ವಿವಾದಿತ ಕೃಷಿ ಕಾನೂನುಗಳ ರದ್ಧತಿಗೆ ಆಗ್ರಹಿಸಿ ನಡೆದ ಒಂದು ವರ್ಷದ ರೈತ ಹೋರಾಟದ ನೇತೃತ್ವ ವಹಿಸಿದ್ದ ರೈತ ನಾಯಕರಲ್ಲಿ ಒಬ್ಬರಾದ ರಾಕೇಶ್ ಟಿಕಾಯತ್ ತಾವು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮೀರತ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯ ಪಕ್ಷಗಳು ತಮ್ಮ ಪೋಸ್ಟರ್ಗಳಲ್ಲಿ ಅವರ ಫೋಟೋ ಅಥವಾ ಹೆಸರನ್ನು ಬಳಸದಂತೆ ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ.
“ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಹೋಗುವುದಿಲ್ಲ. ಯಾವುದೇ ರಾಜಕೀಯ ಪಕ್ಷಗಳು ತಮ್ಮ ಪೋಸ್ಟರ್ಗಳಲ್ಲಿ ನನ್ನ ಹೆಸರು ಅಥವಾ ಫೋಟೋವನ್ನು ಬಳಸಬಾರದು” ಎಂಬ ರಾಕೇಶ್ ಟಿಕಾಯ್ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್ವಾದಿ ನಿರ್ದೇಶಕ ಪ.ರಂಜಿತ್…!
ಈ ಹಿಂದೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ರಾಕೇಶ್ ಟಿಕಾಯತ್, ರೈತ ಹೋರಾಟವನ್ನು ಮುಂದಿಟುಕೊಂಡು ತಾವು ರಾಜಕೀಯವಾಗಿ ಮೇಲೆರಲು ಪ್ರಯತ್ನಿಸುತ್ತಿದ್ದಾರೆ ಎಂದು ಹಲವು ಮಂದಿ ಆರೋಪಿಸಿದ್ದರು.
ದೆಹಲಿ ಪೊಲೀಸ್ನಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು ತಮ್ಮ ಸರ್ಕಾರಿ ಕೆಲಸಕ್ಕೆ 1992-93 ರಲ್ಲಿ ರಾಜೀನಾಮೆ ನೀಡಿದ್ದರು.
2007 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮುಜಾಫರ್ನಗರದ ಖತೌಲಿ ಕ್ಷೇತ್ರದಿಂದ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಬಳಿಕ 2014 ರಲ್ಲಿ, ರಾಷ್ಟ್ರೀಯ ಲೋಕದಳ (RLD) ಪಕ್ಷದಿಂದ ಟಿಕೆಟ್ ಪಡೆದು ಅಮ್ರೋಹಾ ಜಿಲ್ಲೆಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ, ಎರಡು ಬಾರಿ ಸೋಲನುಭವಿಸಿದ್ದರು.
51 ವರ್ಷದ ರಾಕೇಶ್ ಟಿಕಾಯತ್ ಬುಧವಾರ ಮೀರತ್ನಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ. ಅವರು ಕಳೆದ ವರ್ಷದ ನವೆಂಬರ್ನಿಂದ ಗಾಜಿಪುರ ಗಡಿಯಲ್ಲಿನ ರೈತ ಹೋರಾಟವನ್ನು ಮುನ್ನಡೆಸುತ್ತಿದ್ದರು.