ಒಂದರಿಂದ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳ ಪರಿಶೀಲನೆ ಮಾಡಿರುವ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಒಬ್ಬರೇ ಇಲ್ಲಿಯವರೆಗೆ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದು, ಸಮಿತಿಯ ಸದಸ್ಯರ್ಯಾರೂ ವಿವಾದದ ಕುರಿತು ಮಾತನಾಡಲು ಸಿದ್ಧರಿಲ್ಲ. ಈಗ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಲು ಸದಸ್ಯರೆಲ್ಲರೂ ಹಿಂದೇಟು ಹಾಕುತ್ತಿದ್ದಾರೆ.
ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಯಲ್ಲಿ ರೋಹಿತ್ ಚಕ್ರತೀರ್ಥ ಸೇರಿದಂತೆ ಏಳು ಜನರು ಸದಸ್ಯರಿದ್ದರು. ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ರಾಜರಾಮ್ ಹೆಗ್ಗಡೆ, ಬೆಂಗಳೂರಿನ ವಿವಿಎಸ್ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯರಾದ ಸತ್ಯಪ್ರಕಾಶ್, ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಾಂಶುಪಾಲ ರಂಗನಾಥ, ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟ ವಿವೇಕಾನಂದ ಗಿರಿಜನ ಪ್ರೌಢಶಾಲೆಯ ಬಿ.ಜಿ.ವಾಸುಕಿ, ಕೊಡಿಯಾಲ್ ಬೈಲ್ನ ಡಾ.ಅನಂತಕೃಷಣ ಭಟ್, ಮಿಥಿಕ್ ಸೊಸೈಟಿಯ ಸಂಶೋಧಕ ವಿಠಲ್ ಪೋತೇದಾರ್ ಸಮಿತಿಯಲ್ಲಿ ಸದಸ್ಯರಾಗಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಠ್ಯಪುಸ್ತಕಗಳನ್ನು ಉಳಿಸಿಕೊಂಡು ಸಮಿತಿಯನ್ನು ಸರ್ಕಾರ ವಿಸರ್ಜನೆ ಮಾಡಿದೆ. ಆದರೆ ಸಮಿತಿ ಮಾಡಿರುವ ಎಡವಟ್ಟುಗಳು ಚರ್ಚೆಯಾಗುತ್ತಲೇ ಇವೆ. ಸರ್ಕಾರ ಪರಿಷ್ಕೃತ ಪಠ್ಯಪುಸ್ತಕ ತಪ್ಪುಗಳನ್ನು ತಿದ್ದುವುದಾಗಿ ಹೇಳುತ್ತಲೇ ಬಂದಿದೆ. ಮಕ್ಕಳ ಶಿಕ್ಷಣ ಡೋಲಾಯಮಾನವಾಗಿದ್ದು, ಇದಕ್ಕೆ ಕಾರಣವಾಗಿರುವ ಸಮಿತಿಯ ಸದಸ್ಯರು ಮೌನಕ್ಕೆ ಸಂದಿದ್ದಾರೆ. ಇತ್ತ ಶಿಕ್ಷಣ ಸಚಿವರ ಆಗಿರುವ ತಪ್ಪುಗಳನ್ನು ತಿದ್ದು ಮಾತನಾಡುತ್ತಿದ್ದಾರೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, “ಭಾರೀ ತಪ್ಪುಗಳೇನೂ ಆಗಿಲ್ಲ. ಕೆಲವೇ ಕೆಲವು ಆಗಿವೆ. ಆಗಿರುವುದನ್ನು ಸರಿ ಮಾಡುತ್ತೇವೆ. ಈ ಹಿಂದಿನ ಸಮಿತಿಯ ಕಾಲದಲ್ಲಿ ಆಗಿರುವ ತಪ್ಪನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ಬಸವಣ್ಣನವರ ಪಾಠದಲ್ಲಿ ಕಾಂಗ್ರೆಸ್ ಕಾಲದಲ್ಲೇ ತಪ್ಪಾಗಿತ್ತು. ಈಗ ಒಂದಿಷ್ಟು ವೈಭವೀಕರಣ ಮಾಡುತ್ತಿದ್ದಾರೆ. ನಮ್ಮ ಪರಿಷ್ಕರಣೆಯಲ್ಲಿ ಆಗಿರುವ ತಪ್ಪುಗಳನ್ನು ನಾವು ಸರಿ ಮಾಡುತ್ತೇವೆ. ಸಂವಿಧಾನ ಶಿಲ್ಪಿ ಎಂಬುದನ್ನು ಪಠ್ಯದಲ್ಲಿ ಬಿಡಲಾಗಿದೆ. ಅದನ್ನೂ ಸೇರಿಸಿ ಪಾಠ ಮಾಡಿಸುತ್ತೇವೆ” ಎಂದರು.
ಸಚಿವರ ಪ್ರತಿಕ್ರಿಯೆ ಬಳಿಕ ಸಮಿತಿಯ ಎಲ್ಲ ಸದಸ್ಯರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. ಯಾರೊಬ್ಬರೂ ಈಗ ಆಗಿರುವ ತಪ್ಪುಗಳ ಕುರಿತು ಪ್ರತಿಕ್ರಿಯೆ ನೀಡಲು ಮುಂದೆ ಬಂದಿಲ್ಲ.
ಡಾ.ರಾಜಾರಾಮ್ ಹೆಗ್ಗಡೆ ಅವರನ್ನು ಅವರನ್ನು ಸಂಪರ್ಕಿಸಿದಾಗ, “ಇರಲಿ ಬಿಡಿ, I don’t want to talk anything about that” ಎಂದರು. “ತಪ್ಪುಗಳನ್ನು ಸರ್ಕಾರ ತಿದ್ದುವುದಾಗಿ ಹೇಳಿದೆ. ಅದಕ್ಕೂ ಮೇಲೆ ಯಾವುದೇ ವಿಚಾರಕ್ಕೆ ನಾನು ಪ್ರವೇಶ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿರಿ: ಬ್ರಾಹ್ಮಣರ ಪಠ್ಯಗಳನ್ನು ಕನ್ನಡ ಮಕ್ಕಳು ಏಕೆ ಓದಬೇಕು?
ಸತ್ಯಪ್ರಕಾಶ್ ಅವರು ಮಾತನಾಡಿ, “ನಾನು ಹೊರಗಡೆ ಇದ್ದೇನೆ. ನಿಮ್ಮ ಧ್ವನಿ ಕೇಳಿಸುತ್ತಿಲ್ಲ. ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ” ಎಂದರು.
ವಿಠ್ಠಲ್ ಪೋತೇದಾರ್ ಮಾತನಾಡಿ, “ಸದಸ್ಯರ್ಯಾರೂ ಮಾತನಾಡಬೇಡಿ ಎಂದು ಅಧ್ಯಕ್ಷರು ಸೂಚಿಸಿದ್ದಾರೆ. ಅದಕ್ಕೆ ನಾವು ಮಾತನಾಡುತ್ತಿಲ್ಲ. ನಾವು ಮಾಡೋದು ಮಾಡಿದ್ದೇವೆ. ಅದನ್ನು ಜಾರಿ ಮಾಡುವುದು ಅಥವಾ ರದ್ದು ಮಾಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಇದರ ಬಗ್ಗೆ ಪ್ರತಿಕ್ರಿಯೆ ನೀಡಲು ಆಸಕ್ತಿ ಇಲ್ಲ” ಎಂದು ತಿಳಿಸಿದರು.
ಅನಂತಕೃಷಣ ಭಟ್ ಮಾತನಾಡಿ, “ನಾವು ಏನೂ ಹೇಳಲು ಬರುವುದಿಲ್ಲ. ಸಮಿತಿ ವಿಸರ್ಜನೆಯಾಗಿದೆ” ಎಂದು ಹೇಳಿದರು. ಬಿ.ಜಿ.ವಾಸುಕಿ, ಡಾ.ರಂಗನಾಥ್ ಅವರನ್ನು ಸಂಪರ್ಕಿಸಲು ಸಾಕಷ್ಟು ಸಲ ಪ್ರಯತ್ನಿಸಿದೆವು. ಅವರು ಕರೆಯನ್ನೇ ಸ್ವೀಕರಿಸಲಿಲ್ಲ.