ಪ್ಯಾಲೆಸ್ತೀನ್ ಮೇಲೆ ಬಾಂಬ್ ದಾಳಿ ಮೂಲಕ ನಿರಂತರ ಹತ್ಯಾಕಾಂಡ ನಡೆಸುತ್ತಿರುವ ಇಸ್ರೇಲ್, ಗಾಝಾ ಪಟ್ಟಿ ಮತ್ತು ಈಜಿಪ್ಟ್ ನಡುವಿನ ಗಡಿ ವಲಯವು ಇಸ್ರೇಲ್ನ ನಿಯಂತ್ರಣದಲ್ಲಿರಬೇಕು ಎಂದು ಬಯಸುತ್ತಿದೆ. ಈ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆಯನ್ನು ನೀಡಿದ್ದಾರೆ. ಗಾಝಾ- ಈಜಿಪ್ಟ್ ಗಡಿಯಲ್ಲಿ ನಿಯಂತ್ರಣ ಸಾಧಿಸುವ ಮತ್ತು ಹಮಾಸ್ನ್ನು ನಿರ್ನಾಮ ಮಾಡುವವರೆಗೆ ಯುದ್ಧ ಮುಂದುವರಿಸುವುದಾಗಿ ಹೇಳಿದ್ದಾರೆ.
ಯುದ್ಧ 13ನೇ ವಾರ ಪ್ರವೇಶಿಸಿದ ಹಿನ್ನೆಲೆ ಸುದ್ದಿಗೋಷ್ಠಿಯನ್ನು ನಡೆಸಿದ ಬೆಂಜಮಿನ್ ನೆತನ್ಯಾಹು, ಹಮಾಸ್ನ್ನು ನಿರ್ಣಾಮ ಮಾಡಲಾಗುವುದು ಮತ್ತು ಗಾಝಾದಲ್ಲಿ ಸೆರೆಯಲ್ಲಿರುವ ಎಲ್ಲಾ ಇಸ್ರೇಲ್ ಜನರನ್ನು ಮನೆಗೆ ಕರೆತರುವ ಪ್ರಯತ್ನ ಮಾಡಲಾಗುವುದು. ಯುದ್ಧವು ಹಲವು ತಿಂಗಳುಗಳವರೆಗೆ ಇನ್ನು ಕೂಡ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಫಿಲಡೆಲ್ಫಿ ಕಾರಿಡಾರ್ ನಮ್ಮ ಕೈಯಲ್ಲಿರಬೇಕು. ಅದನ್ನು ಮುಚ್ಚಬೇಕು. ಹಮಾಸ್ ಸಶಸ್ತ್ರ ಗುಂಪು ಅಕ್ಟೋಬರ್ 7ರಂದು ನಡೆಸಿದ ದಾಳಿಯಂತೆ ಮತ್ತೆ ದಾಳಿ ಪುನರಾವರ್ತನೆಯಾಗದಂತೆ ತಡೆಯಲು ಗಾಝಾದಲ್ಲಿ ಹಮಾಸ್ನ್ನು ನಾಶಮಾಡಲು ಮತ್ತು ಸಶಸ್ತ್ರೀಕರಣಗೊಳಿಸಲು ಇಸ್ರೇಲ್ ಉದ್ದೇಶಿಸಿದೆ. ಯುದ್ಧವು ನಡೆಯುತ್ತಿದೆ. ನಾವು ಎಲ್ಲಾ ರಂಗಗಳಲ್ಲಿ ಹೋರಾಡುತ್ತಿದ್ದೇವೆ. ವಿಜಯ ಸಾಧಿಸಲು ಸಮಯ ಬೇಕಾಗುತ್ತದೆ. ಇಸ್ರೇಲ್ ಸೈನ್ಯದ ಮುಖ್ಯಸ್ಥರು ಹೇಳಿದಂತೆ ಯುದ್ಧವು ಇನ್ನೂ ಹಲವು ತಿಂಗಳುಗಳವರೆಗೆ ಮುಂದುವರಿಯುತ್ತದೆ ಎಂದು ನೆತನ್ಯಾಹು ಹೇಳಿದ್ದಾರೆ.
ಇದಲ್ಲದೆ ಇರಾನ್ ಬೆಂಬಲಿತ ಲೆಬನಾನಿನ ಸಶಸ್ತ್ರ ಗುಂಪು ಹೆಜ್ಬುಲ್ಲಾ ಮೊಂಡುತನ ಮುಂದುವರಿಸಿದರೆ, ಅದು ಕಂಡರಿಯದ ಹೊಡೆತಗಳನ್ನು ಅನುಭವಿಸುತ್ತದೆ ಮತ್ತು ಇರಾನ್ ಕೂಡ ಎಂದು ನೆತನ್ಯಾಹು ವಿವರಿಸದೆ ಹೇಳಿದರು. ಇದರಿಂದ ಯುದ್ಧದ ಮಧ್ಯೆ ಪ್ರಾದೇಶಿಕ ಸಂಘರ್ಷದ ಭೀತಿಯು ಉದ್ಭವಿಸಿದೆ.
ಇಸ್ರೇಲ್ ಗಾಝಾ ಮೇಲೆ ಕಳೆದ ಮೂರು ತಿಂಗಳಿನಿಂದ ನಡೆಸುತ್ತಿರುವ ಯುದ್ಧದಲ್ಲಿ 24,000ಕ್ಕೂ ಅಧಿಕ ಮಂದಿ ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. 10,000ಕ್ಕೂ ಅಧಿಕ ಮಕ್ಕಳು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಲಕ್ಷಾಂತರ ಪ್ಯಾಲೆಸ್ತೀನ್ ನಾಗರಿಕರು ಗಾಯಗೊಂಡಿದ್ದು, ಸಾವಿರಾರು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಪ್ಯಾಲೆಸ್ತೀನ್ನಲ್ಲಿ ಇಸ್ರೇಲ್ ಹತ್ಯಾಕಾಂಡವನ್ನು ನಡೆಸುತ್ತಿದೆ ಎಂದು ವಿವಿಧ ರಾಷ್ಟ್ರಗಳು ಕದನ ವಿರಾಮಕ್ಕೆ ಆಗ್ರಹಿಸುತ್ತಿದೆ. ಆದರೆ ಇಸ್ರೇಲ್ ಮಾತ್ರ ಗಾಝಾದಲ್ಲಿ ಅಮಾಯಕರ ಮೇಲೆ ತಮ್ಮ ಕ್ರೌರ್ಯವನ್ನು ಮುಂದುವರಿಸಿದೆ. ಅಮೆರಿಕ, ಬ್ರಿಟನ್ನಂತಹ ರಾಷ್ಟ್ರಗಳು ಈ ಕೃತ್ಯಕ್ಕೆ ಬೆಂಬಲಿಸುತ್ತಿದೆ.
ನಿನ್ನೆಯಷ್ಟೇ ಗಾಝಾದ ಮೇಲೆ ಮಿಲಿಟರಿ ಆಕ್ರಮಣದ ಮೂಲಕ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂದು ದಕ್ಷಿಣ ಆಫ್ರಿಕಾ ಯುಎನ್ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ ವಿರುದ್ಧ ಮೊಕದ್ದಮೆಯನ್ನು ಹೂಡಿದೆ ಮತ್ತು ಅರ್ಜಿಯ ತ್ವರಿತ ವಿಲೇವಾರಿಗೆ ಆಗ್ರಹಿಸಿತ್ತು.
ಇದನ್ನು ಓದಿ: ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸುವಂತಿಲ್ಲ: ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ