ಪಿಎಂ ಕೇರ್ಸ್ ನಿಧಿಯ ಬಳಕೆ ಬಗ್ಗೆ ಮಾಹಿತಿ ಕೇಳಿ ಹಲವಾರು ಅರ್ಜಿಗಳು ದಾಖಲಾಗಿರುವ ಸಂದರ್ಭದಲ್ಲಿ, ಅಂತಹ ಮಾಹಿತಿ ಒದಗಿಸುವುದು “ಕಚೇರಿಯ ಸಂಪನ್ಮೂಲಗಳ ಅಸಮರ್ಪಕ ತಿರುವಿಗೆ” ಕಾರಣವಾಗುತ್ತದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಹೇಳಿದೆ. ಆರ್ಟಿಐ ಕಾಯ್ದೆಯ ಸೆಕ್ಷನ್ 7 (9) ಮತ್ತು ಹೈಕೋರ್ಟ್, ಕೇಂದ್ರ ಮಾಹಿತಿ ಆಯೋಗದ ತೀರ್ಪುಗಳ ಹೊರತಾಗಿಯೂ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.
ಕೊರೊನಾ ಬಿಕ್ಕಟ್ಟನ್ನು ಎದುರಿಸಲು ದೇಣಿಗೆ ಸಂಗ್ರಹಕ್ಕಾಗಿ ಸ್ಥಾಪಿಸಲ್ಪಟ್ಟ ಪಿಎಂ ಕೇರ್ಸ್ ಕುರಿತು ಮಾಹಿತಿ ಕೇಳಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಸಾವಿರಾರು ಕೋಟಿ ರೂ ಹಣ ಸಂಗ್ರಹವಾಗಿದ್ದರೂ ಸಮರ್ಪಕ ಮಾಹಿತಿ ಒದಗಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಮಾಹಿತಿ ಹಕ್ಕು ಕಾಯ್ದೆ, 2005 ರ ಸೆಕ್ಷನ್ 2 (ಎಚ್) ಅಡಿಯಲ್ಲಿ ಈ ನಿಧಿ ಸಾರ್ವಜನಿಕ ಪ್ರಾಧಿಕಾರವಲ್ಲ ಎಂದು ಮೇ ತಿಂಗಳಿನಲ್ಲಿಯೇ ಪಿಎಂಒ ಹೇಳಿದೆ. ಆದ್ದರಿಂದ ಅರ್ಜಿಯಲ್ಲಿ ಕೋರಿದ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದೆ.
ಈ ಬಾರಿ, ಪ್ರಸಿದ್ಧ ಆರ್ಟಿಐ ಕಾರ್ಯಕರ್ತ ಲೋಕೇಶ್ ಬಾತ್ರಾ ಪಿಎಂ ಕೇರ್ಸ್ ಫಂಡ್ ಮತ್ತು ಪಿಎಂ ನ್ಯಾಷನಲ್ ರಿಲೀಫ್ ಫಂಡ್ಗೆ ಸಂಬಂಧಿಸಿದಂತೆ ಸಲ್ಲಿಸಲಾದ ಆರ್ಟಿಐ ಅರ್ಜಿಗಳ ಕುರಿತ ಮಾಹಿತಿ ನೀಡುವಂತೆ ಪ್ರಧಾನಮಂತ್ರಿ ಕಛೇರಿಗೆ ಮನವಿ ಸಲ್ಲಿಸಿದ್ದರು.
ಆರ್ಟಿಐ ಕಾಯ್ದೆಯ ಸೆಕ್ಷನ್ 7 (9) ರ ಅನ್ವಯ, ಈ ವಿಭಾಗವು “ಮಾಹಿತಿ ನೀಡುವಿಕೆಯ ನಿರಾಕರಣೆ ಮಾಡುವುದಿಲ್ಲ. ಆದರೆ ಅವರು ಬಯಸಿದ ರೂಪದಲ್ಲಿ ಒದಗಿಸುವುದನ್ನು ನಿರಾಕರಿಸುತ್ತದೆ” ಎಂದು ನ್ಯಾಯಾಲಯಗಳು ಮತ್ತು ಆಯೋಗವು ಪದೇ ಪದೇ ಹೇಳುತ್ತಿದೆ ಎಂದು ಪಿಎಂಒ ಹೇಳಿದೆ.
2020ರ ಏಪ್ರಿಲ್ ನಿಂದ ಇಲ್ಲಿಯವರೆಗೆ ಪಿಎಂಒ ಸ್ವೀಕರಿಸಿದ ಒಟ್ಟು ಆರ್ಟಿಐ ಅರ್ಜಿಗಳು ಮತ್ತು ವಿಲೇವಾರಿ ಮಾಡಿದ ಆರ್ಟಿಐ ಅರ್ಜಿಗಳ ವಿವರಗಳನ್ನು ಕೋರಿ ಬಾತ್ರಾ ಮೇ 26 ರಂದು,ಆರ್ಟಿಐ ಅರ್ಜಿ ಸಲ್ಲಿಸಿದ್ದರು.
ಅವರ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಬಾತ್ರಾ ಜುಲೈ 16 ರಂದು ಉಪ ಕಾರ್ಯದರ್ಶಿ ಮತ್ತು ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. 52 ದಿನಗಳು ಕಳೆದರೂ, ಅವರ ಪ್ರಶ್ನೆಗೆ ಇನ್ನೂ ಉತ್ತರ ಬಂದಿಲ್ಲ ಎನ್ನಲಾಗಿದೆ. ಅಂತಿಮವಾಗಿ, ಆಗಸ್ಟ್ 14 ರಂದು, ಬಾತ್ರಾ ಅವರ ಪ್ರಶ್ನೆಗೆ ಪಿಎಂಒ ಪ್ರತಿಕ್ರಿಯಿಸಿದೆ. ಆರ್ಟಿಐ ಅರ್ಜಿಗಳು ಮತ್ತು ಪಿಎಂಒನಲ್ಲಿ ಸಾಮಾನ್ಯವಾಗಿ ಸ್ವೀಕರಿಸಿದ ಮೇಲ್ಮನವಿಗಳು ಮತ್ತು ವಿಲೇವಾರಿ ಮಾಡಿದ ತಿಂಗಳ ವಿವರಗಳನ್ನು ನೀಡುವ ಮೂಲಕ ಇದು ಅವರ ಅರ್ಜಿಗೆ ಭಾಗಶಃ ಉತ್ತರವನ್ನು ಮಾತ್ರ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.
ಪಿಎಂ-ಕೇರ್ಸ್ ಫಂಡ್ ಮತ್ತು ಪಿಎಂಎನ್ಆರ್ಎಫ್ಗೆ ಸಂಬಂಧಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ, ಪಿಎಂಒ ‘ಕಾಯಿದೆಯ ಸೆಕ್ಷನ್ 7 (9) ರ ಅಡಿಯಲ್ಲಿ ನಿರ್ಬಂಧಗಳಿರುವುದರಿಂದ ನೀವು ಕೇಳಿದ ಮಾಹಿತಿಯನ್ನು ನೀಡಲಾಗುವುದಿಲ್ಲ’ ಎಂದಿದೆ.
ಆದಾಗ್ಯೂ, ಆರ್ಟಿಐ ಕಾಯ್ದೆಯ ಸೆಕ್ಷನ್ 7 (9) ಮಾಹಿತಿ ನಿರಾಕರಿಸುವಂತಿಲ್ಲ ಎಂದು ಹೇಳುವ ಕೇಂದ್ರ ಮಾಹಿತಿ ಆಯೋಗ ಮತ್ತು ಹೈಕೋರ್ಟ್ಗಳ ಹಲವಾರು ಆದೇಶಗಳಿವೆ ಎಂದು ಬಾತ್ರಾ ವಾದಿಸಿದರು.
ಈ ಪ್ರಕರಣಗಳಲ್ಲಿ, ಆರ್ಟಿಐ ಕಾಯ್ದೆಯ ಸೆಕ್ಷನ್ 7 (9), ಪಿಎಂಒ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ, ಮಾಹಿತಿಯನ್ನು ನಿರಾಕರಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿ, ಇಂತಹ ವಿಷಯದಲ್ಲಿ ನ್ಯಾಯಾಂಗವು ಅತ್ಯಂತ ಸ್ಪಷ್ಟವಾದ ತೀರ್ಪುಗಳನ್ನು ನೀಡಿದೆ.
ವಾಸ್ತವವಾಗಿ ಮಾಹಿತಿಯ ಪೂರೈಕೆಯು ಸಾರ್ವಜನಿಕ ಪ್ರಾಧಿಕಾರದ ಸಂಪನ್ಮೂಲಗಳ ಅಸಮರ್ಪಕ ತಿರುವಿಗೆ ಕಾರಣವಾಗುತ್ತದೆ ಎಂಬ ಕಾರಣದಿಂದ ಮಾಹಿತಿಯನ್ನು ನಿರಾಕರಿಸಲು ಕಾಯಿದೆಯಲ್ಲಿ ಯಾವುದೇ ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಕೃಪೆ: ದಿ ವೈರ್
ಇದನ್ನೂ ಓದಿ: ಪಿಎಂ ಕೇರ್ಸ್ಗೆ 60,000 ಕೋಟಿ ಹರಿದುಬಂದಿದೆ, ಆದರೂ ಮೋದಿ ಲೆಕ್ಕ ಕೊಡುತ್ತಿಲ್ಲ: ಸಿದ್ದರಾಮಯ್ಯ