ಮಾವೋವಾದಿಗಳಿಗೆ ಆರ್ಥಿಕವಾಗಿ ಬೆಂಬಲ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಸಂಶೋಧಕರ ಮನೆಗಳು ಸೇರಿದಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶದ 62 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ದಾಳಿ ನಡೆಸಿದೆ ಎಂದು ದಿ ವೈರ್ ಮಂಗಳವಾರ ವರದಿ ಮಾಡಿದೆ.
ಪ್ರಗತಿಶೀಲ ಕಾರ್ಮಿಕ ಸಮಕ್ಯದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರ ನರಸಿಂಹುಲು ಅವರನ್ನು ಸಹ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಎನ್ಐಎ ಬಂಧಿಸಿದೆ.
ಸ್ಥಳದಿಂದ 14 ಸುತ್ತುಗಳ ಪಿಸ್ತೂಲ್ ವಶಪಡಿಸಿಕೊಂಡಿರುವುದಾಗಿ ಎನ್ಐಎ ತಿಳಿಸಿದೆ.
ಮಾವೋವಾದಿಗಳಿಗೆ ಕೊರಿಯರ್ ಆಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮುಂಚಿಂಗಿಪುಟ್ಟು ಪೊಲೀಸರು ಪಾಂಗಿ ನಾಗಣ್ಣ ಎಂಬ ಪತ್ರಕರ್ತನನ್ನು 2020ರಲ್ಲಿ ಬಂಧಿಸಿದ್ದರು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪತ್ರಕರ್ತ ಮತ್ತು 63 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆನಂತರ ನಾಗಣ್ಣ ಅವರು ಹಲವು ಕಾರ್ಯಕರ್ತರನ್ನು ಹೆಸರಿಸಿದ್ದಾರೆ ಮತ್ತು ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ಸಂಘಟನೆಯ ಮುಂಚೂಣಿ ಕಾರ್ಯಕರ್ತರಾಗಿದ್ದಾರೆ ಎಂದು ಹೇಳಿದ್ದರು. 2021ರಲ್ಲಿ ಈ ಪ್ರಕರಣವನ್ನು ಎನ್ಐಎ ಕೈಗೆತ್ತಿಕೊಂಡಿತ್ತು.
ಅಕ್ಟೋಬರ್ 2ರಂದು ಆಂಧ್ರಪ್ರದೇಶ- ಗುಂಟೂರು, ಪಾಲನಾಡು, ವಿಜಯವಾಡ, ರಾಜಮಂಡ್ರಿ, ಪ್ರಕಾಶಂ, ಬಾಪಟ್ಲ, ಏಲೂರು, ಪೂರ್ವ ಗೋದಾವರಿ, ಬಿ ಆರ್ ಅಂಬೇಡ್ಕರ್ ಕೋನಸೀಮಾ, ವಿಶಾಖಪಟ್ಟಣಂ, ವಿಜಯನಗರಂ, ನೆಲ್ಲೂರು, ತಿರುಪತಿ, ಕಡಪ, ಸತ್ಯಸಾಯಿ, ಕರ್ನೂಲು ಜಿಲ್ಲೆಗಳ 53 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.
ತೆಲಂಗಾಣದಲ್ಲಿ- ಹೈದರಾಬಾದ್, ಮಹಬೂಬ್ ನಗರ, ಹನುಮಕೊಂಡ, ರಂಗಾ ರೆಡ್ಡಿ ಮತ್ತು ಅದಿಲಾಬಾದ್ನಲ್ಲಿ ಎನ್ಐಎ ಶೋಧಕಾರ್ಯ ನಡೆಸಿತು.
ವಕೀಲ ದುರ್ಬಾ ಸುರೇಶ್ ಕುಮಾರ್ ಮತ್ತು ಮಾನವ ಹಕ್ಕುಗಳ ಹೋರಾಟಗಾರರಾದ ಕೆ ಸುಧಾ, ವೈ ರಾಜೇಶ್ ಮತ್ತು ಕೆವಿ ಜಗನ್ನಾಥ ರಾವ್ ಅವರುಗಳ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿತು.
ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಸಾಕ್ಷಿಯಾಗಿ ಹಾಜರಾಗುವಂತೆ ಸೂಚಿಸಿದೆ ಎಂದು ಕುಮಾರ್ ಹೇಳಿದರು. ಪ್ರಕರಣದ ಕೆಲವು ಆರೋಪಿಗಳ ಪರ ವಕೀಲರಾಗಿರುವ ಕಾರಣಕ್ಕೆ ನೋಟಿಸ್ ನೀಡಿರುವುದು ಕಾನೂನುಬಾಹಿರ ಮತ್ತು ಅನೈತಿಕ ಎಂದು ಪ್ರತಿಪಾದಿಸಿದರು.
”ಪ್ರಕರಣದಲ್ಲಿ ಹೆಸರಿಸಲಾದ ಅನೇಕ ವ್ಯಕ್ತಿಗಳಿಗೆ ನಾನು ವಕೀಲನಾಗಿದ್ದೇನೆ. ನಾನು ಅವರನ್ನು ಹೈಕೋರ್ಟ್ನಲ್ಲಿ ಪ್ರತಿನಿಧಿಸುತ್ತೇನೆ ಮತ್ತು ಈಗ ಅದೇ ಪ್ರಕರಣದಲ್ಲಿ ನಾನು ಅವರ ಮುಂದೆ ಸಾಕ್ಷಿಯಾಗಿ ಹಾಜರಾಗಲು NIA ಬಯಸಿದೆ” ಎಂದು ವಕೀಲ ಕುಮಾರ್ ಹೇಳಿದ್ದಾರೆ.
ಈ ದಾಳಿಯನ್ನು ಮಾಟಗಾತಿ ಬೇಟೆ ಎಂದು ಮಾನವ ಹಕ್ಕುಗಳ ಸಂಸ್ಥೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಕರೆದಿದೆ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸಮಾಜದ ಅತ್ಯಂತ ಅಂಚಿನಲ್ಲಿರುವ ವರ್ಗಗಳ ಸಮಸ್ಯೆಗಳನ್ನು ನಿರಂತರವಾಗಿ ಕೈಗೆತ್ತಿಕೊಳ್ಳುತ್ತಿರುವ ಕಾರ್ಯಕರ್ತರನ್ನು ಕಿರುಕುಳ ನೀಡುವ ಮೂಲಕ ಎನ್ಐಎ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ: AAP ಸಂಸದ ಸಂಜಯ್ ಸಿಂಗ್ ನಿವಾಸದ ಮೇಲೆ ED ದಾಳಿ