Homeಮುಖಪುಟವಿಡಿಯೋ| ಹುಟ್ಟೂರಿನಲ್ಲಿ ಸರ್ಕಾರಿ ಶಾಲೆ ಕಟ್ಟಲು 1.75 ಕೋಟಿ ದೇಣಿಗೆ ಕೊಟ್ಟ ದಂಪತಿಗೊಂದು ಸೆಲ್ಯೂಟ್‌..

ವಿಡಿಯೋ| ಹುಟ್ಟೂರಿನಲ್ಲಿ ಸರ್ಕಾರಿ ಶಾಲೆ ಕಟ್ಟಲು 1.75 ಕೋಟಿ ದೇಣಿಗೆ ಕೊಟ್ಟ ದಂಪತಿಗೊಂದು ಸೆಲ್ಯೂಟ್‌..

ಮೂರು ತಿಂಗಳಲ್ಲಿ ಕಟ್ಟಡ ಕಾಮಗಾರಿ ಮುಗಿದು ಜೂನ್‌ ತಿಂಗಳಿನಲ್ಲಿ ಮಕ್ಕಳು ಇದೇ ಶಾಲೆಯಲ್ಲಿ ಕಲಿಯಬೇಕೆನ್ನುವುದು ನಮ್ಮ ಆಶಯ ಎನ್ನುತ್ತಾರೆ ಶ್ರೀಹರ್ಷ-ಮಮತ ದಂಪತಿ.

- Advertisement -
- Advertisement -

ಸಮಾಜದಲ್ಲಿ ಒಳ್ಳೆಯವರು ಇನ್ನೂ ಇದ್ದಾರೆಂಬುದಕ್ಕೆ ಇವರೇ ಸಾಕ್ಷಿ. ತಾವು ದುಡಿದ ಹಣವನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ  ಬಳಸುವವರು ಅಪರೂಪ. ಎಲ್ಲವನ್ನು ಸದಾ ಲಾಭದ ದೃಷ್ಟಿಯಿಂದಲೇ ನೋಡುವಂತಹ ಈ ಕಾಲ ದಲ್ಲಿ ತನ್ನ ತಂದೆಯ ಹುಟ್ಟೂರಿನಲ್ಲಿ ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ದಂಪತಿಯೊಂದು 1 ಕೋಟಿ 75 ಲಕ್ಷ ಕೊಟ್ಟ ಅಪರೂಪದ ಘಟನೆ ತುಮಕೂರು ಜಿಲ್ಲೆಯ ಕೋರಾ ಗ್ರಾಮದಲ್ಲಿ ಜರುಗಿದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಹೊತ್ತಿನಲ್ಲಿ ಸುಸಜ್ಜಿತ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಮಾಡಿಕೊಡಲು ಈ ದಂಪತಿ ಟೊಂಕ ಕಟ್ಟಿನಿಂತಿರುವುದು ಹಲವರಿಗೆ ಮಾದರಿಯಾಗಿದೆ.

ಅವರೇ ಬಳ್ಳಾರಿಯ ಶ್ರೀಹರ್ಷ ಮತ್ತು ಮಮತಗಳಾಗಿದ್ದಾರೆ., ತಮ್ಮ ಹಿಂದಿನ ಮೂರನೇ ತಲೆಮಾರು ಕೋರಾ ಗ್ರಾಮದಲ್ಲಿ ವಾಸವಿತ್ತು ಎಂಬ ಕಾರಣಕ್ಕೆ ಗ್ರಾಮವನ್ನು ಅರಸಿಕೊಂಡು ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಹಣ ನೀಡಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಶ್ರೀಹರ್ಷರವರ ಮಾತುಗಳನ್ನು ಕೇಳಿ

ಸರ್ಕಾರಿ ಶಾಲೆ 1 ಕೋಟಿ 75 ಲಕ್ಷ ದೇಣಿಗೆ ಕೊಟ್ಟ ದಂಪತಿ.

ಹುಟ್ಟೂರಿನಲ್ಲಿ ಸರ್ಕಾರಿ ಶಾಲೆ ಕಟ್ಟಲು 1 ಕೋಟಿ 75 ಲಕ್ಷ ಕೊಟ್ಟ ಶ್ರೀಹರ್ಷ ಮತ್ತು ಮಮತ ದಂಪತಿಗೊಂದು ಸೆಲ್ಯೂಟ್‌ ಇರಲಿ.. ಹರ್ಷರವರ ಮಾತುಗಳನ್ನು ಕೇಳಿ

Posted by Naanu Gauri on Thursday, March 12, 2020

ಶ್ರೀಹರ್ಷ ಮತ್ತು ಮಮತ ದಂಪತಿ ಬಳ್ಳಾರಿ ಜಿಲ್ಲೆಯ ಹಿರೇಕುಂಬಳಕುಂಟೆಯವರು. ಇವರ ವಂಶದ ಮೂರನೇ ತಲೆಮಾರು ತುಮಕೂರು ತಾಲೂಕಿನ ಕೋರಾದಲ್ಲಿ ವಾಸವಾಗಿತ್ತು. ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿಬರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವಾಗಲೆಲ್ಲೆ ಕೋರಾ ನೋಡಿದರೆ ನಮ್ಮ ಹಿಂದಿನ ತಲೆಮಾರಿನ ನೆನಪಾಗುತ್ತಿತ್ತು. ರಸ್ತೆಯ ಬದಿಯಲ್ಲೇ ಇರುವ ಶಾಲೆಯನ್ನು ನೋಡುತ್ತಿದ್ದೆವು. ಹಾಗಾಗಿ ಈ ಗ್ರಾಮಕ್ಕೆ ಏನಾದರು ಕೊಡುಗೆ ನೀಡಬೇಕೆಂದು ಅಂದುಕೊಳ್ಳುತ್ತಿದ್ದೆವು. ಹಳೆಯ ತಲೆಮಾರಿನ ಸ್ಮರಣಾರ್ಥ ಗ್ರಾಮಕ್ಕೆ ಅಗತ್ಯವಿದ್ದ ಶಾಲೆ ಕಟ್ಟಿಸಿಕೊಡುವಂತಹ ತೀರ್ಮಾನ ಮಾಡಿದೆವು ಅನ್ನುತ್ತಾರೆ ಶ್ರೀಹರ್ಷ.

ಗ್ರಾಮ ಪಂಚಾಯಿತಿ, ಎಸ್‌ಡಿಎಂಸಿ ಅಧ್ಯಕ್ಷರನ್ನು ಮತ್ತು ಶಾಲೆಯ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚಿಸಿದೆವು. ನಮ್ಮ ಆಶಯಕ್ಕೆ ಅವರು ಪೂರಕವಾಗಿ ಸ್ಪಂದಿಸಿದರು. ಅದರ ಭಾಗವೇ ಇಂದು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಉತ್ತಮ ಶಾಲೆ ಕಟ್ಟಡ ನಿರ್ಮಿಸಿಕೊಟ್ಟರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಮೂರು ತಿಂಗಳಲ್ಲಿ ಕಟ್ಟಡ ಕಾಮಗಾರಿ ಮುಗಿದು ಜೂನ್‌ ತಿಂಗಳಿನಲ್ಲಿ ಮಕ್ಕಳು ಇದೇ ಶಾಲೆಯಲ್ಲಿ ಕಲಿಯಬೇಕೆನ್ನುವುದು ನಮ್ಮ ಆಶಯ ಎನ್ನುತ್ತಾರೆ ಶ್ರೀಹರ್ಷ-ಮಮತ ದಂಪತಿ.

ಕೋರಾ ಗ್ರಾಮದ ಶಾಲೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿದೆ. ರಸ್ತೆಯ ಪಕ್ಕದಲ್ಲೇ ಇರುವುದರಿಂದ ಅಪಘಾತ ಮತ್ತು ಪಾಠ ಪ್ರವಚನಕ್ಕೆ ತೊಂದರೆಯಾಗುತ್ತದೆ. ಇಲ್ಲಿ ಈಗಾಗಲೇ ಇಬ್ಬರು ಮಕ್ಕಳು ಅಪಘಾತದಿಂದ ಮೃತ ಪಟ್ಟಿದ್ದಾರೆ. ಇದರಿಂದ ಗ್ರಾಮಸ್ಥರು ಭೀತರಾಗಿದ್ದರು. ಈ ನಡುವೆ ಎನ್.ಎಚ್.4ನ್ನು ಅಷ್ಟಪಥ ರಸ್ತೆಯಾಗಿ ವಿಸ್ತರಿಸುವ ಯೋಜನೆಯಿದೆ. ಈ ಕಾರಣಕ್ಕಾಗಿ ಶಾಲೆಯನ್ನು ಬೇರೆಡೆ ಸ್ಥಳಾಂತರ ಮಾಡಬೇಕಿತ್ತು. ಅದಕ್ಕಾಗಿ ಕೋರಾ ಗ್ರಾಮ ಪಂಚಾಯಿತಿ ಗ್ರಾಮದ ಪೂರ್ವ ಭಾಗದಲ್ಲಿ 30 ಗುಂಟೆ ಜಮೀನು ನೀಡಿತು. ಕಟ್ಟಡ ನಿರ್ಮಾಣ ಮಾಡಿಕೊಡಲು ಶ್ರೀಹರ್ಷ-ಮಮತ ದಂಪತಿ ಮುಂದೆ ಬಂದಿದ್ದಾರೆ. ಇದರಿಂದ ಮಕ್ಕಳಿಗೆ ಉತ್ತಮ ಮೂಲ ಸೌಕರ್ಯ ದೊರೆಯಲಿದೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯರು.

ಶ್ರೀಹರ್ಷ-ಮಮತ ದಂಪತಿ ತಮ್ಮ ತಾಯಿ-ತಂದೆ ಸರ್ವಮಂಗಳ ಹಿ.ಮ.ನಾಗಯ್ಯ ಹೆಸರಿನಲ್ಲಿ ಸರ್ಕಾರಿ ಶಾಲಾ ಕಟ್ಟಡವನ್ನು ಕಟ್ಟಿಕೊಡಲಿದ್ದಾರೆ. ಅದೂ 1 ಕೋಟಿ 75 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಲಿದೆ. ಸರ್ಕಾರಿ ಶಾಲಾ ಕಟ್ಟಡ ಎಲ್ ಆಕಾರ ಇರಲಿಲದೆ. ಒಟ್ಟು 14 ಕೊಠಡಿಗಳಿರುವ ಕಟ್ಟಡ ನಿರ್ಮಾಣಗೊಳ್ಳಲಿದೆ. ಫೂರ್ವಾಭಿಮುಖವಾಗಿ ಎರಡು ಅಂತಸ್ತಿನಲ್ಲಿ 10 ಕೊಠಡಿ ಮತ್ತು ದಕ್ಷಿಣಾಭಿಮುಖವಾಗಿ 4 ಕೊಠಡಿ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಲಾಗಿದೆ. ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಈ ದಂಪತಿ ಪಣತೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಕೊಠಡಿ ವ್ಯವಸ್ಥೆ ನಿರ್ಮಿಸಿದರೆ ಖಾಸಗಿ ಶಾಲೆಯ ಮಕ್ಕಳಂತೆ ಕಲಿಯುವ ವಾತಾವರಣ ಕಲ್ಪಿಸಿದರೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ವೇದಿಕೆಯೊದಗಿಸಿದಂತಾಗುತ್ತದೆ ಎಂಬುದು ಶ್ರೀಹರ್ಷ-ಮಮತ ಅಭಿಮತ.

ಈಗಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ ಸುಸಜ್ಜಿತವಾಗಿದ್ದರೂ ಅದು ರಸ್ತೆ ವಿಸ್ತರಣೆಯಿಂದ ಸಂಪೂರ್ಣವಾಗಿ ಇಲ್ಲವಾಗಲಿದೆ. ಇದೇ ಶಾಲೆಯಲ್ಲಿ ಹಲೆಯ ವಿದ್ಯಾರ್ಥಿಗಳ ಸಂಘ ಮತ್ತು ಎಸ್.ಡಿ.ಎಂ.ಸಿ ನೇತೃತ್ವದಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿ ಆರಂಭಿಸಲಾಗಿದ್ದು 50 ಮಕ್ಕಳಿದ್ದಾರೆ. ಇಬ್ಬರು ಶಿಕ್ಷಕರಿದ್ದು ಅವರಿಗೆ ಈ ಎರಡು ಸಂಘಗಳಿಂದ ಸಂಬಳ ನೀಡಲಾಗುತ್ತಿದೆ. ಪ್ರಸಕ್ತ ವರ್ಷ 300 ಮಕ್ಕಳು ಶಾಲೆಗೆ ಪ್ರವೇಶ ಮಾಡುವಂತೆ ತಯಾರಿ ನಡೆಯುತ್ತಿದೆ ಎಂದು ಡಮರುಗ ಉಮೇಶ್ ಹೇಳಿದ್ದಾರೆ.

ಮೂವತ್ತು ಗುಂಟೆ ಜಮೀನಿನಲ್ಲಿ ಆಟದ ಮೈದಾನವೂ ಇರಲಿದೆ. ಈ ಕಾರ್ಯಕ್ಕೆ ಮುಖ್ಯಶಿಕ್ಷಕರು, ಗ್ರಾಮ ಪಂಚಾಯಿತಿ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರು ಸಂತಸ ವ್ಯಕ್ತಪಡಿಸಿದ್ದಾರೆ. ಇಂತಹದ್ದೊಂದು ಕಾರ್ಯದಿಂದ ನಮ್ಮ ಶಾಲೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳಗೊಳ್ಳಲಿದೆ ಎಂದು ಹೇಳಿದ್ದಾರೆ. ಆಧುನಿಕತೆಗೆ ತಕ್ಕ ಹಾಗೆ ಈ ಶಾಲೆ ನಿರ್ಮಾಣವಾಗಲಿದ್ದು, ಮಕ್ಕಳ ಕಲಿಕೆ ಅನುಕೂಲವಾಗಲಿದೆ. ಗ್ರಾಮದ ಹೊರಭಾಗದಲ್ಲಿ ಈ ಶಾಲೆ ನಿರ್ಮಾಣ ವಾಗುತ್ತಿದ್ದು, ಪ್ರಶಾಂತ ವಾತಾವರಣ ಇರಲಿದೆ ಎಂದು ಹರ್ಷ ವ್ಯಕ್ತಿಪಡಿಸಿದ್ದಾರೆ. ಇಂತಹದ್ದೊಂದು ಮಾದರಿ ಕಾರ್ಯಕ್ಕೆ ಮುಂದಾದ ಶ್ರೀಹರ್ಷ ಮತ್ತು ಮಮತಾ ದಂಪತಿಗಳಿಗೊಂದು ಸೆಲ್ಯೂಟ್‌ ಇರಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ‘ಕೋಮು ದ್ವೇಷದ ಪೋಸ್ಟ್‌’ನ್ನು ತೆಗೆದು ಹಾಕುವಂತೆ ‘ಎಕ್ಸ್‌’ಗೆ ಸೂಚಿಸಿದ ಚು.ಆಯೋಗ

0
ಬಿಜೆಪಿ ಕರ್ನಾಟಕ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕೋಮು ದ್ವೇಷದ ಪೋಸ್ಟ್‌ನ್ನು ತೆಗೆದುಹಾಕಲು ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣ ಎಕ್ಸ್‌ಗೆ ಸೂಚನೆಯನ್ನು ನೀಡಿದೆ. ಭಾರತೀಯ ಚುನಾವಣಾ ಆಯೋಗ ಹೊರಡಿಸಿದ ಆದೇಶದಲ್ಲಿ ಜಂಟಿ ನಿರ್ದೇಶಕರು ಮತ್ತು...