Homeಮುಖಪುಟಕರಾವಳಿಯ ಸಾರಾತಾಯಿ

ಕರಾವಳಿಯ ಸಾರಾತಾಯಿ

- Advertisement -
- Advertisement -

ಸಾರಾ ಅಬೂಬಕ್ಕರ್ ಅಂದರೆ ನನ್ನ ಮೊದಲ ನೆನಪು ಬಾಲ್ಯದಲ್ಲಿ ಕೇಳಿದ ರೇಡಿಯೊ ನಾಟಕ ’ಚಂದ್ರಗಿರಿಯ ತೀರದಲ್ಲಿ’. ಆ ದಿನಗಳಲ್ಲಿ ಅದು ಎಷ್ಟು ಅರ್ಥವಾಗಿತ್ತೀ ಬಿಟ್ಟಿತ್ತೋ, ಆದರೆ ತಟ್ಟಿತ್ತು. ಅಂದಿನಿಂದ ನಾನು ಸಾರಾ ಅಭಿಮಾನಿಯಾದೆ. ’ಚಂದ್ರಗಿರಿಯ ತೀರದಲ್ಲಿ’ ಮೂಲ ಕೃತಿ ಹಾಗು ಇತರ ಹಲವು ಕಥನಗಳನ್ನು ಓದಿದ್ದು ನಂತರದ ದಿನಗಳಲ್ಲಿ. ಆದರೆ, ’ಚಂದ್ರಗಿರಿಯ ತೀರದಲ್ಲಿ’ ಕೃತಿ ನನ್ನನ್ನು ಹಸಿ ಮಣ್ಣಿನಲ್ಲಿ ನೆಟ್ಟ ಗಿಡ ಎಂದೇ ಹೇಳಬೇಕು.

ಅದು 2013 ಜೂನ್ ತಿಂಗಳು. ನನ್ನ ಕಥಾಸಂಕಲನ ’ದೂರತೀರಕ್ಕೆ’ ಮಾಸ್ತಿ ಕಥಾ ಪುರಸ್ಕಾರ ಸಂದಿತ್ತು. ಆ ವರ್ಷದ ಜೀವಮಾನದ ಮಾಸ್ತಿ ಸಾಹಿತ್ಯ ಪ್ರಶಸ್ತಿಗೆ ಸಾರಾ ಅಬೂಬಕ್ಕರ್ ಆಯ್ಕೆ ಆಗಿದ್ದರು. ಸಮಾರಂಭಕ್ಕೆ ಅವರು ಮಂಗಳೂರಿಂದ ಬೆಂಗಳೂರಿಗೆ ಹೊರಟರು. ನಾನು ಕಾಸರಗೋಡಿಂದ ಬೆಂಗಳೂರಿಗೆ ಹೊರಟೆ. ಆಗ ನಮ್ಮಿಬ್ಬರ ನಡುವೆ ಮೊದಲ ಬಾರಿಗೆ ದೂರವಾಣಿ ಮಾತು ನಡೆಯಿತು. ’ಎಲ್ಲಿ ಉಳಕೊಳ್ಳುವ ವ್ಯವಸ್ಥೆ’ ಎಂಬ ಮಾತು ಸಹಜವಾಗಿಯೇ ಬಂತು. ನಾನು ’ಅಲ್ಲಿ ತಮ್ಮನ ಮನೆ ಇದೆ; ಉಳಕೊಳ್ಳುವ ವ್ಯವಸ್ಥೆ ಬೇಡ ಅಂದಿರುವೆ ಅಂದೆ. ಅಂದು ಸಾರಾ ಏನೂ ಹೇಳಿರಲಿಲ್ಲ. ಕಾರ್ಯಕ್ರಮ ಮುಗಿದ ನಂತರದ ಮಾತುಕತೆಯಲ್ಲಿ, ’ಇಂತಹ ಕಾರ್ಯಕ್ರಮಗಳಿಗೆ ಪರ ಊರಿಗೆ ಹೋಗುವಾಗ, ಎಷ್ಟೇ ಪ್ರಿಯರಾದರೂ ಯಾವುದೇ ಬಂಧುಗಳ ಮನೆ ನೆಚ್ಚಿಕೊಳ್ಳಬಾರದು. ಆಯೋಜಕರು ಮಾಡುವ ವ್ಯವಸ್ಥೆ ಪಡೆದುಕೊಳ್ಳಬೇಕು. ಅದು ನಮ್ಮ ಹಕ್ಕಿನದು. ಕೆಲವೊಮ್ಮೆ ನಮ್ಮ ಬರವಣಿಗೆ, ನಮ್ಮ ಬರಹದ ಮಹತ್ವ, ನಮಗಿರುವ ಗೌರವ ನಮ್ಮ ಆ ಬಂಧುಗಳಿಗೆ ಅರ್ಥವಾಗುವುದಿಲ್ಲ. ಇನ್ನು ಕೆಲವೊಮ್ಮೆ ಅರ್ಥ ಆದರೂ ಅವರಿಗದು ಬೇಕಿರುವುದಿಲ್ಲ. ಅದ್ಯಾವುದು ಅಲ್ಲದಿದ್ದರೆ ಕೆಲವೊಮ್ಮೆ ನಮ್ಮ ಸಮಯಕ್ಕೆ ಆವರ ಮನೆಯ ವ್ಯವಸ್ಥೆ ಇರುವುದಿಲ್ಲ.

ನಾವು ಏನೂ ಹೇಳಲಾಗುವುದಿಲ್ಲ. ಅಲ್ಲಿ ಹೊಂದಿಕೊಂಡಿರಬೇಕಷ್ಟೆ. ನಮ್ಮ ಮುಖ್ಯ ಕಾರ್ಯಕ್ರಮ ಅಸ್ತವ್ಯಸ್ತ ಆಗುವ ಸಾಧ್ಯತೆ ಇರುತ್ತದೆ. ಸಭೆಯಲ್ಲಿ ನಾವು ಮಾತಾಡುವುದಿರುತ್ತದೆ. ಅದಕ್ಕೂ ಮೊದಲು ನಮಗೊಂದಿಷ್ಟು ತಯಾರಿ, ಏಕಾಂತ ಬೇಕಾಗುತ್ತದೆ. ಇದನ್ನೆಲ್ಲ ನಮ್ಮ ಕುಟುಂಬದವರೇ ಆದರೂ, ನಮ್ಮ ಬಗ್ಗೆ ಅವರಿಗೆ ಎಷ್ಟೇ ಪ್ರೀತಿ ವಿಶ್ವಾಸ ಇದ್ದರೂ ನಾವು ಹೆಣ್ಣುಮಕ್ಕಳಾದ್ದರಿಂದ ಹಾಗೆಲ್ಲ ನಿರೀಕ್ಷೆ ಮಾಡಲಾಗುವುದಿಲ್ಲ. ಬಂಧುಗಳ ಮನೆಯ ಭೇಟಿ ನಮ್ಮ ಕಾರ್ಯಕ್ರಮ ಮುಗಿದ ಮೇಲೆ ಇಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿ ನನ್ನ ಪಾಲಿಗೆ ಸಾರಾ ತಾಯಿ ಆಗಿಬಿಟ್ಟರು. ಪರಿಚಯವಾದ ಆರಂಭದಲ್ಲೊಮ್ಮೆ, ಮಾತಿನ ನಡುವೆ ನಿಮ್ಮ ಬಗ್ಗೆ ಗೊತ್ತಿರಲಿಲ್ಲ ಎನ್ನುತ್ತಾ ಅವರು ಬೇಸರಿಸಿಕೊಂಡಿದ್ದರು. ಅವರ ನೇರ ನಡೆ, ಸರಳತೆ ನನಗಂತೂ ಖುಷಿಯಾಗಿತ್ತು. ನನ್ನ ಬರವಣಿಗೆ ನಿರಂತರವಾಗಿಲ್ಲದಿರುವುದರಿಂದ, ಗೊತ್ತಿಲ್ಲದಿರುವುದು ಸಹಜವೇ. ಅದನ್ನೇ ಅವರಿಗೆ ಹೇಳಿದಾಗ, “ಕಥೆಯನ್ನೆ ಬರಿಬೇಕು ಅಂತ ಅಂದುಕೊಳ್ಬೇಡಿ. ಏನಾದರೂ ಹೇಳಬೇಕಾದಾಗ ಲೇಖನವೊ, ಅಭಿಪ್ರಾಯವೋ ಯಾವುದಾದರೂ ಒಂದು ರೂಪದಲ್ಲಿ ಬರೆದುಬಿಡಿ ಅಷ್ಟೆ”

ಮುಂದೆ 2015ರಲ್ಲಿ ನನ್ನ ’ಜೋಗತಿ ಜೋಳಿಗೆ’ ಕಥಾ ಸಂಕಲನಕ್ಕೆ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಸಾರಾ ಅವರ ಹೆಸರಿನಲ್ಲಿ ಕೊಡುವ ಸಾರಾ ಅಬೂಬಕ್ಕರ್ ಸಾಹಿತ್ಯ ದತ್ತಿ ಪುರಸ್ಕಾರ ಬಂತು. ಅವರ ಸಮ್ಮುಖದಲ್ಲೇ ಸಮಾರಂಭ ನಡೆಯಿತು. ಅವರು ನನ್ನ ಕಥಾ ಸಂಕಲನ ತರಿಸಿ ಓದಿ ಬಹಳ ಇಷ್ಟಪಟ್ಟಿದ್ದರು. ಕಥೆಗಳ ಬಗ್ಗೆ ಮತ್ತೆಮತ್ತೆ ಫೋನಿನಲ್ಲಿ ಮಾತಾಡಿದರು. ’ಸೈತಾನನ ಬಲೆ’ ಕಥೆಯನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದ್ದಿ ಎಂದಾಗ ಸಾರ್ಥಕವೆನಿಸಿತ್ತು. ಮುಂದೆ ಅದೇ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಾಗ ಬಹಳ ಖುಷಿ ಪಟ್ಟಿದ್ದರು. ಆಗಲೂ, “ಕಥೆ ಬರೆಯಲಾಗದಿದ್ದಾಗ ಬೇರೆ ಏನಾದರೂ ಬರೆಯಿರಿ” ಎನ್ನಲು ಮರೆತಿರಲಿಲ್ಲ. ಹೀಗೆ ಫೋನ್ ಸಂಭಾಷಣೆಯ ನೆನಪು ಎದೆಯೊಳಗೆ. 2018ರ ನಂತರ ನನಗೆ ಅವರನ್ನು ಭೇಟಿ ಮಾಡಲಾಗಲೇ ಇಲ್ಲ.

ಅನುಪಮಾ ಪ್ರಸಾದ್
ಬರಹಗಾರ್ತಿ


ಇದನ್ನೂ ಓದಿ: ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...