾಧಿಕಾರದತ್ತ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಸಮಾನ ಪ್ರಾಶಸ್ತ್ಯವನ್ನು ಹೊಂದಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಶರದ್ ಪವಾರ್ ನಿರಾಕರಿಸಿದ್ದಾರೆ. ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯೆಗೆ ಇದು ಸರಿಯಾದ ಸಮಯವಲ್ಲ, ಆದರೆ ಭರವಸೆ ನೀಡುವುದು ಬಿಜೆಪಿಯ ವಿಶೇಷತೆ ಎಂದು ಪವಾರ್ ಹೇಳಿದ್ದಾರೆ.
ಮಾದ ಮತ್ತು ಸೊಲ್ಲಾಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್ ಮುಖಂಡ ಸುಶೀಲಕುಮಾರ ಶಿಂಧೆ, ವಿಜಯಸಿಂಹ ಮೋಹಿತೆ ಪಾಟೀಲ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು. ವಿಜಯಸಿಂಹ ಮೋಹಿತೆ ಪಾಟೀಲ್ ಅವರ ಸೋದರಳಿಯ ಧೈರ್ಯಶೀಲ ಮೋಹಿತೆ ಪಾಟೀಲ್ ಈ ವಾರದ ಆರಂಭದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಎನ್ಸಿಪಿ (ಶರದ್ ಬಣ)ಗೆ ಸೇರುವ ಸಾಧ್ಯತೆಯಿದೆ.
ಧೈರ್ಯಶೀಲ ಮಾದ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ. ಅವರ ಸೇರ್ಪಡೆಯ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರ ಸಮ್ಮುಖದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಸೋಲಾಪುರ ಮತ್ತು ಮಾದ ಸ್ಥಾನಗಳ ಕುರಿತು ಸಂಕ್ಷಿಪ್ತ ಸಭೆ ನಡೆಯಲಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.
ಇದನ್ನು ಓದಿ: ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕುಮಾರಸ್ವಾಮಿ ‘ದಾರಿ ತಪ್ಪಿದ ಮಗ’: ನಟ ಪ್ರಕಾಶ್ ರಾಜ್