ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯ ಹಿಂಸಾಚಾರ ಪ್ರಕರಣದಲ್ಲಿ ಮೇ 23ರಂದು ಬಂಧಿಸಿದ್ದ ಪಿಂಜ್ರಾ ತೋಡ್ ಕಾರ್ಯಕರ್ತೆ ಮತ್ತು ಜೆಎನ್ಯು ವಿದ್ಯಾರ್ಥಿ ದೇವಾಂಗನಾ ಕಾಳಿತಾಗೆ ದೆಹಲಿ ಹೈಕೋರ್ಟ್ ಇಂದು ಜಾಮೀನು ನೀಡಿದೆ.
ಫೆಬ್ರವರಿಯಲ್ಲಿ ದೇಶದಲ್ಲಿ ಭುಗಿಲೆದ್ದಿದ್ದ ಪೌರತ್ವ ನಿಷೇಧ ಕಾಯ್ದೆ ಹೋರಾಟ, ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರ ಸಾವಿರಾರು ಜನರನ್ನು ಬಂಧಿಸಿತ್ತು. ಅದರಲ್ಲಿ ದೇವಾಂಗನಾ ಕಾಳಿತಾ ಸಹ ಒಬ್ಬರಾಗಿದ್ದರು.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ 25,000 ರೂಪಾಯಿಯ ವೈಯಕ್ತಿಕ ಬಾಂಡ್ ಮೇಲೆ ಷರತ್ತುಬದ್ಧ ಜಾಮೀನು ನೀಡಿದ್ದಾರೆ.
ದೇವಾಂಗನಾ ಕಾಳಿತಾ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪತ್ರತಿಭಟನೆ ಕುರಿತು ಈಶಾನ್ಯ ದೆಹಲಿ ಗಲಭೆಗಳು ಮತ್ತು ದರಿಯಗಂಜ್ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಸದ್ಯ ಧರಿಯಾಗಂಜ್ ಮತ್ತು ದೆಹಲಿ ಹಿಂಸಾಚಾರ ಎರಡು ಪ್ರಕರಣಗಳಲ್ಲಿ ಜಾಮೀನು ದೊರಕಿದೆ.
ಈ ಹಿಂದೆಯೂ ದೇವಾಂಗನಾ ಕಾಳಿತಾ ವಿರುದ್ಧ ಧರಿಯಾಗಂಜ್ ಪ್ರತಿಭಟನೆಯ ಹಿಂಸಾಚಾರದಲ್ಲಿ ಅವರ ವಿರುದ್ಧ ಧೃಡವಾದ ಸಾಕ್ಷಿಗಳಿಲ್ಲ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಭಿನವ್ ಪಾಂಡೆ ತಿಳಿಸಿದ್ದರು.
ಇದನ್ನೂ ಓದಿ: JNU ವಿದ್ಯಾರ್ಥಿನಿ ದೇವಾಂಗನಾ ಕಾಳಿತಾ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ: ಜಾಮೀನು ಮಂಜೂರು
ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ದೇವಾಂಗನಾ ಕಾಳಿತಾ ಮತ್ತು ಸಂಘಟನೆಯ ಇನ್ನೊಬ್ಬ ಕಾರ್ಯಕರ್ತೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಗಲಭೆ, ಕಾನೂನು ಬಾಹಿರ ಕೆಲಸ ಮತ್ತು ಕೊಲೆ ಯತ್ನ ಸೇರಿ ಹಲವು ಕೇಸ್ಗಳನ್ನು ಇವರುಗಳ ಮೇಲೆ ಹಾಕಲಾಗಿತ್ತು.
ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ 24ರಂದು ನಡೆದಿದ್ದ ಹಿಂಸಾಚಾರದಲ್ಲಿ 53ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದರು. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇಂದಿಗೂ ಈ ಪ್ರಕರಣದಲ್ಲಿ ಹಲವು ಜನರನ್ನು, ಜೆಎನ್ಯು ವಿದ್ಯಾರ್ಥಿಗಳನ್ನು ಬಂಧಿಸಲಾಗುತ್ತಿದೆ.
ಇದನ್ನೂ ಓದಿ: ದೆಹಲಿ ಗಲಭೆ: ಜೆಎನ್ಯು ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಮತ್ತೆ ಬಂಧನ