Homeಆರೋಗ್ಯಕೊರೊನಾ ವೈರಸ್ ಹಾಸ್ಯಾಸ್ಪದ ಮತ್ತು ಅತಾರ್ಕಿಕ ಸಮೂಹ ಸನ್ನಿ

ಕೊರೊನಾ ವೈರಸ್ ಹಾಸ್ಯಾಸ್ಪದ ಮತ್ತು ಅತಾರ್ಕಿಕ ಸಮೂಹ ಸನ್ನಿ

- Advertisement -
- Advertisement -

ವೆಲ್ಲೂರಿನ ಸಿಎಂಸಿ ಆಸ್ಪತ್ರೆಯ ಪ್ರೊಫೆಸರ್ ಗಗನ್‍ದೀಪ್ ಕಾಂಗ್ ಅವರು ಅಂತರ್ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳನ್ನೆದುರಿಸುವ ಸಿದ್ಧತೆಗಳ ಆವಿಷ್ಕಾರ ಕೇಂದ್ರದ ಉಪ ಮುಖ್ಯಸ್ಥರೂ ಆಗಿದ್ದಾರೆ. ಅಂತಹವರೂ ಸೇರಿದಂತೆ ಜಗತ್ತಿನ ಹಲವು ತಜ್ಞರು ಈ ಸಮೂಹ ಸನ್ನಿ ಹಾಸ್ಯಾಸ್ಪದವೆಂಬುದನ್ನು ಬೇರೆ ಬೇರೆ ಮಾತುಗಳಲ್ಲಿ ಹೇಳುತ್ತಿದ್ದಾರೆ. ಆದರೆ, ಎಲ್ಲಾ ಮಾತುಗಳಾಚೆ ಹೇಳುವ ಎಚ್ಚರಿಕೆಯ ಸೂಚನೆಗಳನ್ನೇ ಜನರು ಹೆಚ್ಚೆಚ್ಚು ಪ್ರಚಾರಕ್ಕೆ ತರುತ್ತಾರೆ; ಅದನ್ನು ಉತ್ಪ್ರೇಕ್ಷಿಸಿ ಹರಡಲು ಮಾಧ್ಯಮಗಳು ಕಾಯುತ್ತಿರುತ್ತವೆ.

ಈ ಲೇಖನ ಬರೆಯಲು ಶುರು ಮಾಡುವ ಹೊತ್ತಿಗೆ ಕೊರೊನಾ ವೈರಸ್ ಎಂಬುದು ಒಂದು ಅತ್ಯಂತ ಮಾರಣಾಂತಿಕ ಕಾಯಿಲೆಯೇನೋ ಎಂಬ ಭಾವನೆ ಹೆಚ್ಚಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು 5ನೇ ತರಗತಿಯವರೆಗಿನ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದ ಉಳಿದ ಅವಧಿಗೆ ರಜೆ ಘೋಷಿಸಿದೆ. ದೇಶದ ಯಾವುದೇ ಕಂಪೆನಿಯ ಮೊಬೈಲ್‍ಗೆ ಯಾರೇ ಫೋನ್ ಮಾಡಿದರೂ ಕೆಮ್ಮಿನ ಶಬ್ದ ಕೇಳುತ್ತಿದೆ. ಫೋನ್ ರಿಸೀವ್ ಮಾಡಿದವರದ್ದಲ್ಲ; ಕೊರೊನಾ ವೈರಸ್‍ನ ಕುರಿತು ಜಾಗೃತಿ ಮೂಡಿಸುವ ಸಂದೇಶದ ಭಾಗವಾಗಿ! ನಿನ್ನೆ ಮುಂಬೈ ಷೇರುಪೇಟೆ ದಾಖಲೆ ಪ್ರಮಾಣದ ಕುಸಿತ ಕಂಡಿದ್ದು, ಅದಕ್ಕೆ ಸೌದಿ ಅರೇಬಿಯಾ ಸರ್ಕಾರದ ನೀತಿಯಿಂದ ತೈಲ ಬೆಲೆ ಕುಸಿದಿದ್ದಕ್ಕಿಂತ ಕೊರೊನಾ ವೈರಸ್‍ನಿಂದ ಪ್ರಪಂಚದ ಆರ್ಥಿಕತೆಯೇ ಕುಸಿಯುವ ಭೀತಿ ಉಂಟಾಗಿರುವುದು ಕಾರಣ ಎಂದು ಬಹುತೇಕ ಪತ್ರಿಕೆಗಳು ಮುಖಪುಟದ ವರದಿ ಪ್ರಕಟಿಸಿವೆ.

ಸದ್ಯದ ಹೊತ್ತಿನಲ್ಲಿ ಇದಕ್ಕಿಂತ ಹಾಸ್ಯಾಸ್ಪದವಾದ ಮತ್ತೊಂದು ಸಂಗತಿ ಪ್ರಪಂಚದಲ್ಲಿ ಸಂಭವಿಸುತ್ತಿಲ್ಲ ಎಂದು ಕನಿಷ್ಠ ವೈದ್ಯಕೀಯ ಜ್ಞಾನ ಇರುವ ಯಾರು ಬೇಕಾದರೂ ಹೇಳಬಹುದಿತ್ತು. ಆದರೆ ವೈದ್ಯಕೀಯ ಮಾಹಿತಿಯನ್ನೂ ಮುಂದಿಟ್ಟುಕೊಂಡು ಹೆಚ್ಚೆಚ್ಚು ಆತಂಕವನ್ನು ಸೃಷ್ಟಿ ಮಾಡುವ ಕೆಲಸವನ್ನು ಮಾಧ್ಯಮಗಳು ಮಾತ್ರವಲ್ಲದೇ ಸರ್ಕಾರವೂ ಮಾಡುತ್ತಿದೆ.

ನಿಜವಾಗಲೂ ಈ ಸಂದರ್ಭದಲ್ಲಿ ಕೊರೊನಾ ವೈರಸ್‍ಗೆ ಸಂಬಂಧಿಸಿದ ದೊಡ್ಡದೊಂದು ರೋಗ ಪ್ರಪಂಚವನ್ನು ಆವರಿಸಿದೆ. ಅದು ಆತಂಕವನ್ನು ಹರಡುವ ರೋಗ. ವೈರಸ್ ಇದೆ; ನೆಗಡಿಯ ವೈರಸ್. ಇದುವರೆಗೆ ಇದ್ದ ಕೊರೊನಾ ವೈರಸ್ಸೇ ಸ್ವಲ್ಪ ಮ್ಯುಟೇಷನ್ ಆಗಿ (ಅಂದರೆ ಅದರ ಜೀನ್‍ನಲ್ಲಿ ವ್ಯತ್ಯಾಸ ಆಗಿ) ಹೊಸದೊಂದು ವೈರಸ್ ಸೃಷ್ಟಿಯಾಗಿದೆ. ಅದನ್ನು ಕೋವಿದ್ 19 ಎಂದು ಕರೆಯಲಾಗಿದೆ. ಹೊಸಾ ವೈರಸ್ ಆದ್ದರಿಂದ ಅದಕ್ಕೆ ಶಕ್ತಿ ಹೆಚ್ಚು. ಮನುಷ್ಯರು ಅದನ್ನು ಎದುರಿಸಲು ಸ್ವಲ್ಪ ಸಮಯ ಬೇಕು. ಹಾಗಂತ ಇದು ಬಹಳ ಮಾರಣಾಂತಿಕ ವೈರಸ್ ಅಲ್ಲ. ನಿಜ ಹೇಳಬೇಕೆಂದರೆ ಸಾರ್ಸ್, ಎಬೋಲಾಗಳಿಗಿಂತ ಕಡಿಮೆ ಶಕ್ತಿಯ ವೈರಸ್. ಶೇ.80ಕ್ಕೂ ಹೆಚ್ಚು ಸಾವುಗಳು ಆಗಿರುವುದು ಬಹಳ ವಯಸ್ಸಾದವರು, ಅದರಲ್ಲೂ ಬೇರೇನೋ ಕಾಯಿಲೆ ಇದ್ದವರು. ಫೆಬ್ರವರಿ ಕೊನೆಯ ಭಾಗದವರೆಗೆ ಸಣ್ಣ ಮಕ್ಕಳು ಈ ವೈರಸ್ ಸೋಂಕಿನಿಂದ ಸತ್ತ ಒಂದೂ ಪ್ರಕರಣ ವರದಿಯಾಗಿರಲಿಲ್ಲ.

ಆತಂಕವನ್ನು ಹರಡುವ ರೋಗದ ಕುರಿತು ಹೋಗುವ ಮುನ್ನ ಒಂದು ಮಾತನ್ನು ಹೇಳಬೇಕು. ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆ ಮನೆಯಲ್ಲಿ ಅಥವಾ ಕೆಲಸ ಮಾಡುವ ಜಾಗದಲ್ಲಿ ಯಾರಿಗಾದರೂ ಬಂದಿದೆ ಎಂದಿಟ್ಟುಕೊಳ್ಳಿ. ಆಗ ನೀವು ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯಲು ಏನು ಮಾಡಬೇಕೆಂದು ವೈದ್ಯರನ್ನು ಕೇಳಿದರೆ ಅವರೇನು ಹೇಳುತ್ತಾರೆ? ಸೀನುವಾಗ ಎಚ್ಚರವಹಿಸಿ; ಬೇರೆಯವರಿಗೂ ಬಂದೀತು. ಅಕ್ಕಪಕ್ಕ ನೆಗಡಿ ಸೀನು ಇರುವವರಿದ್ದರೆ ಹುಷಾರು. ಸ್ವಲ್ಪ ದೂರ ನಿಲ್ಲಿ. ಅಕಸ್ಮಾತ್ತಾಗಿ ಅವರು ಸೀನಿರುವ ಜಾಗದಲ್ಲಿ ನೀವು ಮುಟ್ಟಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಕೈಗಳನ್ನು ಮೂಗು, ಬಾಯಿ, ಕಣ್ಣು ಒಟ್ಟಾರೆ ಮುಖದ ಸಮೀಪ ತೆಗೆದುಕೊಂಡು ಹೋಗಬೇಡಿ. ಕೈಗಳನ್ನು ಸರಿಯಾಗಿ ತೊಳೆದರೆ ವೈರಸ್ ಹೋಗಿಬಿಡುತ್ತದೆ. ಏನಾದರೂ ಒಳ್ಳೇ ಸೋಪಿನಿಂದ ತೊಳೆದರೆ ಉತ್ತಮ.
ಗಮನಿಸಿ, ಬಹುತೇಕ ಪರಿಣಿತ ವೈದ್ಯರು ಕೊರೊನಾ ವೈರಸ್ ಬಗ್ಗೆ ಹೇಳುತ್ತಿರುವುದು ಇಷ್ಟೇ. ಅಂದರೆ ಸಾಮಾನ್ಯ ನೆಗಡಿ, ಫ್ಲೂ ಬರದೇ ಇರಲು ಏನು ಮಾಡಬೇಕೋ ಅದನ್ನೇ. ಜೊತೆಗೆ ಏನೋ ಆಗಬಾರದ್ದು ಆಗಿ ಹೋಗಿದೆ ಎಂಬಂತೆ ಯಾವ ವೈದ್ಯರೂ ಹೇಳುತ್ತಿಲ್ಲ. ಹಾಗಾದರೆ ಆಗಬಾರದ್ದು ಆಗಿರುವುದು ಎಲ್ಲಿ? ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ.

ಇನ್ನೂ ಕೆಲವು ಅಂಕಿಅಂಶಗಳನ್ನು ಗಮನಿಸೋಣ. ಇದುವರೆಗೆ ಜಗತ್ತಿನಲ್ಲಿ ಈ ಸೋಂಕು ಪತ್ತೆಯಾಗಿರುವುದು 1,16,871 ಜನರಲ್ಲಿ. ಅವರಲ್ಲಿ ಸತ್ತಿರುವುದು 4,095 ಜನರಲ್ಲಿ. ಒಂದು ವಿಚಾರ ನೆನಪಿನಲ್ಲಿಡಿ. ಕೋವಿದ್ 19 ವೈರಸ್ ಪ್ರವೇಶ ಮಾಡಿರಬಹುದಾದ ಜನರು ಒಂದು ಲಕ್ಷ + ಅಷ್ಟೇನಾ? ಖಂಡಿತಾ ಅಲ್ಲವೇ ಅಲ್ಲ. ಕನಿಷ್ಠ ಇದರ 6-7ಪಟ್ಟು ಜನರಾದರೂ ಇದ್ದಾರು. 5ರಲ್ಲಿ ನಾಲ್ಕು ಜನಕ್ಕೆ ಸಣ್ಣ ನೆಗಡಿಗಿಂತ ಹೆಚ್ಚೇನೂ ಆಗದೇ ಸರಿ ಹೋಗಿಬಿಟ್ಟಿದ್ದಾರೆ. ಬಹಳ ಹೆಚ್ಚಾದವರಲ್ಲಿ ಕೆಲವರಿಗೆ ಗಂಟಲು ಅಥವಾ ಮೂಗಿನಲ್ಲಿ ಹತ್ತಿಯಿಂದ ಉಜ್ಜಿ (swab) ಪರೀಕ್ಷೆಗೆ (PCR/RTPCR) ಕಳಿಸಿದ್ದಾರೆ. ಅವರಲ್ಲಿ ಇಷ್ಟು ಜನರಲ್ಲಿ ಇದೆ ಎಂದು ಪತ್ತೆಯಾಗಿದೆ. ಇವುಗಳಲ್ಲಿ ಶೇ.98 ಕೇವಲ ನಾಲ್ಕು ದೇಶಗಳಲ್ಲಿ (ಚೈನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ) ಆಗಿದೆ.

ಭಾರತದಲ್ಲಿ ಈ ಲೇಖನ ಬರೆಯುವ ಹೊತ್ತಿಗೆ 56 ಕೇಸುಗಳು ಪತ್ತೆಯಾಗಿದ್ದು, ಒಂದೂ ಸಾವಾಗಿಲ್ಲ. ಆದರೆ, ದಿನದ 24 ಗಂಟೆ ಒಂದಲ್ಲಾ ಒಂದು ಚಾನೆಲ್ ಇದನ್ನು ಕಿಲ್ಲರ್ ವೈರಸ್ ಎಂದು ಕಿರುಚುತ್ತಿರುತ್ತದೆ. ಈ ಸಂದರ್ಭದಲ್ಲಿ ಮೀಡಿಯಾಗಳು ನಡೆದುಕೊಂಡ ರೀತಿಯ ಬಗ್ಗೆಯೇ ಕೆಲವು ಅಧ್ಯಯನಗಳಾಗಿವೆ. ಅವುಗಳ ಪ್ರಕಾರ ಬಿಬಿಸಿಯು ಪ್ರಕಟಿಸಿದ ‘ಕೊರೊನಾ ವೈರಸ್ ಸೋಂಕನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲಾಗಿದೆ’ ಎಂಬುದು ಫೇಸ್‍ಬುಕ್‍ನಲ್ಲಿ ಅತ್ಯಂತ ಹೆಚ್ಚು ಷೇರ್ ಆದ ವರದಿಯಂತೆ. ಟೈಂ ಮ್ಯಾಗಜೀನ್ ನಡೆಸಿದ ಅಧ್ಯಯನದ ಪ್ರಕಾರ 2019ರಲ್ಲಿ ಎಬೋಲಾ ಸೋಂಕು ಹರಡಿದಾಗ ಬಂದ ಲೇಖನಗಳಿಗಿಂತ 23 ಪಟ್ಟು ಹೆಚ್ಚು ಲೇಖನಗಳು ಈ ಸಾರಿ ಬಂದಿವೆ. ಜಗತ್ತಿನಲ್ಲಿ ಅತೀ ಹೆಚ್ಚು ಪ್ರಸಾರವುಳ್ಳ 100 ಪತ್ರಿಕೆಗಳ ಅಧ್ಯಯನದಲ್ಲಿ ಕಂಡುಬಂದಿರುವುದೇನೆಂದರೆ 9,387 ವರದಿಗಳು ಇದರ ಬಗ್ಗೆ ಈ ಅವಧಿಯಲ್ಲಿ ಬಂದಿದ್ದು, ಅವುಗಳಲ್ಲಿ 1,066 ವರದಿಗಳು ‘ಭಯ, ಆತಂಕ’ ಎಂದು ಪದೇ ಪದೇ ಹೇಳಿವೆ. ಅದರಲ್ಲೂ 50 ಬರಹಗಳು ‘ಕಿಲ್ಲರ್ ವೈರಸ್’ ಎಂಬ ಪದಗಳನ್ನು ಬಳಸಿವೆ. ಡೆಡ್ಲಿ ಡಿಸೀಸ್ ಎಂಬುದು ಅಂತಹುದೇ ಇನ್ನೊಂದು ಹೆಚ್ಚು ಬಳಕೆಯಾದ ಪದ.

ಭಾರತದ ಸುಮಾರು 135 ಕೋಟಿ ಜನರಲ್ಲಿ 56 ಜನರಿಗೆ ನೆಗಡಿಗಿಂತ ಹೆಚ್ಚು ಗಂಭೀರವಾದ ಖಾಯಿಲೆಯೊಂದು ಬಂದಿರುವ ಕುರಿತು ಖಾತರಿಯಾಗಿದೆ. ಕೆಲವರಿಗೆ ಮಾತ್ರ ಸಮಸ್ಯೆ ತೀವ್ರವಾಗಿದ್ದು, ಹಲವರು ಈಗಾಗಲೇ ಗುಣಮುಖರಾಗಿದ್ದು ಒಬ್ಬರೂ ಸತ್ತಿಲ್ಲ ಎಂಬುದು ಖಚಿತವಿದ್ದರೂ ನಮ್ಮಲ್ಲೂ ಕಿಲ್ಲರ್ ವೈರಸ್ ಎಂಬ ಪದ ಧಾರಾಳವಾಗಿ ಬಳಕೆಯಾಗುತ್ತಿದೆ.

ಎರಡು ದಿನಗಳ ಹಿಂದೆ ಸ್ವತಃ ಪ್ರಧಾನಮಂತ್ರಿಯವರೇ ಈ ಕುರಿತು ಮಾತನಾಡಿದರು. ಪಾಶ್ಚಾತ್ಯ ದೇಶಗಳಲ್ಲಿಯಂತೆ ಕೈಕುಲುಕುವುದು ಬೇಡ; ಕೈ ಮುಗಿಯೋಣ ಎಂದೂ ಹೇಳಿದರು. ಅದರ ಜೊತೆಗೆ ಯಾರೂ ಆತಂಕ ಹುಟ್ಟಿಸುವುದು, ಸುಳ್ಳು ಸುದ್ದಿ ಹರಡುವುದು ಬೇಡ ಎಂದರು. ಅವರು ಅದನ್ನು ಹೇಳುತ್ತಿರುವಾಗಲೇ ಅದೇ ಟಿವಿಯಲ್ಲಿ ಕೆಳಗೆ ‘ಕಿಲ್ಲರ್ ವೈರಸ್‍ಗೆ ಇನ್ನೆಷ್ಟು ಬಲಿ?’ ಎಂದು ಸ್ಕ್ರೋಲ್ ಆಗುತ್ತಿತ್ತು. ಕರ್ನಾಟಕದ ಆರೋಗ್ಯ ಇಲಾಖೆಯ ಆಯುಕ್ತರಾದ ಅಮರ್‍ಕುಮಾರ್ ಪಾಂಡೆಯವರು ಈ ವೈರಸ್ ಕುರಿತು ಸುಳ್ಳು ಸುದ್ದಿ ಹರಡಿ ಆತಂಕ ಸೃಷ್ಟಿಸುವವರ ಮೇಲೆ ಕ್ರಿಮಿನಲ್‍ಕೇಸು ಹಾಕುತ್ತೇನೆಂದು ಹೇಳಿರುವುದು ಒಂದೆಡೆ ವರದಿಯಾಗಿದೆ. ಆದರೆ ಯಾವ ಮಾಧ್ಯಮದವರ ಮೇಲೂ ಕೇಸು ಹಾಕಿದ್ದು ಇದುವರೆಗೆ ಗೊತ್ತಾಗಿಲ್ಲ.

ಮಾಧ್ಯಮಗಳ ಸ್ಥಿತಿ ಹೀಗಿರುವಾಗ ಇನ್ನು ಸೋಷಿಯಲ್ ಮೀಡಿಯಾದ ಕಥೆಯಂತೂ ಕೇಳುವುದೇ ಬೇಡ. ಅದರಲ್ಲಿ ಭೀಕರ ವೈರಸ್ ಬಗ್ಗೆ ಮಾತ್ರವಲ್ಲದೇ, ಜನರ ಪರೋಪಕಾರದ ಭಾಗವಾಗಿ ಅದಕ್ಕೆ ಮನೆ ಮದ್ದುಗಳೂ ಧಾರಾಳವಾಗಿ ಸಿಗುತ್ತವೆ. ‘ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಲ್ಲಿ ಯಾರಿಗಾದರೂ ಉಪಯೋಗಕ್ಕೆ ಬರುತ್ತದೆ. ತಪ್ಪದೇ ಷೇರ್ ಮಾಡಿ. ಜೀವ ಉಳಿಸಿ’ ಅಂತ ಒಕ್ಕಣೆಯ ಜೊತೆಗೆ ಷೇರ್ ಆಗುತ್ತವೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬದವರ ಜೀವ ಉಳಿಸಲು ಕನಿಷ್ಠ ಷೇರ್ ಸಹಾ ಮಾಡದಷ್ಟು ಉಪಕಾರಿ ಗುಣದವರು ನೀವಾಗದಿದ್ದರೆ ಹೇಗೆ? ಷೇರ್ ಮಾಡಿ. ಅದರಲ್ಲಿ ಅಂತಹ ಅಪಾಯಕಾರಿಯಾದ ಮದ್ದೂ ಇಲ್ಲ, ಯಾರಿಗೂ ಹಣ ಮಾಡುವ ಉದ್ದೇಶವೂ ಇಲ್ಲ ಎಂದೇ ಇಟ್ಟುಕೊಳ್ಳೋಣ. ಆದರೆ, ಭಯವನ್ನು ಹರಡುವ ಕೆಲಸವಂತೂ ಆಗಿಯೇ ತೀರುತ್ತದೆ.

ಅಂತಿಮವಾಗಿ ವಿಶ್ವ ಆರೋಗ್ಯ ಸಂಸ್ಥೆಯೇ ಇದನ್ನೊಂದು ಜಾಗತಿಕ ತುರ್ತುಸ್ಥಿತಿ ಎಂದುಬಿಟ್ಟಿದೆ. ವೆಲ್ಲೂರಿನ ಸಿಎಂಸಿ ಆಸ್ಪತ್ರೆಯ ಪ್ರೊಫೆಸರ್ ಗಗನ್‍ದೀಪ್ ಕಾಂಗ್ ಅವರು ಅಂತರ್ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳನ್ನೆದುರಿಸುವ ಸಿದ್ಧತೆಗಳ ಆವಿಷ್ಕಾರ ಕೇಂದ್ರದ ಉಪ ಮುಖ್ಯಸ್ಥರೂ ಆಗಿದ್ದಾರೆ. ಅಂತಹವರೂ ಸೇರಿದಂತೆ ಜಗತ್ತಿನ ಹಲವು ತಜ್ಞರು ಈ ಸಮೂಹ ಸನ್ನಿ ಹಾಸ್ಯಾಸ್ಪದವೆಂಬುದನ್ನು ಬೇರೆ ಬೇರೆ ಮಾತುಗಳಲ್ಲಿ ಹೇಳುತ್ತಿದ್ದಾರೆ. ಆದರೆ, ಎಲ್ಲಾ ಮಾತುಗಳಾಚೆ ಹೇಳುವ ಎಚ್ಚರಿಕೆಯ ಸೂಚನೆಗಳನ್ನೇ ಜನರು ಹೆಚ್ಚೆಚ್ಚು ಪ್ರಚಾರಕ್ಕೆ ತರುತ್ತಾರೆ; ಅದನ್ನು ಉತ್ಪ್ರೇಕ್ಷಿಸಿ ಹರಡಲು ಮಾಧ್ಯಮಗಳು ಕಾಯುತ್ತಿರುತ್ತವೆ. ಎಲ್ಲವನ್ನೂ ಉತ್ಪ್ರೇಕ್ಷಿಸಿ (ಹಲವು ಸಾರಿ ಸುಳ್ಳುಗಳನ್ನೇ) ಪ್ರಸಾರ ಮಾಡುವ ಐಟಿ ಸೆಲ್‍ಗಳು ಸಾಮಾಜಿಕ ಜಾಲತಾಣಗಳ ನೀತಿ ಸಂಹಿತೆ ರೂಪಿಸಿರುವ ಕಾಲದಲ್ಲಿ ನಾವಿದ್ದೇವೆ. ಹಾಗಾಗಿ ಅಪಾಯ ಇನ್ನೂ ಹೆಚ್ಚಾಗಿದೆ.
ಈ ರೋಗಕ್ಕೆ ಮದ್ದು ಸುಲಭಕ್ಕೆ ಸಿಕ್ಕುವಂತೆ ಕಾಣುತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....