‘ಸಮಾಜದಲ್ಲಿ ತುಳಿತಕ್ಕೊಳಗಾಗಿರುವ, ಅಂಚಿಗೆ ತಳ್ಳಲ್ಪಟ್ಟ ವರ್ಗದವರಿಗೂ ಕಾನೂನಿನ ರಕ್ಷಣೆಯನ್ನು ಖಾತ್ರಿಪಡಿಸುವ ಅಗತ್ಯವಿದೆ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯು.ಯು. ಲಲಿತ್ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಲಲಿತ್, ’ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಮಾಜದ ದುರ್ಬಲ ವರ್ಗದ ಸಮುದಾಯಗಳಿಗೆ ಕಾನೂನು ನೆರವು ಖಚಿತಪಡಿಸಿಕೊಳ್ಳಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಬದ್ಧವಾಗಿದೆ’ ಎಂದು ತಿಳಿಸಿದರು.
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ತಿರುವನಂತಪುರದ ವೆಲ್ಲರ್ ಕ್ರಾಫ್ಟ್ ಗ್ರಾಮದಲ್ಲಿ ಆಯೋಜಿಸಿದ್ದ ‘ಸಮಾಜದ ದುರ್ಬಲ ವರ್ಗದವರಿಗಾಗಿ ಕಾನೂನು ಅರಿವು ಶಿಬಿರ ಮತ್ತು ಎಕ್ಸ್ ಪೋ’ ದಲ್ಲಿ ಅವರು ಮಾತನಾಡಿದರು.
‘ದುರ್ಬಲ ವರ್ಗದ, ಕಡೆಗಣಿಸಲ್ಪಟ್ಟಿರುವ ಸಮುದಾಯಗಳಿಗೆ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ, ಈ ಯೋಜನೆಗಳ ಅಸ್ತಿತ್ವದ ಬಗ್ಗೆ ಅವರಿಗೆ ಅರಿವಿಲ್ಲದ ಕಾರಣ, ಯೋಜನೆಗಳು ಫಲಾನುಭವಿಗಳಿಗೆ ತಲುಪುವುದಿಲ್ಲ’ ಎಂದು ಲಲಿತ್ ಹೇಳಿದರು.
‘ಕಾನೂನು ಸೇವಾ ಸಂಸ್ಥೆಗಳ ಮೂಲಕ ಅರ್ಹರಿಗೆ ಕಾನೂನು ನೆರವು, ಚಟುವಟಿಕೆಗಳು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಅದಕ್ಕಾಗಿ ಸೌಲಭ್ಯಗಳನ್ನು ಕಲ್ಪಿಸಲು ಕಾನೂನು ಸೇವಾ ಪ್ರಾಧಿಕಾರವು ಬದ್ಧವಾಗಿದೆ’ ಎಂದರು.
‘ಸಂವಿಧಾನವೂ ಪ್ರತಿಯೊಬ್ಬ ಅರ್ಹ ನಾಗರಿಕನಿಗೆ ಉಚಿತ ಕಾನೂನು ನೆರವು ನೀಡುತ್ತದೆ. ಆದ್ದರಿಂದ ಫಲಾನುಭವಿಗಳಿಗೆ ಜಾಗೃತಿ ಮೂಡಿಸುವ ಮೂಲಕ ಕಾನೂನಿನ ಪ್ರಯೋಜನಗಳನ್ನು ಪಡೆಯುವಷ್ಟು ಸಮರ್ಥರನ್ನಾಗಿಸುವಂತಹ ಅರಿವಿನ ಕಾರ್ಯಕ್ರಮಗಳು ಆಗಬೇಕು ಎಂದು ಅವರು ವಿವರಿಸಿದರು.
ಇದನ್ನೂ ಓದಿ: ‘ಜೈ ಭೀಮ್’ ನಂತಹ ಮತ್ತಷ್ಟು ಚಿತ್ರಗಳು ಬರಲಿ: ಚಿತ್ರತಂಡಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಶ್ಲಾಘನೆ