ಎನ್ಡಿಟಿವಿಯ ಸುಮಾರು 65% ಶೇರುಗಳನ್ನು ಅದಾನಿ ಗ್ರೂಪ್ ನಿಯಂತ್ರಣಕ್ಕೆ ತೆಗೆದುಕೊಂಡ ಒಂದು ತಿಂಗಳೊಳಗೆ, ಎನ್ಡಿಟಿವಿ ಗ್ರೂಪ್ನ ಅಧ್ಯಕ್ಷೆ ಸುಪರ್ಣಾ ಸಿಂಗ್ ಸೇರಿದಂತೆ ಅದರ ಕೆಲವು ಹಿರಿಯ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.
ಬಿಎಸ್ಇ (ಬಾಂಬೆ ಸ್ಟಾಕ್ ಎಕ್ಸ್ಚೇಂಜ್)ಗೆ ಎನ್ಡಿಟಿವಿ ಸಲ್ಲಿಸಿದ ವರದಿಯ ಪ್ರಕಾರ, ಎನ್ಡಿಟಿವಿಯ ಮುಖ್ಯ ಕಾರ್ಯತಂತ್ರ ಅಧಿಕಾರಿ ಅರಿಜಿತ್ ಚಟರ್ಜಿ ಮತ್ತು ಮುಖ್ಯ ತಂತ್ರಜ್ಞಾನ ಮತ್ತು ಉತ್ಪನ್ನ ಅಧಿಕಾರಿ ಕವಾಲ್ಜಿತ್ ಸಿಂಗ್ ಬೇಡಿ ಕೂಡ ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವರದಿಯ ಮೂಲಕ ಇತ್ತೀಚಿನ ರಾಜೀನಾಮೆಗಳನ್ನು ಪ್ರಕಟಿಸಿದ ಎನ್ಡಿಟಿವಿ, “ಕಂಪನಿಯು ಹೊಸ ನಾಯಕತ್ವದ ತಂಡವನ್ನು ರಚಿಸುವ ಪ್ರಕ್ರಿಯೆಯಲ್ಲಿದೆ. ಅದು ಕಂಪನಿಗೆ ಹೊಸ ಕಾರ್ಯತಂತ್ರದ ನಿರ್ದೇಶನ ಮತ್ತು ಗುರಿಗಳನ್ನು ಹೊಂದಿಸುತ್ತದೆ” ಎಂದು ಹೇಳಿದೆ.
ಎನ್ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಅವರು ನವೆಂಬರ್ 29 ರಂದು ಎನ್ಡಿಟಿವಿ ಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಮರುದಿನ, ನವೆಂಬರ್ 30 ರಂದು, ಎನ್ಡಿಟಿವಿಯ ಜನಪ್ರಿಯ ಮುಖ, ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಕೂಡ ರಾಜೀನಾಮೆ ನೀಡಿದ್ದರು.
ಡಿಸೆಂಬರ್ 23 ರಂದು, ಪ್ರಣಯ್ ಮ್ತು ರಾಧಿಕಾ ರಾಯ್ ಅವರು ಕಂಪನಿಯ 5% ರಷ್ಟನ್ನು ಶೇರುಗಳನ್ನು ಹೊರತುಪಡಿಸಿ ಉಳಿದ ಶೇರುಗಳನ್ನು ಅದಾನಿ ಗ್ರೂಪ್ಗೆ 647.6 ಕೋಟಿ ರೂ.ಗಳಿಗೆ ಮಾರಾಟ ಮಾಡುವುದಾಗಿ ಘೋಷಿಸಿದ್ದರು.
“ಭಾರತದಲ್ಲಿ ಪತ್ರಿಕೋದ್ಯಮವು ವಿಶ್ವ ದರ್ಜೆಯದ್ದಾಗಿದೆ ಆದರೆ ಅದು ಬೆಳೆಯಲು ಮತ್ತು ಬೆಳಗಲು ಅನುವು ಮಾಡಿಕೊಡುವ ಬಲವಾದ ಮತ್ತು ಪರಿಣಾಮಕಾರಿ ಪ್ರಸಾರ ವೇದಿಕೆಯ ಅಗತ್ಯವಿದೆ ಎಂಬ ನಂಬಿಕೆಯಲ್ಲಿ ನಾವು 1988 ರಲ್ಲಿ ಎನ್ಡಿಟಿವಿ ಅನ್ನು ಪ್ರಾರಂಭಿಸಿದ್ದೇವೆ. 34 ವರ್ಷಗಳ ನಂತರ, ಎನ್ಡಿಟಿವಿ ನಮ್ಮ ಹಲವಾರು ಆಶಯಗಳು ಮತ್ತು ಆದರ್ಶಗಳನ್ನು ಪೂರೈಸಿದ ಸಂಸ್ಥೆಯಾಗಿದೆ ಎಂದು ನಾವು ನಂಬುತ್ತೇವೆ”
“ಈ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ ಮತ್ತು ಕೃತಜ್ಞರಾಗಿರುತ್ತೇವೆ. ಜಗತ್ತಿನಾದ್ಯಂತ, ಎನ್ಡಿಟಿವಿ ಭಾರತ ಮತ್ತು ಏಷ್ಯಾದ ಅತ್ಯಂತ ವಿಶ್ವಾಸಾರ್ಹ ಸುದ್ದಿ ಪ್ರಸಾರಕ ಎಂದು ಗುರುತಿಸಲ್ಪಟ್ಟಿದೆ” ಎಂದು ಸಂಸ್ಥಾಪಕರು ಹೇಳಿಕೆಯಲ್ಲಿ ತಿಳಿಸಿದ್ದರು.