ತೀರ್ಥಹಳ್ಳಿ ತಾಲೂಕು ಕಾಂಗ್ರೆಸ್ ಪಕ್ಷದ ಕಚೇರಿಯ ಮಾಲೀಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳ ತಂಡ ಬುಧವಾರ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಕುಟುಂಬದ ಸದಸ್ಯರಿಗೆ ಈ ಕಟ್ಟಡ ಸೇರಿದ್ದಾಗಿದೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಿಮ್ಮನೆ ರತ್ನಾಕರ ಅವರು, “ಎನ್ಐಎ ಅಧಿಕಾರಿಗಳು ಬೆಳಗ್ಗೆ 9:00 ಗಂಟೆ ಸುಮಾರಿಗೆ ಕರೆ ಮಾಡಿ ತೀರ್ಥಹಳ್ಳಿ ಪಟ್ಟಣದ ಪಕ್ಷದ ಕಚೇರಿಗೆ ತೆರಳಿದ್ದರು. ನಮ್ಮ ಪಕ್ಷದ ಕಾರ್ಯಕರ್ತರಿಗೂ ಈ ದಾಳಿಗೂ ಸಂಬಂಧವಿಲ್ಲ. ನನ್ನ ಸೋದರಳಿಯ ನವೀನ್ ಕೆ ಜಿ ಅವರು 2015ರಲ್ಲಿ 10 ಲಕ್ಷ ರೂಪಾಯಿ ಮುಂಗಡ ಹಣ ಪಾವತಿಸಿ ಎಂಟು ವರ್ಷಗಳ ಅವಧಿಗೆ ಕಟ್ಟಡವನ್ನು ಅಸೀಮ್ ಅಬ್ದುಲ್ ಮಜೀದ್ ಅವರಿಂದ ಗುತ್ತಿಗೆ ಪಡೆದಿದ್ದರು” ಎಂದಿದ್ದಾರೆ.
“ಈ ಕಟ್ಟಡಕ್ಕೆ ನಾವು ಪ್ರತಿ ತಿಂಗಳು 1000 ರೂ. ಬಾಡಿಗೆ ನೀಡುವುದಾಗಿ ಒಪ್ಪಿಗೆ ನೀಡಲಾಗಿತ್ತು. ನಂತರ, ಮಾಲೀಕರು ಕಟ್ಟಡವನ್ನು ಮಾರಾಟ ಮಾಡಿದ್ದರು. ಈ ವ್ಯವಹಾರದಲ್ಲಿ ಶಾರಿಕ್ ಅವರು ಹಣ ಪಡೆದಿದ್ದರು. ಹೀಗಾಗಿ ಎನ್ಐಎ ಅಧಿಕಾರಿಗಳು ಶಾರಿಕ್ ಅವರ ಕುಟುಂಬದ ಸದಸ್ಯರಿಗೆ ಸೇರಿದ ನಿವೇಶನಗಳ ಮೇಲೆ ದಾಳಿ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.
“ಅಧಿಕಾರಿಗಳು, ಶಾರಿಕ್ ಅವರ ಅಜ್ಜಿಯ ನಿವಾಸದ ಮೇಲೆ ದಾಳಿ ನಡೆಸಿ ಅವರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು. ತನಿಖೆಯ ಭಾಗವಾಗಿ ಅದೇ ಕಟ್ಟಡದ ಮೊದಲ ಮಹಡಿಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಮತ್ತು ಮನೆಗಳ ಗುತ್ತಿಗೆ ಒಪ್ಪಂದದ ದಾಖಲೆಗಳನ್ನೂ ಅವರು ಪರಿಶೀಲಿಸಿದ್ದಾರೆ” ಎಂದು ಕಿಮ್ಮನೆ ಹೇಳಿದರು.
“ಈ ಎನ್ಐಎ ಅಧಿಕಾರಿಗಳಿಗೂ ನಮ್ಮ ಪಕ್ಷದ ಕಾರ್ಯಕರ್ತರಿಗೂ ಸಂಬಂಧವಿಲ್ಲ. ಇದು ಕೇವಲ ಕಟ್ಟಡ, ಜಮೀನು ಮಾಲೀಕರು ಮತ್ತು ಹಿಡುವಳಿದಾರರ ನಡುವಿನ ಸಂಬಂಧವಾಗಿದೆ. ನಾವು ಕಟ್ಟಡಕ್ಕೆ ನೀಡಿದ ಮುಂಗಡ ಹಣವನ್ನು ನೀಡಿದರೆ ನಾವು ಜಾಗವನ್ನು ಖಾಲಿ ಮಾಡಲು ಸಿದ್ಧರಿದ್ದೇವೆ” ಎಂದರು.
ತಮ್ಮ ಮನೆ ಮೇಲೆ ಎನ್ಐಎ ದಾಳಿ ನಡೆಸಿದೆ ಎಂಬ ಮಾಧ್ಯಮಗಳ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಮ್ಮ ಹಾಗೂ ನಮ್ಮ ಪಕ್ಷದ ವರ್ಚಸ್ಸು ಹಾಳು ಮಾಡುವುದಕ್ಕೆ ಬಿಜೆಪಿ ಇಂತಹ ಕೆಲಸ ಮಾಡುತ್ತಿದೆ. ಕೆಲವು ಟಿವಿ ಸುದ್ದಿ ವಾಹಿನಿಗಳು ಬಿಜೆಪಿಗೆ ನೆರವಾಗುವಂತೆ ನಮ್ಮ ವಿರುದ್ಧ ಸುಳ್ಳು ಸುದ್ಧಿ ಹರಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.