ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗಾಗಿ ಸ್ಥಾಪಿಸಲಾದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಉತ್ತರ ಪ್ರದೇಶದ ಮಾನವ ಹಕ್ಕುಗಳ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ಮಾಡಿದ್ದು, ಇದನ್ನು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಖಂಡಿಸಿದೆ.
ಹಿರಿಯ ಹೋರಾಟಗಾರ ದಿವಂಗತ ಜಯಪ್ರಕಾಶ್ ನಾರಾಯಣ್ ಅವರ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಸಂಘಟನೆಯ ನಾಯಕರಿಗೆ ಸಂಬಂಧಿಸಿದ ಹಲವು ಪ್ರದೇಶಗಳ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಪ್ರಯಾಗ್ ರಾಜ್, ವಾರಣಾಸಿ, ಚಂದೌಲಿ, ಅಜಂಗಢ್ ಮತ್ತು ಡಿಯೋರಿಯಾ ಜಿಲ್ಲೆಗಳ ಎಂಟು ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸಿದೆ ಎಂದು ಪಿಯುಸಿಎಲ್ ತಿಳಿಸಿದೆ. ಎಫ್ಐಆರ್ ನಂ.RC-01/2023/NIA/LKW ಅಡಿಯಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಈ ಬಗ್ಗೆ NIA ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿಲ್ಲ.
ಪಿಯುಸಿಎಲ್ನ ರಾಷ್ಟ್ರೀಯ ಕಾರ್ಯದರ್ಶಿ ಸೀಮಾ ಆಜಾದ್ ಅವರ ಮನೆಯ ಮೇಲೆ ಪ್ರಯಾಗ್ರಾಜ್ನಲ್ಲಿ ದಾಳಿ ನಡೆಸಲಾಗಿದೆ. ಎನ್ಐಎ ಸೀಮಾ ಆಜಾದ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಅವರ ಲ್ಯಾಪ್ಟಾಪ್ ಮತ್ತು ಕೆಲವು ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ.
ಇದಲ್ಲದೆ ಪಿಯುಸಿಎಲ್ನ ಸದಸ್ಯರಾದ ವಕೀಲ ಸೋನಿ ಆಜಾದ್ ಮತ್ತು ಅವರ ಪತಿ ರಿತೇಶ್ ರೈ ಅವರನ್ನೂ ಎನ್ಐಎ ವಿಚಾರಣೆಗೆ ಒಳಪಡಿಸಿದೆ. ಪ್ರಯಾಗ್ರಾಜ್ನಲ್ಲಿ ಮನೀಶ್ ಆಜಾದ್ ಅವರ ಮನೆ ಮೇಲೆ ಎನ್ಐಎ ದಾಳಿ ನಡೆಸಿದೆ ಪಿಯುಸಿಎಲ್ ಹೇಳಿದೆ.
ವಾರಣಾಸಿಯಲ್ಲಿ ಭಗತ್ ಸಿಂಗ್ ವಿದ್ಯಾರ್ಥಿ ಮೋರ್ಚಾ (ಬಿಎಸ್ಎಂ) ಅಧ್ಯಕ್ಷೆ ಆಕಾಂಕ್ಷಾ ಅವರ ಕಚೇರಿಯ ಮೇಲೂ ದಾಳಿ ನಡೆಸಲಾಗಿದೆ. ದಿಯೋರಿಯಾದಲ್ಲಿ ಖಿರಿಯಾ ಬಾಗ್-ಅಜಂಗಢ ರೈತರ ಚಳವಳಿಯ ನಾಯಕ ರಾಜೇಶ್ ಆಜಾದ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಮೇಲೆ ರಾಜ್ಯವ್ಯಾಪಿ ನಡೆದ ಎನ್ಐಎ ದಾಳಿಗಳನ್ನು PUCL ಖಂಡಿಸಿದ್ದು, ದಾಳಿಯನ್ನು ಅಸಂವಿಧಾನಿಕ ಮತ್ತು ಮಾನವ ಹಕ್ಕುಗಳ ವಿರೋಧಿ ಕ್ರಮ ಎಂದು ಟೀಕಿಸಿದೆ. ಮಾನವ ಹಕ್ಕುಗಳ ಕಾರ್ಯಕರ್ತರ ವಿರುದ್ಧದ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಪಿಯುಸಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಎನ್ ಐಎ ದಾಳಿಯು ಮಾನವ ಹಕ್ಕುಗಳ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಪಿಯುಸಿಎಲ್ ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದಾಳಿಯು ಹೋರಾಟಗಾರರನ್ನು ಬೆದರಿಸುವ ಪ್ರಯತ್ನವಾಗಿದೆ. ಮಾನವ ಹಕ್ಕುಗಳ ಹೋರಾಟಗಾರರ ಮೇಲಿನ ಎಫ್ಐಆರ್ನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ತನಿಖೆಯನ್ನು ಸ್ಥಗಿತಗೊಳಿಸಬೇಕು ಎಂದು ಪಿಯುಸಿಎಲ್ ತನ್ನ ಹೇಳಿಕೆಯಲ್ಲಿ ಆಗ್ರಹಿಸಿದೆ.
ಇದನ್ನು ಓದಿ: ಗಾಂಧೀಜಿಯವರನ್ನು ಕೊಂದ ಮನಸ್ಥಿತಿಯವರೇ ಗೌರಿ ಲಂಕೇಶ್ರನ್ನು ಹತ್ಯೆ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ