ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ವ್ಯವಸ್ಥಿತವಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ ಚುನಾವಣೆಗೆ ಮುನ್ನ ಪಕ್ಷವು ಸಮಬಲ ಸಾಧಿಸಲು ಪಕ್ಷದ ಬ್ಯಾಂಕ್ ಖಾತೆಗಳಿಗೆ ನೀಡಿರುವ ನಿರ್ಬಂಧವನ್ನು ತೆರವುಗೊಳಿಸ ಬೇಕು ಎಂದು ಗುರುವಾರ ಒತ್ತಾಯಿಸಿದ್ದಾರೆ.
ಇಂದು ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಸಂಸದರಾದ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ಪಕ್ಷದ ಎಲ್ಲ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ; ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಯಾವುದೇ ಪ್ರಚಾರವನ್ನು ಕೈಗೊಳ್ಳಲು ನಮಗೆ ಸಾಧ್ಯವಿಲ್ಲ’ ಎಂದು ಅವರು ಪಕ್ಷದ ಆರ್ಥಿಕ ತೊಂದರೆಗಳನ್ನು ಎತ್ತಿ ತೋರಿಸಿದ್ದಾರೆ.
‘ಇದು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದಲ್ಲ, ಇದು ಭಾರತದ ಪ್ರಜಾಪ್ರಭುತ್ವವನ್ನು ಫ್ರೀಜ್ ಮಾಡುವುದು ಎಂದು ರಾಹುಲ್ ಗಾಂಧಿ ಹೇಳಿದರು. “ದೊಡ್ಡ ವಿರೋಧ ಪಕ್ಷವಾಗಿ, ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ; ನಾವು ಜಾಹೀರಾತುಗಳನ್ನು ಬುಕ್ ಮಾಡಲು ಅಥವಾ ನಮ್ಮ ನಾಯಕರನ್ನು ಎಲ್ಲಿಗೂ ಕಳುಹಿಸಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ ಆಕ್ರಮಣವಾಗಿದೆ” ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
The hate-filled 'Asura Shakti' has frozen our bank accounts to murder Indian democracy.
नफ़रत से भरी 'असुर शक्ति' ने लोकतंत्र की हत्या करने के लिए कांग्रेस के बैंक अकाउंट को फ्रीज कर दिया है।
— Rahul Gandhi (@RahulGandhi) March 21, 2024
ಕಾಂಗ್ರೆಸ್ ಪಕ್ಷದ ಖಾತೆ ವಿರುದ್ಧ ಕ್ರಮವು ಚುನಾವಣಾ ಪ್ರಚಾರಕ್ಕೆ ಎರಡು ತಿಂಗಳ ಮೊದಲೆ ಜಾರಿಗೆ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.
“ಚುನಾವಣಾ ಆಯೋಗವು ಏನನ್ನೂ ಹೇಳಿಲ್ಲ … ಈಗಾಗಲೇ, ಚುನಾವಣೆಗಳನ್ನು ಎದುರಿಸುವ ನಮ್ಮ ಸಾಮರ್ಥ್ಯವು ಹಾಳಾಗಿದೆ, ನಾವು ಈಗಾಗಲೇ ಒಂದು ತಿಂಗಳನ್ನು ಕಳೆದುಕೊಂಡಿದ್ದೇವೆ” ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧವೂ ರಾಹುಲ್ ಗಾಂಧಿ ಆರೋಪಿಸಿದ್ದಾರೆ. “ಇದು ಕಾಂಗ್ರೆಸ್ ಪಕ್ಷದ ಮೇಲೆ ಕ್ರಿಮಿನಲ್ ಕ್ರಮ, ಪ್ರಧಾನಿ ಮತ್ತು ಗೃಹ ಸಚಿವರು ಮಾಡಿದ ಕ್ರಿಮಿನಲ್ ಕ್ರಮ” ಎಂದು ಗಾಂಧಿ ಹೇಳಿದರು.
“ಭಾರತ ಪ್ರಜಾಪ್ರಭುತ್ವ ಎಂಬ ಕಲ್ಪನೆಯು ಸುಳ್ಳು, ಇಂದು ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಕಲ್ಪನೆಯು ಸುಳ್ಳು, ಸಂಪೂರ್ಣ ಸುಳ್ಳು, ಭಾರತದಲ್ಲಿ 20% ನಮಗೆ ಮತ ಹಾಕುತ್ತಾರೆ. ಆದರೆ, ನಾವು ಯಾವುದಕ್ಕೂ ₹2 ಸಹ ಪಾವತಿಸಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ನಮ್ಮನ್ನು ಕುಗ್ಗಿಸಲು ರೂಪಿಸಲಾಗಿದೆ ಸಂಚು. ಇಂದು ನಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದರೂ ಸಹ, ಭಾರತೀಯ ಪ್ರಜಾಪ್ರಭುತ್ವಕ್ಕೆ ದೊಡ್ಡ ಪ್ರಮಾಣದ ಸಾಲದ ಹಾನಿಯಾಗಿದೆ’ ಎಂದು ಹೇಳಿದರು.
ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು ಮೋದಿಯವರ ವ್ಯವಸ್ಥಿತ ಪ್ರಯತ್ನ
ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅನ್ನು ಆರ್ಥಿಕವಾಗಿ ಕುಗ್ಗಿಸಲು ಮೋದಿಯವರಿಂದ ವ್ಯವಸ್ಥಿತ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
“ನಾವು ಇಂದು ಕೈಗೆತ್ತಿಕೊಳ್ಳುತ್ತಿರುವ ವಿಷಯವು ಅತ್ಯಂತ ಗಂಭೀರವಾಗಿದೆ. ಈ ಸಮಸ್ಯೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಮಾತ್ರವಲ್ಲದೆ ಪ್ರಜಾಪ್ರಭುತ್ವದ ಮೇಲೆಯೇ ಪರಿಣಾಮ ಬೀರುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನ ಮಂತ್ರಿಯಿಂದ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ” ಎಂದು ಸೋನಿಯಾ ಗಾಂಧಿ ಹೇಳಿದರು.
“ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಬೇಕಾದರೆ ನಮ್ಮ ಪಕ್ಷಕ್ಕೆ ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಲು ಅವಕಾಶ ನೀಡಬೇಕು ಎಂದು ನಾನು ಸಾಂವಿಧಾನಿಕ ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ” ಎಂದು ಖರ್ಗೆ ಹೇಳಿದರು.
ಅಧಿಕಾರದಲ್ಲಿರುವ ಪಕ್ಷವು ಚುನಾವಣಾ ಬಾಂಡ್ಗಳ ಮೂಲಕ ಹಣವನ್ನು ಸಂಗ್ರಹಿಸಿದೆ. ಚುನಾವಣೆಯಲ್ಲಿ ಹೋರಾಟದಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಕಾಂಗ್ರೆಸ್ನ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಅಧಿಕಾರದಲ್ಲಿರುವವರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ನಿಯಂತ್ರಣವನ್ನು ಹೊಂದಿರಬಾರದು, ಅಧಿಕಾರದಲ್ಲಿರುವವರು ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯವನ್ನು ಹೊಂದಿರಬಾರದು ಎಂದು ಅವರು ಹೇಳಿದರು.
ಕಾಂಗ್ರೆಸ್ಗೆ ಆದಾಯ ತೆರಿಗೆ ಇಲಾಖೆ ಸೂಚನೆ
ಫೆಬ್ರವರಿಯಲ್ಲಿ ಆದಾಯ ತೆರಿಗೆ ಇಲಾಖೆಯು 2018-19ನೇ ಸಾಲಿಗೆ ₹210 ಕೋಟಿ ಆದಾಯ ತೆರಿಗೆ ಬೇಡಿಕೆಯ ಮೇರೆಗೆ ಪಕ್ಷದ ನಾಲ್ಕು ಪ್ರಮುಖ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡಿದೆ. “ತಮ್ಮ ಖಾತೆಗಳನ್ನು ಸ್ಥಗಿತಗೊಳಿಸಿದರೆ ಬಿಲ್ಗಳು ಮತ್ತು ಸಂಬಳವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ” ಎಂದು ಹೇಳುವ ಮೂಲಕ ಐಟಿ ಇಲಾಖೆಯ ಕ್ರಮಕ್ಕೆ ತಡೆಯಾಜ್ಞೆ ಕೋರಿದ್ದ ಕಾಂಗ್ರೆಸ್ ಪಾರ್ಟಿಯು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯನ್ನು ಸಂಪರ್ಕಿಸಿತು. ಆದರೆ, ಪಕ್ಷದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
ಇದರ ನಂತರ, ಮಾರ್ಚ್ 8 ರಂದು ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ದೆಹಲಿ ಹೈಕೋರ್ಟ್ಗೆ ಮೊರೆ ಹೋಗಿತ್ತು. 2018-19 ರ ಮೌಲ್ಯಮಾಪನ ವರ್ಷಕ್ಕೆ ₹199 ಕ್ಕಿಂತ ಹೆಚ್ಚು ಆದಾಯವನ್ನು ನಿರ್ಣಯಿಸಿದಾಗ ಮೌಲ್ಯಮಾಪನ ಅಧಿಕಾರಿ ₹100 ಕೋಟಿಗೂ ಹೆಚ್ಚು ತೆರಿಗೆ ಬೇಡಿಕೆಯನ್ನು ಎತ್ತಿದ್ದರು.
ಕಳೆದ ವಾರ, ಕಾಂಗ್ರೆಸ್ಗೆ ಐಟಿ ಇಲಾಖೆ ನೀಡಿದ್ದ ನೋಟಿಸ್ಗೆ ತಡೆ ನೀಡಲು ನಿರಾಕರಿಸಿದ ನ್ಯಾಯಮಂಡಳಿಯ ಆದೇಶದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿತು.
ಇದನ್ನೂ ಓದಿ; ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನಿಯಿಂದ ವ್ಯವಸ್ಥಿತ ಪ್ರಯತ್ನ: ಸೋನಿಯಾ ಗಾಂಧಿ ಗಂಭೀರ ಆರೋಪ