ನಾಡಹಬ್ಬ ದಸರಾ ಸಾಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅಂತರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂ.ರಾಜೀವ ತಾರನಾಥ್ ಅವರನ್ನು ಆಹ್ವಾನಿಸಿದ ದಸರಾ ಅಧಿಕಾರಿಗಳು ಸಂಭಾವನೆಯಲ್ಲಿ ಕಮಿಷನ್ಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಸಂಭಾವನೆಯಲ್ಲಿ ಪಂಡಿತ ರಾಜೀವ್ ತಾರಾನಾಥ್ ಅವರ ಬಳಿ ಅಧಿಕಾರಿಗಳು ಕಮಿಷನ್ಗೆ ಬೇಡಿಕೆ ಇಟ್ಟಿದ್ದಾರೆನ್ನಲಾದ ಬಗ್ಗೆ ಪತ್ರಿಕೆಯೊಂದರಲ್ಲಿ ವಿಶೇಷ ವರದಿಯಾಗಿತ್ತು. ವರದಿಯನ್ನು ಸ್ವತಃ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ ಮಹದೇವಪ್ಪ ಅವರು ಟ್ವೀಟ್ ಮಾಡಿ ಜಿಲ್ಲಾಧಿಕಾರಿಗೆ ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದರು.
ಆದರೆ ಈ ಬಗ್ಗೆ ಸರೋದ್ ವಾದಕ ಪಂ.ರಾಜೀವ ತಾರನಾಥ್ ಅವರು ಪ್ರತಿಕ್ರಿಯಿಸಿದ್ದು, ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ, ಲಂಚ ಕೇಳಿಲ್ಲ ಎಂದು ತಮ್ಮನ್ನು ಭೇಟಿ ಮಾಡಿದ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ.
ಇಬ್ಬರು ಅಧಿಕಾರಿಗಳು ತಾರಾನಾಥ ಅವರನ್ನು ಸಂಪರ್ಕಿಸಿ ನೀವು ಕೇಳಿದ ಸಂಭಾವನೆಗಿಂತ 3 ಲಕ್ಷ ರೂ. ಹೆಚ್ಚು ಕೊಡುತ್ತೇವೆ. ಹಣ ಆರ್ಟಿಜಿಎಸ್ ಮೂಲಕ ನಿಮ್ಮ ಖಾತೆಗೆ ಬರುತ್ತದೆ. ಹೆಚ್ಚುವರಿಯಾಗಿ ಜಮೆಯಾಗುವ 3 ಲಕ್ಷ ರೂ. ಹಣವನ್ನು ನಮಗೆ ವಾಪಸ್ ನೀಡಬೇಕು ಎಂದು ಹೇಳಿದ್ದರು. ಇದಕ್ಕೆ ಕಮೀಷನ್ ಕೇಳಿದ ಅಧಿಕಾರಿಗಳಿಗೆ ಛೀಮಾರಿ ಹಾಕಿ ತಾರನಾಥ್ ಅವರು ಕಳುಹಿಸಿದ್ದರು ಎಂದು ‘ಆಂದೋಲನ’ ಪತ್ರಿಕೆಯಲ್ಲಿ ವರದಿಗಾರ ನಝೀರ್ ಅಹ್ಮದ್ ಅವರು ಬರೆದ ವಿಶೇಷ ವರದಿ ತಿಳಿಸಿತ್ತು.
ಈ ಬಗ್ಗೆ ಆಂದೋಲನ ಪತ್ರಿಕೆಯ ವರದಿಗಾರ ನಝೀರ್ ಅಹ್ಮದ್ ಅವರು ಪ್ರತಿಕ್ರಿಯಿಸಿದ್ದು, ಕಮಿಷನ್ ಬೇಡಿಕೆ ಬಗ್ಗೆ ತಾರಾನಾಥ್ ಅವರು ಅವರ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರ ಆಪ್ತರೊಬ್ಬರು ನಮ್ಮ ಪತ್ರಿಕೆಯ ಕಚೇರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ನಾನು ಖುದ್ದು ತಾರಾನಾಥ್ ಅವರನ್ನು ಭೇಟಿಯಾಗಿ ವಿಚಾರಿಸಿದಾಗ, ವ್ಯಾಪಕವಾಗಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದ್ದಾರೆ. ಆದರೆ ತಮ್ಮ ಬಳಿ ಅಧಿಕಾರಿಗಳು ಕಮಿಷನ್ಗೆ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು ಎಂದು ಹೇಳಿದ್ದಾರೆ.
Damege control it seems. !!!!????. Nowaday these things are not unusual we suppose.?????!!!!!