ಬೆಂಗಳೂರು ನಗರದ ಕಾಡುಗೋಡಿಯ ಹೋಪ್ ಫಾರ್ಮ್ ಬಳಿ ವಿದ್ಯುತ್ ತಂತಿ ತುಳಿದು ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಹೆಚ್ಆರ್ಸಿ) ನೋಟಿಸ್ ನೀಡಿದೆ.
ಈ ಕುರಿತು ಇಂದು (ನ.21) ಎನ್ಹೆಚ್ಆರ್ಸಿ ತನ್ನ ವೆಬ್ಸೈಟ್ನಲ್ಲಿ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದೆ.
NHRC notice to the Government of Karnataka over the reported death of a woman and her child due to electrocution on a footpath in Bengaluru
Details at: https://t.co/EAj36YPEju pic.twitter.com/dNNXi36Z9D
— NHRC India (@India_NHRC) November 21, 2023
ಮಾಧ್ಯಮ ವರದಿಗಳನ್ನು ಗಮನಿಸಿ ಎನ್ಹೆಚ್ಆರ್ಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಘಟನೆ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ನೀಡಿದ್ದು, ಆರು ವಾರಗಳಲ್ಲಿ ಘಟನೆ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ವರದಿ ನೀಡುವಂತೆ ಸೂಚಿಸಿದೆ.
ಇದೊಂದು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಘಟನೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ( ಬೆಸ್ಕಾಂ) ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಘಟನೆ ಸಂಬಂಧ ಎಫ್ಐಆರ್ ಯಾವ ಹಂತದಲ್ಲಿದೆ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡಿದ್ದರೆ ಅದರ ಬಗ್ಗೆ ಮಾಹಿತಿ ಸೇರಿದಂತೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಎನ್ಹೆಚ್ಆರ್ಸಿ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
ನವೆಂಬರ್ 19ರಂದು ಮುಂಜಾನೆ ಕಾಡುಗೋಡಿಯ ಹೋಪ್ ಫಾರ್ಮ್ ಬಳಿ ತುಂಡಾಗಿ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಮಗು ಮೃತಪಟ್ಟಿದ್ದಾರೆ. ಮೃತರು ಸೌಂದರ್ಯ ಮತ್ತು ಆಕೆಯ 9 ತಿಂಗಳ ಮಗು ಸುವಿಕ್ಷಾ ಲಿಯಾ ಎಂದು ತಿಳಿದು ಬಂದಿದೆ. ಮೃತ ಸೌಂದರ್ಯ ಬಸ್ನಿಂದ ಇಳಿದು ತನ್ನ ಪತಿ ಮತ್ತು ಮಗುವಿನ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ: ಬೆಸ್ಕಾಂ ಅಧಿಕಾರಿಗಳಿಗೆ ಜಾಮೀನು