ಬಹುಕೋಟಿ ವಂಚನೆ ಆರೋಪದಲ್ಲಿ ಜೈಲಿನಲ್ಲಿರುವ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ತನ್ನ ಸ್ಥಿತಿ ಜೈಲಿನಲ್ಲಿ ಚಿಂತಾಜನಕವಾಗಿದ್ದು, ಈ ಸ್ಥಿತಿಯಲ್ಲಿ ಬದುಕುವುದಕ್ಕಿಂತ ಜೈಲಿನಲ್ಲಿ ಸತ್ತರೆ ಒಳ್ಳೆಯದು ಎಂದು ವಿಶೇಷ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದಾರೆ.
ಕೆನರಾ ಬ್ಯಾಂಕ್ಗೆ 538 ಕೋಟಿ ವಂಚನೆ ಆರೋಪದಲ್ಲಿ ಕಳೆದ ವರ್ಷ ಸೆಪ್ಟೆಂಬರ್ 1 ರಂದು ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ‘ಇಡಿ’ ಅಧಿಕಾರಿಗಳು ಬಂಧಿಸಿದ್ದರು. ಅವರು ಪ್ರಸ್ತುತ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ ಹಾಜರಾಗಿದ್ದ ಗೋಯಲ್, ಬದುಕಿನ ಎಲ್ಲ ಭರವಸೆಯನ್ನೂ ಕಳೆದುಕೊಂಡಿದ್ದೇನೆ, ಈಗಿನ ಸ್ಥಿತಿಯಲ್ಲಿ ಬದುಕುವುದಕ್ಕಿಂತ ಜೈಲಿನಲ್ಲಿ ಸತ್ತರೆ ಒಳ್ಳೆಯದು ಎಂದು ವಿಶೇಷ ನ್ಯಾಯಾಲಯಕ್ಕೆ ಕೈ ಮುಗಿದು ಕೇಳಿಕೊಂಡಿದ್ದಾರೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಜಿ ದೇಸ್ಪಾಂಡೆ ಅವರ ಮುಂದೆ ಗೋಯಲ್ ಜಾಮೀನು ಅರ್ಜಿ ಸಲ್ಲಿಸಿದ್ದರು. ನಿನ್ನೆ ಈ ಕುರಿತ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಕೈಗಳನ್ನು ಮಡಚಿ ಗೋಯಲ್ ತನ್ನ ಆರೋಗ್ಯ ಸ್ಥಿತಿ ಕೆಟ್ಟದಾಗಿದೆ. ಪತ್ನಿ ಕ್ಯಾನ್ಸರ್ನಿಂದ ಹಾಸಿಗೆ ಹಿಡಿದಿದ್ದು, ಇದ್ದ ಒಬ್ಬಳೇ ಮಗಳು ಕೂಡ ಅಸ್ವಸ್ಥಳಾಗಿದ್ದಾಳೆ ಎಂದು ಗೋಯಲ್ ಕೋರ್ಟ್ನಲ್ಲಿ ಹೇಳಿದ್ದಾರೆ. ತನ್ನ ಮೊಣಕಾಲುಗಳನ್ನು ನ್ಯಾಯಾಧೀಶರಿಗೆ ತೋರಿಸಿದ ಗೋಯಲ್ ಕಾಲುಗಳು ಊದಿಕೊಂಡಿವೆ ಅವುಗಳನ್ನು ಮಡಚಲು ಆಗುತ್ತಿಲ್ಲ. ಮೂತ್ರ ವಿಸರ್ಜಿಸುವಾಗ ತೀವ್ರವಾದ ನೋವು ಮತ್ತು ರಕ್ತ ಬರುತ್ತದೆ. ಆರೋಗ್ಯ ತಪಾಸಣೆಗಾಗಿ ನನ್ನನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆಸ್ಪತ್ರೆಗೆ ಹೋಗಿ ದೀರ್ಘ ಅವಧಿಗೆ ಸರದಿಯಲ್ಲಿ ಕಾದು ನಿಲ್ಲಲು ಕೂಡಾ ನನ್ನಲ್ಲಿ ಶಕ್ತಿ ಇಲ್ಲ. ತಪಾಸಣೆಗಾಗಿ ಪದೇ ಪದೆ ಆಸ್ಪತ್ರೆಗೆ ಹೋಗಲು ಆಗುತ್ತಿಲ್ಲ. ಜೆಜೆ ಆಸ್ಪತ್ರೆಗೆ ಕರೆದೊಯ್ಯುವ ಬದಲು ಜೈಲಿನಲ್ಲೇ ಸಾಯಲು ಬಿಡಿ. ನನ್ನ ಆರೋಗ್ಯವು ಇನ್ನು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವ ಪರಿಸ್ಥಿತಿಯಲ್ಲಿಲ್ಲ. ಈ ಬಾರಿ ಹಾಜರಾದ ಕಾರಣ ಎಲ್ಲವನ್ನೂ ಕೋರ್ಟ್ ಗಮನಕ್ಕೆ ತರುತ್ತಿದ್ದೇನೆ ಎಂದು ನರೇಶ್ ಗೋಯಲ್ ಹೇಳಿದ್ದಾರೆ.
ಅವರ ಮಾತುಗಳನ್ನು ತಾಳ್ಮೆಯಿಂದ ಕೇಳಿದೆ ಮತ್ತು ಅವರು ತನ್ನ ಹೇಳಿಕೆಗಳನ್ನು ನೀಡುವಾಗ ಗಮನಿಸಿದೆ. ಅವರ ಇಡೀ ದೇಹವು ನಡುಗುತ್ತಿರುವುದನ್ನು ನಾನು ಕಂಡುಕೊಂಡೆ. ಅವರಿಗೆ ನಿಲ್ಲಲು ಸಹ ಸಹಾಯ ಬೇಕು. ಅವರು ಸಲ್ಲಿಸಿದ ಎಲ್ಲವನ್ನೂ ನಾನು ಗಮನಿಸಿದ್ದೇನೆ ಮತ್ತು ಆರೋಪಿಯನ್ನು ಅಸಹಾಯಕನಾಗಿ ಇರಲು ಬಿಡುವುದಿಲ್ಲ ಮತ್ತು ಸರಿಯಾದ ಚಿಕಿತ್ಸೆಯೊಂದಿಗೆ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಎಲ್ಲಾ ಸಂಭಾವ್ಯ ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಧೀಶರು ಈ ವೇಳೆ ಹೇಳಿದ್ದಾರೆ.
ಕಳೆದ ತಿಂಗಳು ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ಗೋಯಲ್ ಅವರು ಹೃದಯದ ಸ್ಥಿತಿ, ಮೂಳೆ ಸಮಸ್ಯೆಗಳಂತಹ ಅನೇಕ ವೈದ್ಯಕೀಯ ಕಾಯಿಲೆಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಅವರು ತಪ್ಪಿತಸ್ಥರಲ್ಲ ಎಂದು ನಂಬಲು ಸಮಂಜಸವಾದ ಕಾರಣಗಳಿವೆ ಎಂದು ಹೇಳಲಾಗಿತ್ತು. ಅವರ ಜಾಮೀನು ಅರ್ಜಿಗೆ ‘ಇಡಿ’ ಪ್ರತಿಕ್ರಿಯೆ ಸಲ್ಲಿಸಿದ್ದು, ಜನವರಿ 16 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಕೆನರಾ ಬ್ಯಾಂಕ್ಗೆ 538 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್ವೇಸ್ ಮತ್ತು ನರೇಶ್ ಗೋಯಲ್, ಅವರ ಪತ್ನಿ ಅನಿತಾ ಮತ್ತು ಕಂಪೆನಿಯ ಮಾಜಿ ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿದ ಬಳಿಕ ‘ಇಡಿ’ ಈ ಕುರಿತು ತನಿಖೆಯನ್ನು ಕೈಗೊಂಡಿತ್ತು.
ಜೆಟ್ ಏರ್ವೇಸ್ (ಇಂಡಿಯಾ) ಲಿಮಿಟೆಡ್ ಸಂಸ್ಥೆಯು ಕೆನರಾ ಬ್ಯಾಂಕ್ನಿಂದ ಒಟ್ಟು 848.86 ಕೋಟಿ ಸಾಲ ಪಡೆದಿದ್ದು, ಈ ಪೈಕಿ ಇನ್ನೂ 538.62 ಕೋಟಿ ಬಾಕಿ ಉಳಿದಿದೆ ಎಂದು ತಿಳಿಸಿತ್ತು. ಈ ಬಗ್ಗೆ ಬ್ಯಾಂಕ್ನ ದೂರಿನ ಮೇರೆಗೆ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಇದನ್ನು ವಂಚನೆ ಖಾತೆಯಾಗಿ ಜುಲೈ 29, 2011ರಲ್ಲಿ ಸಿಬಿಐ ಘೋಷಿಸಿತ್ತು.
ಇದನ್ನು ಓದಿ: ಸೀಟು ಹಂಚಿಕೆ ಬಿಕ್ಕಟ್ಟು: ಅಗತ್ಯಬಿದ್ದರೆ ಏಕಾಂಗಿಯಾಗಿ ಸ್ಪರ್ಧಿಸಲು ಕೂಡ ಸಿದ್ಧ; ಟಿಎಂಸಿ