ಲೋಕಸಭೆ ಚುನಾವಣೆಯ ಟಿಕೆಟ್ ಕೈ ತಪ್ಪಿರುವುದಕ್ಕೆ ತೀವ್ರ ಅಸಮಾಧಾನ ಹೊರ ಹಾಕಿರುವ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರು, ಯಡಿಯೂರಪ್ಪ ಬಣದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸರ್ವಾಧಿಕಾರಿ ಧೋರಣೆ ಯಾವತ್ತೂ ಸಾರ್ವಜನಿಕ ವ್ಯವಸ್ಥೆಗೆ ಶೋಭೆ ತರಲ್ಲ. ಬಿಜೆಪಿಯಲ್ಲಿ ಪ್ರಸ್ತುತ ಲೋಕಸಭೆ ಚುನಾವಣೆಯ ಟಿಕೆಟ್ ತನ್ನ ಮಕ್ಕಳಿಗೆ, ಕುಟುಂಬಕ್ಕೆ, ಸಂಬಂಧಿಕರಿಗೆ ಚೇಳಾಗಳಿಗೆ ಎನ್ನುವ ವ್ಯವಸ್ಥೆಯಿದೆ. ಇದರಿಂದ ಪಕ್ಷವನ್ನು ಮುಕ್ತಗೊಳಿಸಬೇಕು. ಮೋದಿಯವರು ಹೇಳಿದಂತೆ ‘ಮೇರಾ ದೇಶ್ ಮೇರಾ ಪರಿವಾರ್’ (ನನ್ನ ದೇಶ, ನನ್ನ ಕುಟುಂಬ) ಆಗಬೇಕು ಎಂದರು.
ಮುಂದಿನ ನಡೆ ಬಿಜೆಪಿಯೊಳಗೆ ಶುದ್ದೀಕರಣ :
“ನನ್ನನ್ನು ಆರತಿ ಎತ್ತಿ ಪಕ್ಷಕ್ಕೆ ಕರೆತಂದು, ಈಗ ಮಂಗಳಾರತಿ ಎತ್ತಿ ಹೊರ ಕಳಿಸಿದ್ದಾರೆ. ಇದರಿಂದ ನನಗೆ ನೋವಾಗಿದೆ. ನಾನು ಸಮಾನ ಮನಸ್ಕರನ್ನು ಆಹ್ವಾನಿಸುತ್ತೇನೆ. ಈ ಬಾರಿಯ ಲೋಕಸಭೆ ಚುನಾವಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಆ ಬಳಿಕ ಪಕ್ಷದೊಳಗೆ ಶುದ್ದೀಕರಣ ಪ್ರಾರಂಭಿಸೋಣ. ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯ ಶುದ್ದೀಕರಣ ಆಗದೆ ನಾನು ವಿರಮಿಸುವುದಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿಯಾದರೂ ಇದರ ಪರವಾಗಿ ಹೋರಾಟ ಮಾಡುತ್ತೇನೆ” ಎಂದು ಸದಾನಂದಗೌಡ ಹೇಳಿದರು.
“ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಅವಗಣನೆ ಮಾಡಲಾಗಿದೆ. ರಾಜ್ಯದ ಜನತೆ ಈಗ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇದು ಮೋದಿಯವರ ಚುನಾವಣೆ. ಈ ಚುನಾವಣೆ ಬಳಿಕ ನಾವು ಪಕ್ಷದೊಳಗೆ ಶುದ್ದೀಕರಣ ಕೆಲಸ ಪ್ರಾರಂಭಿಸುತ್ತೇವೆ. ನನ್ನ ಮನೆಯವರಿಗೆ ನನ್ನ ಪಕ್ಷ ಆಗಬಾರದು” ಎಂದು ಅಸಮಾಧಾನ ಹೊರ ಹಾಕಿದರು.
ಕಾಂಗ್ರೆಸ್ ಸೇರಲ್ಲ:
“ಟಿಕೆಟ್ ಸಿಗದಕ್ಕೆ ನನಗೆ ನೋವಾಗಿದೆ. ಕಾಂಗ್ರೆಸ್ನಿಂದ ನನಗೆ ಆಹ್ವಾನ ಬಂದಿರುವುದು ನಿಜ. ಆದರೆ, ನಾನು ಕಾಂಗ್ರೆಸ್ಗೆ ಹೋಗಲ್ಲ. ನಮಗೆ ಅಪಮಾನ ಮಾಡಿದವರು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಲಿದ್ದಾರೆ. ನನ್ನ ಮುಂದಿನ ನಡೆ ಕರ್ನಾಟಕ ಬಿಜೆಪಿಯ ಶುದ್ಧೀಕರಣ” ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ : ಅಸ್ಸಾಂ: ಬಿಜೆಪಿ ತೊರೆದ ರಾಜ್ಯದ ಪ್ರಮುಖ ಮುಸ್ಲಿಂ ನಾಯಕ; ಕಾಂಗ್ರೆಸ್ ಸೇರ್ಪಡೆ