ಹೌದು ಇದು ನಂಬಲು ತುಸು ಕಷ್ಟವಾದ ಸುದ್ದಿ. ಆದರೂ ಸತ್ಯ ಏನೆಂದರೆ ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿಯನ್ನು ಕೇಂದ್ರ ಸರ್ಕಾರ ಪುನರ್ರಚಿಸಿದೆ. ಅದರಂತೆ ಈ ಸಮಿತಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷರಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ರವರು ಉಪಾಧ್ಯಕ್ಷರಾಗಿದ್ದಾರೆ.
ನೆಹರೂ ಕಂಡರೆ ಭಾರತದ ಪ್ರಧಾನಿ ಮೋದಿಯವರಿಗೆ ಆಗುವುದಿಲ್ಲ. ಇಂದಿನ ಹಲವು ಸಮಸ್ಯೆಗಳಿಗೆ ಮಾನ್ಯ ಮೋದಿಯವರು ನೆಹರೂರವರನ್ನು ದೂರುವುದುಂಟು. ಅಂತಹ ನೆಹರೂ ಹೆಸರಿನಲ್ಲಿ ಸ್ಮಾರಕ ಟ್ರಸ್ಟ್ಗೆ ಮೋದಿಯವರು ಅಧ್ಯಕ್ಷರಾಗುವುದೆಂದರೆ ಏನು ಎಂದು ಹಲವರು ಹುಬ್ಬೇರಿಸಿದ್ದಾರೆ.
ಈ ಮೊದಲು ಈ ಸಮಿತಿಯನ್ನು ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ಕರಣ್ ಸಿಂಗ್ ಪ್ರತಿನಿಧಿಸುತ್ತಿದ್ದರು. ಹೊಸದಾಗಿ ನೇಮಿಸಿರುವ ಸಮಿತಿಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರಮೇಶ್ ಪ್ರೋಖ್ರಿಯಾಲ್ ಸೇರಿದಂತೆ ಹಲವು ಸಚಿವರು ಮತ್ತು ಇಲಾಖೆಯ ಕಾರ್ಯದರ್ಶಿಗಳು, ಹಲವು ಮಂದಿ ವಿವಿಧ ವಿಭಾಗಗಳಿಂದ ಇದರ ಸದಸ್ಯರಾಗಿದ್ದಾರೆ.
ಕಾಂಗ್ರೆಸ್ ಮುಖಂಡ ಕರಣ್ ಸಿಂಗ್ರವರು ಮೋದಿ ಸರ್ಕಾರದ ಈ ನಡೆಯನ್ನು ತೀಷ್ಣವಾಗಿ ಟೀಕಿಸಿದ್ದಾರೆ. ನೆಹರೂರವರ ಭವ್ಯ ಇತಿಹಾಸವನ್ನು ತಿರುಚುವುದಕ್ಕಾಗಿ ಮೋದಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.
ಇನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ “ಉದಾರವಾದಿ ದನಿಗಳನ್ನು ಮತ್ತು ನೆಹರು ಸಿದ್ದಾಂತವನ್ನು ನಂಬಿದ್ದ ಎಲ್ಲರನ್ನು ಸಮಿತಿಯಿಂದ ಕೈಬಿಟ್ಟಿರುವುದು ಖಂಡನೀಯ” ಎಂದಿದ್ದಾರೆ.
ಕಾಂಗ್ರೆಸ್ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ “ಕೇಂದ್ರ ಸರ್ಕಾರವು ಎಲ್ಲವನ್ನು ರಾಜಕೀಯವಾಗಿ ನೋಡುವುದು ಸರಿಯಲ್ಲ, ಏಕಾಏಕಿ ಸದಸ್ಯರನ್ನು ಕೈಬಿಟ್ಟಿರುವುದು ಅನಿರೀಕ್ಷಿತ” ಎಂದಿದ್ದಾರೆ.
ಈ ಬಾರಿ ನೆಹರೂ ಸ್ಮಾರಕ ಮ್ಯೂಸಿಯಂ ಅನ್ನು ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ. ಅಲ್ಲದೇ ಭಾರತದ ಎಲ್ಲಾ ಪ್ರಧಾನಿಗಳಿಗೂ ಮ್ಯೂಸಿಂ ಮಾಡುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ಹೊಸ ಸಮಿತಿ ಕೆಲಸ ಮಾಡಲಿದೆ. ಹಾಗಾಗಿ ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಸ್ವತಂತ್ರ ನಂತರ ಆಧುನಿಕ ಭಾರತದ ನಿರ್ಮಾತೃ ಎಂದು ನೆಹರೂರವರನ್ನು ಅನೇಕರು ಸ್ಮರಿಸುತ್ತಾರೆ. ಮುಖ್ಯವಾಗಿ ಭಾರತದ ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದು, ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದ್ದು, ವೈಜ್ಞಾನಿಕ, ವೈಚಾರಿಕ ವಾತವರಣ ನಿರ್ಮಿಸಿದ್ದು ನೆಹರೂ ಸಾಧನೆಗಳಾಗಿವೆ ಎನ್ನುತ್ತಾರೆ. ಆದರೆ ಭಾರತದ ಅತಿ ಜನಪ್ರಿಯ ಪ್ರಧಾನಿಯೆನಿಸಿಕೊಳ್ಳಬೇಕು ಎಂಬ ಆಸೆಯಿರುವ ಮೋದಿಯವರಿಗೆ ಇದು ಪಥ್ಯವಲ್ಲ. ಹಾಗಾಗಿ ಸಂದರ್ಭ ಸಿಕ್ಕಾಗಲೆಲ್ಲಾ ನೆಹರೂರವರನ್ನು ಹಣಿಸುವ ಮೋದಿಯವರು ಈ ನೆಹರೂ ಸ್ಮಾರಕ ಸಮಿತಿಗೆ ಅಧ್ಯಕ್ಷರಾಗುತ್ತಿರುವುದು ಆಶ್ಚರ್ಯವಾಗಿದೆ.
ಮುಂದಿನ ದಿನಗಳಲ್ಲಿ ನೆಹರೂರವರನ್ನು ಯಾವ ರೀತಿ ಬಿಂಬಿಸಲಾಗುತ್ತದೆ ಎಂದು ಈಗಲೇ ಹೇಳಲಾಗುವುದಿಲ್ಲ. ಕಾದು ನೋಡಬೇಕಿದೆ ಅಷ್ಟೆ.