ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪೊಲೀಸ್ ಕಾನ್ಸ್ಟೇಬಲ್ಗಳು ಮತ್ತು ಮೇಲಧಿಕಾರಿಗಳ ನೇಮಕಾತಿ ಮಾಡದೇ ಇರುವ ಕಾರಣಕ್ಕೆ ಪೊಲೀಸರು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದ ಕಾರಣ ಪೊಲೀಸ್ ಇಲಾಖೆಯಲ್ಲಿ ಮಾನವ ಸಂಪನ್ಮೂಲ ಕೊರತೆಯ ಪರಿಣಾಮದ ಬಗ್ಗೆ ಜೆ & ಕೆ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಿಂಗ್ ಪ್ರಕಾರ, 4,000ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ಗಳ ಪೋಸ್ಟ್ಗಳು ಖಾಲಿ ಇವೆ ಮತ್ತು ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಜಮ್ಮು ಮತ್ತು ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿ (JKSSB)ಯು ವಿಫಲವಾಗಿದೆ.
”ನಮ್ಮಲ್ಲಿ 4,000ಕ್ಕೂ ಹೆಚ್ಚು ಖಾಲಿ ಹುದ್ದೆಗಳಿವೆ. ಈ ಕೊರತೆಯು ಪೊಲೀಸ್ ಇಲಾಖೆಯಾದ್ಯಂತ ಕಂಡುಬರುತ್ತಿದೆ” ಎಂದು ಸಿಂಗ್ ಹೇಳಿದರು.
ಪೊಲೀಸ್ ಸಿಬ್ಬಂದಿಯ ನೇಮಕಾತಿಯಲ್ಲಿ ಕೇಂದ್ರಾಡಳಿತ ಪ್ರದೇಶದ ಆಡಳಿತದ ವೈಫಲ್ಯದ ಬಗ್ಗೆ ಇದೇ ಮೊದಲ ಬಾರಿಗೆ ಜೆ & ಕೆ ಪೊಲೀಸ್ ಮುಖ್ಯಸ್ಥರು ಸಾರ್ವಜನಿಕವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಮತ್ತು ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ನಂತರ, ಆಡಳಿತಾತ್ಮಕ ಬದಲಾವಣೆಗಳ ಭಾಗವಾಗಿ, ಪೊಲೀಸ್ ಇಲಾಖೆಯಲ್ಲಿನ ನೇಮಕಾತಿಯನ್ನು ಸಹ ಪೊಲೀಸ್ ಇಲಾಖೆಯಿಂದ ತೆಗೆದು ಜಮ್ಮು ಮತ್ತು ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿಗೆ (JKSSB) ಹಸ್ತಾಂತರಿಸಲಾಯಿತು.
2022ರಲ್ಲಿ, ಮಂಡಳಿಯು 1,200 ಪೊಲೀಸ್ ಸಬ್-ಇನ್ಸ್ಪೆಕ್ಟರ್ಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿತು – ಇದು ಕೇಂದ್ರಾಡಳಿತ ಪ್ರದೇಶದ ಆಡಳಿತದ ಅಡಿಯಲ್ಲಿ ಮೊದಲ ಪ್ರಮುಖ ನೇಮಕಾತಿಯಾಗಿದೆ. ಆದರೆ, ಈ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಇದೆ. ಹಾಗಾಗಿಯೇ ಇದು ಜಮ್ಮು ಮತ್ತು ಕಾಶ್ಮೀರಿನಾದ್ಯಂತ ಉದ್ಯೋಗ ಆಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆಗಳು ನಡೆದವು. ಸಿಬಿಐ ತನಿಖೆಯ ಪ್ರಕಾರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆದಿದ್ದು, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಪರೀಕ್ಷೆಯ ಪತ್ರಿಕೆಗಳು ₹ 20 ರಿಂದ 30 ಲಕ್ಷಕ್ಕೆ ಮಾರಾಟವಾಗಿವೆ ಎಂದು ಹೇಳಲಾಗಿದೆ.
ಆನಂತರ ನೇಮಕಾತಿ ಪಟ್ಟಿಯನ್ನು ರದ್ದುಗೊಳಿಸಿದ ನಂತರ, J&K ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೊಸ ಪರೀಕ್ಷೆ ಘೋಷಿಸಿದರು. ಪಾರದರ್ಶಕ ಮತ್ತು ನ್ಯಾಯಯುತ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಭರವಸೆ ನೀಡಿದರು. ಆದರೆ ಹೊಸ ಪರೀಕ್ಷೆಗಳನ್ನು ಘೋಷಿಸಿದ ಕೂಡಲೇ, ಪರೀಕ್ಷೆಗಳನ್ನು ನಡೆಸಲು ಕಳಂಕಿತ ಮತ್ತು ಕಪ್ಪುಪಟ್ಟಿಗೆ ಸೇರಿದ ಏಜೆನ್ಸಿಗೆ ಗುತ್ತಿಗೆ ನೀಡುವ ಸರ್ಕಾರದ ನಿರ್ಧಾರವು ಸಾವಿರಾರು ಉದ್ಯೋಗ ಆಕಾಂಕ್ಷಿಗಳಿಗೆ ಮತ್ತು ನೇಮಕಾತಿ ಪ್ರಕ್ರಿಯೆಯ ನ್ಯಾಯಸಮ್ಮತತೆಗೆ ಮತ್ತೊಂದು ಹೊಡೆತವನ್ನು ನೀಡಿದೆ.
”ಮೊದಲು, ಪೊಲೀಸರು ತನ್ನದೇ ಆದ ಪ್ರಕ್ರಿಯೆಯ ಮೂಲಕ ನೇಮಕಾತಿಗಳನ್ನು ಮಾಡುತ್ತಿದ್ದರು. ಹೊಸ ಪ್ರಯೋಗವನ್ನು ಮಾಡಲಾಯಿತು ಮತ್ತು ಪ್ರಕ್ರಿಯೆಯನ್ನು ಬೇರೆ ಇಲಾಖೆಗೆ ಹಸ್ತಾಂತರಿಸಲಾಯಿತು. ಅಂದಿನಿಂದ, ಯಾವುದೇ ನೇಮಕಾತಿ ನಡೆಯುತ್ತಿಲ್ಲ” ಎಂದು ಸಿಂಗ್ ಹೇಳಿದರು.
ಇಲ್ಲಿಯವರೆಗೆ, ಸರ್ಕಾರದ ನೇಮಕಾತಿ ಸಂಸ್ಥೆ ಬಿಡುಗಡೆ ಮಾಡಿದ ನಾಲ್ಕು ಆಯ್ಕೆ ಪಟ್ಟಿಗಳನ್ನು ರದ್ದುಗೊಳಿಸಲಾಗಿದೆ. ಇವರನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಇದರಲ್ಲಿ ಭಾಗಿಯಾಗಿರುವ ಹಲವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಕೋಮುವಾದಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ರಮೇಶ್ ಬಿಧುರಿ ಚುನಾವಣಾ ಉಸ್ತುವಾರಿಯಾಗಿ ನೇಮಕ