ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಶನ್ (ಪಿಎಜಿಡಿ) ಒಕ್ಕೂಟವು ಡಿಲಿಮಿಟೇಶನ್ ಆಯೋಗದ ಶಿಫಾರಸುಗಳನ್ನು ವಿರೋಧಿಸಿ ನಡೆಸಲು ಉದ್ದೇಶಿಸಿದ್ದ ಮೆರವಣಿಗೆಗೆ ಮುನ್ನವೇ ಜಮ್ಮು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ರಾಜಕೀಯ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನು ವಿರೋಧಿಸಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಒಕ್ಕೂಟ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಶುಭೋದಯ ಮತ್ತು 2022ಕ್ಕೆ ಸುಸ್ವಾಗತ. ಕಾನೂನುಬಾಹಿರವಾಗಿ ಜನರ ಮನೆಗಳಿಗೆ ಬೀಗ ಹಾಕುತ್ತಿರುವ ಜಮ್ಮುಕಾಶ್ಮೀರದ ಅದೇ ಪೊಲೀಸರು ಮತ್ತು ಸಾಮಾನ್ಯ ಪ್ರಜಾಪ್ರಭುತ್ವ ಚಟುವಟಿಕೆಯಿಂದ ಭಯಭೀತರಾಗಿರುವ ಆಡಳಿತದೊಂದಿಗೆ ಹೊಸ ವರ್ಷ… ಗುಪ್ಕರ್ ಒಕ್ಕೂಟದ ಶಾಂತಿಯುತ ಧರಣಿ ಪ್ರತಿಭಟನೆಯನ್ನು ತಡೆಯಲು ನಮ್ಮ ಗೇಟ್ಗಳ ಹೊರಗೆ ಟ್ರಕ್ಗಳನ್ನು ನಿಲ್ಲಿಸಲಾಗಿದೆ. ಕೆಲವು ವಿಷಯಗಳು ಎಂದಿಗೂ ಬದಲಾಗುವುದಿಲ್ಲ” ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷರೂ ಆಗಿರುವ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ಅವರ ಮನೆಗೆ ಪೊಲೀಸರು ಮುತ್ತಿಗೆ ಹಾಕುವುದರ ಜೊತೆಗೆ, ಅವರ ತಂದೆಯ ಮನೆ ಮತ್ತು ಸಹೋದರಿಯ ಮನೆಗೆ ಸಂಪರ್ಕಿಸುವ ಗೇಟ್ಗೆ ಬೀಗ ಹಾಕಿಲಾಗಿದೆ ಎಂದು ಅಬ್ದುಲ್ಲಾ ಆರೋಪಿಸಿದ್ದಾರೆ. ಅವರು ಇದನ್ನು “ಕಾನೂನು ರಹಿತ ಪೊಲೀಸ್ ರಾಜ್ಯ” ಎಂದು ಟೀಕಿಸಿದ್ದಾರೆ.
ಜಮ್ಮು ವಿಭಾಗದಲ್ಲಿ ಆರು ಮತ್ತು ಕಾಶ್ಮೀರದಲ್ಲಿ ಒಂದು ವಿಧಾನಸಭಾ ಸೀಟುಗಳನ್ನು ಹೆಚ್ಚಿಸುವ ಡಿಲಿಮಿಟೇಶನ್ ಆಯೋಗದ ಪ್ರಸ್ತಾವನೆಯನ್ನು ವಿರೋಧಿಸಿ ಗುಪ್ಕರ್ ಒಕ್ಕೂಟವು ಶನಿವಾರ ಶ್ರೀನಗರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಇದರೊಂದಿಗೆ ಜಮ್ಮುವಿನ ವಿಧಾನಸಭಾ ಸೀಟುಗಳ ಸಂಖ್ಯೆ 43ಕ್ಕೆ ಮತ್ತು ಕಾಶ್ಮೀರದಲ್ಲಿ 47ಕ್ಕೆ ಏರಲಿದೆ.
ಇದನ್ನೂ ಓದಿ:ಜಮ್ಮು ಕಾಶ್ಮೀರ: ಹೈದರ್ಪೋರಾ ಎನ್ಕೌಂಟರ್ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ
ಜಮ್ಮುಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಮನೆಗೆ ಕೂಡಾ ಟ್ರಕ್ಗಳು ಮುತ್ತಿಗೆ ಹಾಕಿವೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ಪ್ರತಿಭಟನೆಗೂ ಆಡಳಿತ ಅವಕಾಶ ನೀಡದಿರುವುದು ಶೋಚನೀಯ ಸ್ಥಿತಿ ಎಂದು ಗುಪ್ಕರ್ ಮೈತ್ರಿಕೂಟದ ವಕ್ತಾರರಾದ ಸಿಪಿಐ (ಎಂ) ಹಿರಿಯ ನಾಯಕ ಎಂ ಯೂಸುಫ್ ತರಿಗಾಮಿ ಹೇಳಿದ್ದಾರೆ.
ಡಿಲಿಮಿಟೇಶನ್ ಆಯೋಗವು ಪ್ರತಿ ರಾಜ್ಯದ ವಿಧಾನಸಭೆಗೆ ಒಟ್ಟು ಎಷ್ಟು ಸ್ಥಾನಗಳನ್ನು ನಿಗದಿಪಡಿಸಬೇಕು ಮತ್ತು ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ ನಿರ್ಧರಿಸುವ ಅಧಿಕಾರವನ್ನು ಹೊಂದಿದೆ. ಹೆಚ್ಚುವರಿ ಸ್ಥಾನಗಳನ್ನು ಪರಿಚಯಿಸುವ ಕ್ರಮದ ಬಗ್ಗೆ ಈಗಾಗಲೇ ವಿರೋಧಗಳು ಎದ್ದಿದ್ದು, ಬಿಜೆಪಿಯು ಹಿಂದೂ ಬಹುಸಂಖ್ಯಾತ ಜಮ್ಮುವನ್ನು ಮುಂದಕ್ಕೆ ತರುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರವನ್ನು ಬಿಜೆಪಿ ದಶಕಗಳಷ್ಟು ಹಿಂದಕ್ಕೆ ಒಯ್ದಿದೆ: ಮೆಹಬೂಬಾ ಮುಫ್ತಿ