ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ (ಲಿಡ್ಕರ್) ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಆಯ್ಕೆಯಾಗಿದ್ದಾರೆ.
ವಿಧಾನಸೌಧದ ಮುಂಭಾಗ ಇಂದು ನಡೆದ ಡಾ.ಬಿ ಆರ್ ಅಂಬೇಡ್ಕರ್ ಅವರ 67ನೇ ಪರಿನಿಬ್ಬಾಣ ದಿನ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಲಿಡ್ಕರ್ ಉತ್ಪನ್ನಗಳಿಗೆ ರಾಯಭಾರಿಯನ್ನಾಗಿ ಘೋಷಣೆ ಮಾಡಿದರು. ಈ ವೇಳೆ ಧನಂಜಯ ಅವರಿಗೆ ‘ಅಂಬೇಡ್ಕರ್ ಸಮಗ್ರ ಬರಹಗಳು ಮತ್ತು ಭಾಷಣಗಳು’ ಕೃತಿ ನೀಡಿ ಸಿಎಂ ಅಭಿನಂಧಿಸಿಸಿದರು.
ಇದೇ ಮೊದಲ ಭಾರಿಗೆ ಲಿಡ್ಕರ್ ತನ್ನ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯನ್ನು ನೇಮಿಸಿದೆ. ನಟ ಧನಂಜಯ್ ಯಾವುದೇ ರೀತಿಯ ಸಂಭಾವನೆ ಪಡೆಯದೆ ಉಚಿತವಾಗಿ ಪ್ರಚಾರ ನಡೆಸಲಿದ್ದಾರೆ. 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬಗಳು ಲಿಡ್ಕರ್ಗಾಗಿ ಚರ್ಮದ ಚಪ್ಪಲಿ, ಶೂ, ಬೆಲ್ಟ್, ಸೋಫಾ, ಬ್ಯಾಗ್ ಸೇರಿದಂತೆ ವಿವಿಧ ವಸ್ತುಗಳನ್ನು ಕೈನಿಂದ ತಯಾರಿಸಿ ಕೊಡುತ್ತಿದ್ದಾರೆ. ಗುಣಮಟ್ಟ ಹಾಗೂ ಬಾಳಿಕೆ ಕಾರಣಕ್ಕಾಗಿ ಈಗಾಗಲೇ ಲಿಡ್ಕರ್ ಉತ್ಪನ್ನಗಳು ಹೆಸರುವಾಸಿಯಾಗಿವೆ. ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮುಂದಾಗಿರುವ ಸಂಸ್ಥೆಯು, ಕನ್ನಡದ ಪ್ರಸಿದ್ಧ ನಟ ಧನಂಜಯ್ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟ ಧನಂಜಯ್, ‘ಕಾಯಕ ವರ್ಗದ ಕುಶಲಕರ್ಮಿಗಳ ಅದ್ಭುತ ಕಲಾಕೃತಿಗಳನ್ನು ರಾಜ್ಯದ ಜನರಿಗೆ ವ್ಯಾಪಕವಾಗಿ ತಲುಪಿಸುವ ಲಿಡ್ಕರ್ ಸಂಸ್ಥೆಯ ಪ್ರಚಾರ ರಾಯಭಾರಿಯಾಗಲು ತುಂಬ ಹೆಮ್ಮೆಯಿದೆ. ಈ ತರಹದ ಒಳ್ಳೆ ಕೆಲಸಕ್ಕೆ ನನ್ನನ್ನು ಭಾಗಿಯಾಗಿ ಮಾಡಿಕೊಂಡ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಸುಂಧರ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ. ಮಹದೇವಪ್ಪನವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.
ರಾಯಭಾರಿಯಾಗಿ ಧನಂಜಯ್ ನೇಮಕದ ಕುರಿತು ಮಾತನಾಡಿರುವ ಲಿಡ್ಕರ್ ಎಂಡಿ ಕೆ.ಎಂ.ಎಸ್ ವಸುಂಧರಾ, ‘ನಮ್ಮ ಸಂಸ್ಥೆಯ ಉತ್ಪನ್ನಗಳಿಗೆ ಧನಂಜಯ್ ರಾಯಭಾರಿಯಾಗಿರುವುದು ತುಂಬಾ ಖುಷಿಯಾಗಿದೆ. ಅವರು ಸ್ಯಾಂಡಲ್ವುಡ್ನ ಪ್ರಮುಖ ನಟ, ಎಲ್ಲ ವರ್ಗದ ಜನರಿಗೆ ತಲುಪುವ ಕಲಾವಿದ. ಆದ್ದರಿಂದ, ಅವರನ್ನ ಆಯ್ಕೆ ಮಾಡಲಾಗಿದ್ದು, ಸಚಿವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಆದಷ್ಟು ಬೇಗ ಸಂಸ್ಥೆಯ ಉತ್ಪನ್ನಗಳ ಜಾಹೀರಾತಿನ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ; ‘ಚಡ್ಡಿ ಸಂಗ್ರಹ’ ಅಭಿಯಾನವನ್ನು ಎಸ್ಸಿ ನಾಯಕರು ಮಾತ್ರ ಮಾಡಿದ್ಯಾಕೆ: ಪ್ರಿಯಾಂಕ್ ಖರ್ಗೆ