ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ‘ದರೋಡೆಕೋರ’ ಎಂದು ಬಿಂಬಿಸಿದ್ದ ಕಾಲ್ಪನಿಕ ವಿಡಿಯೋವನ್ನು ತೆಗೆದು ಹಾಕುವಂತೆ ಹಿಂದಿ ಸುದ್ದಿ ವಾಹಿನಿ ಆಜ್ತಕ್ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್ಬಿಡಿಎಸ್ಎ) ಗುರುವಾರ ನಿರ್ದೇಶನ ನೀಡಿದೆ.
ಕಾಲ್ಪನಿಕ ವಿಡಿಯೋ ಉತ್ತಮ ಅಭಿರುಚಿಯನ್ನು ಹೊಂದಿಲ್ಲ ಎಂದಿರುವ ಎನ್ಬಿಡಿಎಸ್ಎ, ತನ್ನ ಚಾನೆಲ್, ಯೂಟ್ಯೂಬ್ ಮತ್ತು ಇತರ ಆನ್ಲೈನ್ ಪ್ಲಾಟ್ಫಾರ್ಮ್ಗಳಿಂದ ವಿಡಿಯೋ ತೆಗೆದು ಹಾಕುವಂತೆ ಆಜ್ತಕ್ಗೆ ಆದೇಶಿಸಿದೆ.
"Not in good taste, should have been avoided:" NBDSA directs Aaj Tak to remove video showing Rahul Gandhi as robber
report by @whattalawyer https://t.co/K9IkuKVugN
— Bar & Bench (@barandbench) March 1, 2024
ಮೋದಿ ಉಪನಾಮೆ ಹೇಳಿಕೆ ಕುರಿತ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ 2023ರ ಮಾರ್ಚ್ 23 ರಂದು ಗುಜರಾತ್ನ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿತ್ತು. ಆ ಬಳಿಕ ಮಾರ್ಚ್ 24, 2023ರಂದು ಪ್ರಸಾರವಾದ ‘ಬ್ಲ್ಯಾಕ್ ಅಂಡ್ ವೈಟ್’ ಎಂಬ ಶೋನಲ್ಲಿ ಆಜ್ತಕ್ ರಾಹುಲ್ ಗಾಂಧಿಯನ್ನು ದರೋಡೆಕೋರ ಎಂದು ಬಿಂಬಿಸಿತ್ತು.
ಮಾರ್ಚ್ 31,2023ರಂದು ಭಾರತೀಯ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಅವರು ಆಜ್ತಕ್ ವಿರುದ್ಧ ಎನ್ಬಿಡಿಎಸ್ಎಗೆ ದೂರು ಸಲ್ಲಿಸಿದ್ದರು. ವಿವಾದಿತ ವಿಡಿಯೋವನ್ನು ಆಜ್ತಕ್ ಮೊದಲು ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿತ್ತು. ಬಳಿಕ ಬ್ಲ್ಯಾಕ್ ಅಂಡ್ ವೈಟ್ ಶೋನಲ್ಲಿ ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮವನ್ನು ಆಜ್ತಕ್ನ ಸಲಹಾ ಸಂಪಾದಕ ಸುಧೀರ್ ಚೌಧರಿ ನಿರೂಪಿಸಿದ್ದರು ಎಂದು ಶ್ರೀನಿವಾಸ್ ಆರೋಪಿಸಿದ್ದರು.
ರಾಹುಲ್ ಗಾಂಧಿಯವರು ಮೋದಿ ಎಂಬ ಉಪನಾಮೆ ಬಳಸಿ ವಾಗ್ದಾಳಿ ನಡೆಸಿರುವುದು ನೀರವ್ ಮೋದಿಗೆ ಎಂಬುವುದು ಸುಧೀರ್ ಚೌಧರಿಗೆ ಚೆನ್ನಾಗಿ ಗೊತ್ತಿತ್ತು. ಆದರೂ, ದುರುದ್ದೇಶಪೂರ್ವಕವಾಗಿ ಯಾರೋ ದರೋಡೆ ಆರೋಪಿಗಳೊಂದಿಗೆ ರಾಹುಲ್ ಗಾಂಧಿಯವರನ್ನು ಹೋಲಿಕೆ ಮಾಡಿದ್ದರು. ಈ ಮೂಲಕ ರಾಹುಲ್ ಗಾಂಧಿ ಗಂಭೀರ ಅಪರಾಧ ಎಸಗಿದ್ದಾರೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಲು ಪ್ರಯತ್ನಿಸಲಾಗಿತ್ತು ಎಂದು ಶ್ರೀನಿವಾಸ್ ಹೇಳಿದ್ದರು.
ಆರೋಪಿಗಳು ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿಯವರ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ವಿಡಿಯೋ ಪ್ರಸಾರ ಮಾಡಿದ್ದರು. ನೇರವಾಗಿ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ಯುವ ಕಾಂಗ್ರೆಸ್ನ ಪ್ರತಿಷ್ಠೆಯನ್ನು ಗುರಿಯಾಗಿಸಿಕೊಂಡು ಲಕ್ಷಾಂತರ ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು ಎಂದು ದೂರಿದ್ದರು.
ಈ ಸಂಬಂಧ ಆಜ್ತಕ್ ಚಾನೆಲ್ನಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಟೆಲಿಕಾಸ್ಟ್ ಜೊತೆಗೆ ಇಂಟರ್ನೆಟ್ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಮಾಡಿರುವ ಅವಹೇಳನಕಾರಿ ವಿಡಿಯೋವನ್ನು ತಕ್ಷಣವೇ ಡಿಲಿಟ್ ಮಾಡಿಸಲು ಶ್ರೀನಿವಾಸ್ ಆಗ್ರಹಿಸಿದ್ದರು.
ಶ್ರೀನಿವಾಸ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಆಜ್ತಕ್, ರಾಹುಲ್ ಗಾಂಧಿ ಕುರಿತು ನಾವು ಯಾವುದೇ ದುರುದ್ದೇಶಪೂರ್ವಕ ಹೇಳಿಕೆ ನೀಡಿಲ್ಲ. ಅವರನ್ನು ದರೋಡೆ ಆರೋಪಿಯನ್ನಾಗಿ ಬಿಂಬಿಸಿಲ್ಲ ಎಂದಿತ್ತು. ಚಾನೆಲ್ನಲ್ಲಿ ಪ್ರಸಾರವಾದ ವಿಡಿಯೋದ ಸಂಪೂರ್ಣ ಅಂಶವು ಪ್ರಿಯಾಂಕಾ ಗಾಂಧಿಯವರು ಎಕ್ಸ್ನಲ್ಲಿ ಮಾಡಿರುವ ಪೋಸ್ಟನ್ನು ಆಧರಿಸಿತ್ತು ಎಂದು ಚಾನೆಲ್ ವಾದಿಸಿತ್ತು.
ಚಾನೆಲ್ ನಿರೂಪಕ ಪ್ರಿಯಾಂಕಾ ಗಾಂಧಿಯವ ಎಕ್ಸ್ ಪೋಸ್ಟ್ಗೆ ವಿಭಿನ್ನ ನಿರೂಪಣೆ ನೀಡಿದ್ದರೂ, ಪ್ರಿಯಾಂಕಾ ಗಾಂಧಿ ಮಾಡಿದ್ದ ಪೋಸ್ಟ್ಗಳನ್ನು ನಿಖರವಾಗಿ ಪ್ರಸಾರ ಮಾಡಿದ್ದಾರೆ ಎಂದು ಎರಡೂ ಕಡೆಯವರು ಒಪ್ಪಿಕೊಂಡಿದ್ದರು ಎಂದು ಎನ್ಬಿಡಿಎಸ್ಎ ಗಮನಿಸಿದೆ.
ಚಾನೆಲ್ನಲ್ಲಿ ಪ್ರಸಾರವಾದ ಕಾಲ್ಪನಿಕ ವಿಡಿಯೋದಲ್ಲಿ ಚಿತ್ರಿಸಲಾದ ದರೋಡೆಕೋರನ ಕಥೆ ರಾಹುಲ್ ಗಾಂಧಿ ಮೇಲಿನ ಅಪರಾಧಕ್ಕೆ ಸಂಬಂಧಿಸಿದೆ. ವಿಡಿಯೋದಲ್ಲಿ ಮಾಡಲಾದ ಆರೋಪಗಳು ಉತ್ತಮ ಅಭಿರುಚಿಯಲ್ಲಿಲ್ಲ. ಹಾಗಾಗಿ, ಈ ರೀತಿಯ ಕಾರ್ಯಕ್ರಮಗಳನ್ನು ಪುನರಾವರ್ತಿಸಬಾರದು ಎಂದು ಎನ್ಬಿಡಿಎಸ್ಎ ಆಜ್ತಕ್ಗೆ ಹೇಳಿದೆ.
ಎಲ್ಲಾ ಪ್ಲಾಟ್ಫಾರ್ಮ್ಗಳಿಂದ ವಿಡಿಯೋವನ್ನು ತೆಗೆದು ಹಾಕುವಂತೆ ಸೂಚಿಸಿದೆ. ಮುಂದಿನ ಪ್ರಸಾರಗಳಲ್ಲಿ ಅಂತಹ ಕಾಲ್ಪನಿಕ ವಿಡಿಯೋಗಳನ್ನು ಪ್ರಸಾರ ಮಾಡುವಾಗ ಜಾಗರೂಕರಾಗಿರಿ ಎಂದು ಆಜ್ತಕ್ ಚಾನೆಲ್ಗೆ ನಿರ್ದೇಶಿಸಿದೆ.
ದೂರುದಾರರ ಪರ ವಕೀಲ ಕಪಿಲ್ ಮದನ್ ವಾದ ಮಂಡಿಸಿದ್ದರು.
ಇದನ್ನೂ ಓದಿ : ಕೋಮು ದ್ವೇಷ ಹರಡುವ ಕಾರ್ಯಕ್ರಮ ಪ್ರಸಾರ: ಟೈಮ್ಸ್ ನೌ, ನ್ಯೂಸ್ 18ಗೆ ದಂಡ, ಆಜ್ತಕ್ಗೆ ಎಚ್ಚರಿಕೆ ನೀಡಿದ ಎನ್ಬಿಡಿಎಸ್ಎ