ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕದ್ದರೂ ನನ್ನ ವಿರೋಧಿಗಳು ತಮ್ಮ ಕನಸಿನಲ್ಲಿ ನನ್ನನ್ನೇ ನೋಡುತ್ತಾರೆ. ಆದರೆ, ಮಹಾರಾಷ್ಟ್ರದ ಜನರು ನಮ್ಮೊಂದಿಗೆ ಇದ್ದಾರೆ ಎಂಬುದು ನನಗೆ ತಿಳಿದಿದೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಹೇಳಿದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಭಾನುವಾರ ಮುಂಬೈನ ಉಪನಗರ ಬಾಂದ್ರಾದಲ್ಲಿರುವ ತಮ್ಮ ಮನೆ- ‘ಮಾತೋಶ್ರೀ’ಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನನ್ನ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕದಿಯುತ್ತಿದ್ದರೂ, ವಿರೋಧಿಗಳು ನನ್ನನ್ನು ಅವರ ಕನಸಿನಲ್ಲಿ ನೋಡುತ್ತಾರೆ. ಉದ್ಧವ್ ಠಾಕ್ರೆ ಒಬ್ಬಂಟಿಯಾಗಿಲ್ಲ, ಇಡೀ ಮಹಾರಾಷ್ಟ್ರ ಅವರೊಂದಿಗಿದೆ ಎಂದು ಅವರಿಗೆ ತಿಳಿದಿದೆ’ ವಾಗ್ದಾಳಿ ನಡೆಸಿದರು. ‘ಪ್ರೀತಿ ಮಾರಾಟಕ್ಕಲ್ಲ; ಭಾವನೆಗಳನ್ನು ಖರೀದಿಸಲು ಸಾಧ್ಯವಿಲ್ಲ’ ಎಂದು ಠಾಕ್ರೆ ಪ್ರತಿಪಾದಿಸಿದರು.
ಥಾಣೆ ಜಿಲ್ಲೆಯ ಒಂದು ಭಾಗ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಭದ್ರಕೋಟೆಯಾದ ಉಲ್ಲಾಸ್ ನಗರದಲ್ಲಿ ಕೆಲವು ರಾಜಕೀಯ ಕಾರ್ಯಕರ್ತರು ಶಿವಸೇನೆ (ಯುಬಿಟಿ)ಗೆ ಮತ್ತೆ ಸೇರುತ್ತಿರುವುದನ್ನು ಉಲ್ಲೇಖಿಸಿದ ಅವರು, ‘ಮುಂದೆ ಯುದ್ಧವಿದೆ; ಆದರೆ ನಿಷ್ಠಾವಂತರು ಒಗ್ಗೂಡಿ ಹೋರಾಡಿದರೆ ಹೋರಾಟಗಳನ್ನು ಜಯಿಸಬಹುದು’ ಎಂದು ಹೇಳಿದರು.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕುರಿತು ಮಾತನಾಡಿದ ಠಾಕ್ರೆ, ‘ಅಂದು ನಾಸಿಕ್ನ ಕಲಾರಾಮ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಮತ್ತು ಗೋದಾವರಿ ನದಿಯ ದಡದಲ್ಲಿ ‘ಮಹಾ ಆರತಿ’ ಮಾಡುವುದಾಗಿ’ ಹೇಳಿದರು.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಪ್ರತಿನಿಧಿಸುವ ಕಲ್ಯಾಣ್ ಲೋಕಸಭಾ ಕ್ಷೇತ್ರದಲ್ಲಿ ತಾವು ಪ್ರವಾಸ ಮಾಡುವುದಾಗಿಯೂ ಅವರು ಹೇಳಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸುವ ಮೂಲಕ ಹಲವಾರು ಶಾಸಕರೊಂದಿಗೆ ಶಿಂಧೆ ಬಂಡಾಯವನ್ನು ಮುಂಚೂಣಿ ವಹಿಸಿದಾಗ ಶಿವಸೇನೆ ಜೂನ್ 2022ರಲ್ಲಿ ವಿಭಜನೆಯಾಯಿತು.
ಶಿಂಧೆ ಅವರ ಬಣಕ್ಕೆ ಭಾರತೀಯ ಚುನಾವಣಾ ಆಯೋಗವು ‘ಶಿವಸೇನಾ’ ಹೆಸರು, ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ನೀಡಿದೆ.
ಇದನ್ನೂ ಓದಿ; ಬುಡಕಟ್ಟು ಎಂಬ ಕಾರಣಕ್ಕೆ ಕಿರುಕುಳ; ಕೇಂದ್ರದ ವಿರುದ್ಧ ಜಾರ್ಖಂಡ್ ಸಿಎಂ ಸಹೋದರಿ ಆರೋಪ