ಪೌರತ್ವ ಕಾನೂನಿನ ವಿರೋಧಿ ಪ್ರತಿಭಟನೆಯಲ್ಲಿ ಹಿಂಸಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಹೋರ್ಡಿಂಗ್ಸ್ ಹಾಕಿದ್ದ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಬೆಂಬಲಿಸಲು ಯಾವುದೇ ಕಾನೂನು ಇಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಪೌರತ್ವ ಕಾನೂನಿನ ವಿರೋಧಿ ಪ್ರತಿಭಟನೆಯಲ್ಲಿ ಹಿಂಸಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಹಾಕಿದ್ದ ಹೋರ್ಡಿಂಗ್ಸ್ ಗಳನ್ನು ತೆಗೆದುಹಾಕುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಯೋಗಿ ಆದಿತ್ಯನಾಥ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಪ್ರಸ್ತುತ ಪ್ರಕರಣವನ್ನು ವಿಸ್ತೃತ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಹೋರ್ಡಿಂಗ್ಸ್ ಹಾಕಲಾಗಿತ್ತು ಎಂದು ಎನ್ಡಿಟಿವಿ ವರದಿ ಮಾಡಿತ್ತು. “ತಪ್ಪು ಮಾಡಿದವರನ್ನು ಪುಸ್ತಕಕ್ಕೆ ತರಬೇಕು. ಆದರೆ ರಾಜ್ಯವು ಅದನ್ನು ಮೀರಿ ಹೋಗಬಹುದೇ? ಇಂತಹ ಹೋರ್ಡಿಂಗ್ಸ್ ಗಳನ್ನು ಹಾಕುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯೇ ?” ನ್ಯಾಯಮೂರ್ತಿ ಯು.ಯು.ಲಲಿತ್ ಕೇಳಿದರು.
ಉತ್ತರಪ್ರದೇಶ ಸರಕಾರವು ಅಳವಡಿಸಿಲಾಗಿದ್ದ ಹಿಂಸಾಚಾರದ ಆರೋಪ ಹೊತ್ತ ಸಿಎಎ ಪ್ರತಿಭಟನಾಕಾರರ ಭಾವಚಿತ್ರವುಳ್ಳ ಎಲ್ಲಾ ಪೋಸ್ಟರ್ಗಳು ಮತ್ತು ಹೋರ್ಡಿಂಗ್ಸ್ ಗಳನ್ನು ಕೂಡಲೇ ತೆಗೆದುಹಾಕಬೇಕು ಎಂದು ಅಲಹಾಬಾದ್ ಹೈಕೋರ್ಟ್ ಸೋಮವಾರ ಯೋಗಿ ಸರ್ಕಾರಕ್ಕೆ ಆದೇಶಿಸಿತ್ತು. ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ನೇತೃತ್ವದ ನ್ಯಾಯಪೀಠವು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಮಾರ್ಚ್ 16 ರೊಳಗೆ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರೊಂದಿಗೆ ತೆಗೆಸಿದ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು.
ಅಲಹಾಬಾದ್ ಹೈಕೋರ್ಟ್ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ತೆಗೆದುಕೊಂಡು ವಿಚಾರಣೆ ನಡೆಸಿ ಉತ್ತರ ಪ್ರದೇಶ ಅಧಿಕಾರಿಗಳ ಕ್ರಮವನ್ನು “ಅತ್ಯಂತ ಅನ್ಯಾಯ” ಎಂದು ಹೇಳಿತ್ತಲ್ಲದೆ ಇದು ಜನರ ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣವಾಗಿದೆ ಎಂದು ಹೇಳಿತ್ತು. ಸೋಮವಾರ ತೀರ್ಪು ಪ್ರಕಟಿಸಿದ ಹೈಕೋರ್ಟ್ ಉತ್ತರಪ್ರದೇಶ ಸರಕಾರವು ಅಳವಡಿಸಿದ್ದ ಹಿಂಸಾಚಾರದ ಆರೋಪ ಹೊತ್ತ ಭಾವಚಿತ್ರವುಳ್ಳ ಎಲ್ಲಾ ಪೋಸ್ಟರ್ಗಳು ಮತ್ತು ಹೋರ್ಡಿಂಗ್ಸ್ ಗಳನ್ನು ಕೂಡಲೇ ತೆಗೆದುಹಾಕಬೇಕು ಎಂದು ಆದೇಶಿಸಿತ್ತು.