ನವೆಂಬರ್ 26 ರಂದು ಸಂವಿಧಾನ ದಿನದ ಅಭಿಯಾನದ ಅಂಗವಾಗಿ ಸಿಎಂಸಿಎ ಸಿದ್ದಪಡಿಸಿದ ಕೈಪಿಡಿಯಲ್ಲಿ ಅಂಬೇಂಡ್ಕರ್ ಅವರೊಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ಇರುವುದು ರಾಜ್ಯದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಸಾವಿರಾರು ಜನರು ಅದನ್ನು ವಿರೋಧಿಸಿದ್ದರಿಂದ ಶಿಕ್ಷಣ ಇಲಾಖೆ ಕೈಪಿಡಿಯನ್ನು ವಾಪಸ್ ಪಡೆದುಕೊಂಡಿದೆ. ಆದರೂ ಈ ಪ್ರಮಾದಕ್ಕಾಗಿ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕೆಂದು ಎಸ್ಎಫ್ಐ(SFI) ಒತ್ತಾಯಿಸಿದೆ.
ಕೈಪಿಡಿಯ ಪುಟ ಸಂಖ್ಯೆ 05 ರಲ್ಲಿ ಪ್ರಶ್ನೆ ಎರಡರಲ್ಲಿ ಸಂವಿಧಾನವನ್ನು ಯಾರು ಬರೆದರು? ಎಂಬ ಪ್ರಶ್ನೆಗೆ ಉತ್ತರ ಎನ್ನುವ ರೀತಿಯಲ್ಲಿ ” ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನದ ಪಿತಾಮಹ ಆಗಿರುತ್ತಾರೆ, ಜೊತೆಗೆ ಅವರೊಬ್ಬರೆ ಸಂವಿಧಾನ ಬರೆದಿಲ್ಲ” ಎಂದು ಉಲ್ಲೇಖಿಸಿದ್ದಾರೆ. ಇದು ವಿವಾದಾತ್ಮಕವಾಗಿದ್ದು ಸಿಎಂಸಿಎ ಸಂಸ್ಥೆಗೆ ಸಂವಿಧಾನ ರಚನೆಯ ಮಹತ್ವ ಹಾಗೂ ಸಂವಿಧಾನದ ಬಗ್ಗೆ ಗೌರವ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಕರಡು ರಚನಾ ಸಮಿತಿಯಲ್ಲಿದ್ದ ಏಳು ಜನರಲ್ಲಿ ಬಹುತೇಕರು ಅಂಬೇಡ್ಕರ್ ರವರಿಗೆ ಸಹಾಯ ಮಾಡಲಿಲ್ಲ. ಅವರೊಬ್ಬರ ಶ್ರಮದಿಂದಾಗಿ ಸಂವಿಧಾನ ರಚಿತವಾಗಿದೆ ಎಂದು ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ಟಿ.ಟಿ. ಕೃಷ್ಣಮಾಚಾರಿಯವರು ಉಲ್ಲೇಖಿಸಿರುವುದು ರಾಜ್ಯ ಸರಕಾರಕ್ಕೆ ನೆನಪಿಲ್ಲದಂತೆ ಕಾಣುತ್ತದೆ ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ ಕಿಡಿ ಕಾರಿದ್ದಾರೆ.
ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ಬರೆದಿಲ್ಲ ಎಂದು ಕೈಪಿಡಿಯಲ್ಲಿ ಬರೆಯುವ ಅಗತ್ಯವಾದರೂ ಏನಿತ್ತು? ಈ ರೀತಿ ಪ್ರಸ್ತಾಪಿಸುವುದರ ಉದ್ದೇಶ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರವನ್ನು ಗೌಣವಾಗಿಸುವುದಲ್ಲದೆ ಮತ್ತೇನು ಅಲ್ಲ. ರಾಜ್ಯ ಸರ್ಕಾರವು ಶಿಕ್ಷಣದಲ್ಲಿ ತನ್ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸಲು ಹೊರಟಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಇಲಾಖೆಯವರ ನಾಟಕವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಯಾವುದೇ ಪ್ರಸ್ಥಾಪ ಸರಕಾರದ ಅಥವಾ ಶಿಕ್ಷಣ ಸಚಿವರ/ ಇಲಾಖೆಯ ಗಮನಕ್ಕೆ ಇರದೆ ಅಂತಿಮವಾಗುವುದಿಲ್ಲ. ಸುರೇಶ್ ಕುಮಾರ್ ಹಾಗೂ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಎಸ್ಎಫ್ಐ ಅಧ್ಯಕ್ಷ ಅಂಬರೀಶ್ರವರು ಆರೋಪಿಸಿದ್ದಾರೆ.
ಈ ವಿವಾದಕ್ಕೆ ಸುರೇಶ್ ಕುಮಾರ ಅವರೇ ನೇರ ಹೊಣೆಯಾಗಿರುತ್ತಾರೆ. ವಿವಾದಾತ್ಮಕ ಹೇಳಿಕೆಯನ್ನು ಬರೆಯುವುದರ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ ಸಿಎಂಸಿಎ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಸಂಸ್ಥೆಯ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕಿದೆ ಮತ್ತು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಕೂಡಲೇ ರಾಜಿನಾಮೆ ನೀಡಬೇಕೆಂದು ಎಸ್ಎಫ್ಐ (SFI) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದ್ದು, ರಾಜ್ಯದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.