ದೇಶದಲ್ಲಿ 2018 ರಿಂದ 2023ರ ನಡುವೆ ಸೆಪ್ಟಿಕ್ ಟ್ಯಾಂಕ್ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವಾಗ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದೆ.
ದೇಶದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಸ್ವಚ್ಚತೆ ವೇಳೆ ಮೃತಪಟ್ಟವರ ಮಾಹಿತಿ ಕೋರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅರೂಪಾ ಪೊದ್ದಾರ್ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠವಾಳೆ ಲಿಖಿತ ಉತ್ತರ ನೀಡಿದ್ದಾರೆ. ಸಚಿವರು ನೀಡಿದ ಅಂಕಿ ಅಂಶಗಳ ಪ್ರಕಾರ, ಸೆಪ್ಟಿಕ್ ಟ್ಯಾಂಕ್ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವಾಗ 2018 ರಲ್ಲಿ 76, 2019 ರಲ್ಲಿ 133, 2020 ರಲ್ಲಿ 35, 2021 ರಲ್ಲಿ 66, 2022 ರಲ್ಲಿ 84 ಮತ್ತು 2023 ರಲ್ಲಿ 49 ಸಾವುಗಳು ಸಂಭವಿಸಿವೆ.
“ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕೆಲಸ ನಿಷೇಧ ಮತ್ತು ಕಾರ್ಮಿಕರ ಪುನರ್ವಸತಿ ಕಾಯಿದೆ, 2013 ರ ಪ್ರಕಾರ, ಮ್ಯಾನುಯಲ್ ಸ್ಕ್ಯಾವೆಂಜಿಂಗ್ ದೇಶದಲ್ಲಿ ನಿಷೇಧಿತ ಚಟುವಟಿಕೆಯಾಗಿದೆ. 29 ನವೆಂಬರ್ 2023 ರಂತೆ, ದೇಶದ 766 ಜಿಲ್ಲೆಗಳ ಪೈಕಿ 714 ಜಿಲ್ಲೆಗಳು ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಮುಕ್ತವಾಗಿದೆ” ಎಂದು ಸಚಿವ ಅಠವಾಳೆ ತಿಳಿಸಿದ್ದಾರೆ.
ಅಂಕಿ ಅಂಶಗಳ ಪ್ರಕಾರ, 2023ರಲ್ಲಿ ಸಂಭವಿಸಿದ 49 ಸಾವಿನ ಪ್ರಕರಣಗಳಲ್ಲಿ, ಗರಿಷ್ಠ 10 ರಾಜಸ್ಥಾನದಿಂದ ವರದಿಯಾಗಿದೆ. ನಂತರ ಗುಜರಾತ್ನಲ್ಲಿ ಒಂಬತ್ತು, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಲಾ ಏಳು, ಪಶ್ಚಿಮ ಬಂಗಾಳದಲ್ಲಿ ಮೂರು, ಬಿಹಾರ, ಮಧ್ಯಪ್ರದೇಶ ಮತ್ತು ಹರಿಯಾಣದಲ್ಲಿ ತಲಾ ಎರಡು, ಪಂಜಾಬ್ ಮತ್ತು ಜಾರ್ಖಂಡ್ನಲ್ಲಿ ತಲಾ ಒಂದು ಪ್ರಕರಣ ಸಂಭವಿಸಿದೆ.
ಇದನ್ನೂ ಓದಿ : ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ 10 ಬಿಜೆಪಿ ಸಂಸದರು