ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ 500ಕ್ಕೂ ಹೆಚ್ಚು ರೈತ ಸಂಘಟನೆಗಳು ಕರೆ ನೀಡಿದ್ದ ದೆಹಲಿ ಚಲೋ ಹೋರಾಟವನ್ನು ದಮನ ಮಾಡಲು ಸರ್ಕಾರ ಮುಂದಾಗಿದೆ. ನಿನ್ನೆಯೆಲ್ಲ ರೈತರ ದೆಹಲಿ ಪ್ರವೇಶಿಸದಂತೆ ತಡೆದ ದೆಹಲಿ ಪೊಲೀಸರು ಇಂದು ಮುಂಜಾನೆ ಸಹ ಪ್ರತಿಭಟನಾನಿರತ ರೈತರ ಮೇಲೆ ಲಾಠೀ ಚಾರ್ಜ್ ನಡೆಸಿ, ಜಲಫಿರಂಗಿ ಮತ್ತು ಅಶ್ರವಾಯು ಸಿಡಿಸಿದ್ದಾರೆ. ಹರಯಾಣದಿಂದ ಟ್ರಾಕ್ಟರ್ಗಳಲ್ಲಿ ಅಗತ್ಯವಸ್ತುಗಳನ್ನು ತುಂಬಿಕೊಂಡು ದೆಹಲಿಯತ್ತ ಹೊರಟಿದ್ದ ಸಾವಿರಾರು ಸಂಖ್ಯೆಯಲ್ಲಿದ್ದ ರೈತರ ಗುಂಪನ್ನು ದೆಹಲಿ ಗಡಿಯಲ್ಲಿ ತಡೆದಿರುವ ಪೊಲೀಸರು ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್, ಮುಳ್ಳುತಂತಿಗಳನ್ನು ಹಾಕಿ ತಡೆ ಒಡ್ಡಿದ್ದಾರೆ.
ಹರಿಯಾಣ ಪೊಲೀಸರು ಕೊರೊನಾ ಸಾಂಕ್ರಾಮಿಕ ನಿಯಮಗಳನ್ನು ಮುಂದಿಟ್ಟು ರೈತರು ಗುಂಪುಗೂಡದಂತೆ ತಡೆಯುತ್ತಿದ್ದಾರೆ. ಆದರೆ ರೈತರು ಯಾರಿಗೂ ಇಲ್ಲದ ನಿಯಮಗಳು ಕೇವಲ ರೈತರಿಗೇಕೆ? ನಮ್ಮನ್ನು ತಡೆಯಲು ಸಾವಿರ ಸಂಖ್ಯೆಯಲ್ಲಿ ನೆರೆದಿರುವ ಪೊಲೀಸರಿಗಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
I urge the Delhi Govt to deny permission for setting up temporary prisons. The farmer of our country is neither a criminal nor a terrorist.
Right to protest peacefully is enshrined in Indian Constitution – Article 19(1) and protests are the hallmark of a free, democratic society. https://t.co/cqMvEb181r— Raghav Chadha (@raghav_chadha) November 27, 2020
ನಿನ್ನೆಯಿಂದಲೇ ಪ್ರವಾಹೋಪಾದಿಯಲ್ಲಿ ದೆಹಲಿಗೆ ನುಗ್ಗುತ್ತಿರುವ ರೈತರನ್ನು ಬಂಧಿಸಿಡಲು ದೆಹಲಿ ಪೊಲೀಸರು ಒಂಭತ್ತು ಸ್ಟೇಡಿಯಂಗಳನ್ನು ಬಂಧನಗೃಹಗಳನ್ನಾಗಿ ಮಾರ್ಪಡಿಸಲು ಅನುಮತಿ ಕೋರಿದ್ದಾರೆ ಎಂದು ಎನ್ಟಿಟಿವಿ ವರದಿ ಮಾಡಿದೆ. ಆದರೆ ಆಪ್ ಶಾಸಕ ರಾಘವ್ ಚಾಡ್ಡಾ ಈ ಕ್ರಮಕ್ಕೆ ಕಿಡಿಕಾರಿದ್ದು ಯಾವುದೇ ಕಾರಣಕ್ಕೂ ದೆಹಲಿ ಸರ್ಕಾರ ಇದಕ್ಕೆ ಅನುಮತಿ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದ ರೈತರು ಕ್ರಿಮಿನಲ್ಗಳು ಅಲ್ಲ, ಭಯೋತ್ಪಾದಕರೂ ಅಲ್ಲ. ಶಾಂತಿಯುತವಾಗಿ ಪ್ರತಿಭಟಿಸುವುದು ದೇಶದ ಎಲ್ಲರ ಸಾಂವಿಧಾನಿಕ ಹಕ್ಕು ಎಂದು ಟ್ವೀಟ್ ಮಾಡಿದ್ದಾರೆ.
ಅದೇ ರೀತಿಯಲ್ಲಿ ಆಪ್ ಶಾಸಕ ಸೌರಭ್ ಭಾರದ್ವಾಜ್ ಟ್ವೀಟ್ ಮಾಡಿ ಇನ್ನು ಮುಂದೆ ದೆಹಲಿ ಪೊಲೀಸರು ತಮ್ಮನ್ನು ‘ದಿಲ್ ವಾಲಿ ಪೊಲೀಸ್’ ಎಂದು ಕರೆದುಕೊಳ್ಳಬಾರದು. ಅವರ ರೈತರೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅತಿಶಿ ಟ್ವೀಟ್ ಮಾಡಿ “ತಮ್ಮ ಹಕ್ಕುಗಳಿಗಾಗಿ ದನಿಯೆತ್ತಿದ್ದ ರೈತರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಪೊಲೀಸರು ನಡುಗುವ ಚಳಿಯಲ್ಲಿಯೂ ಜಲಫಿರಂಗಿ ಸಿಡಿಸುತ್ತಿದ್ದಾರೆ. ಈ ದೇಶ ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದಿದ್ದಾರೆ.
ನೂರಾರು ಕಡೆಗಳಿಂದ ದೆಹಲಿ ಪ್ರವೇಶಿಸಲು ರೈತರು ಶತಪ್ರಯತ್ನ ಮುಂದುವರೆಸಿದ್ದಾರೆ. ದೇಶಾದ್ಯಂತ ಹಲವು ರಾಜ್ಯಗಳಿಂದ ಹತ್ತಾರು ಸಾವಿರ ಜನರು ಇಂದು ರಾಮಲೀಲಾ ಮೈದಾನದಲ್ಲಿ ಒಟ್ಟುಗೂಡು ಕೃಷಿ ಮಸೂದೆಗಳಿಗೆ ವಿರೋಧ ದಾಖಲಿಸಲು ಮುಂದಾಗಿದ್ದರು. ಆದರೆ ದೆಹಲಿ ಪೊಲೀಸರು ಎಲ್ಲಿಂದಲೂ ರೈತರು ಒಳಬರಲು ಬಿಡುತ್ತಿಲ್ಲ. ನಿನ್ನೆ ನಡೆದ ರೈತರ ಪ್ರತಿಭಟನೆಗಳಿಂದಾಗಿ ದೆಹಲಿ ಪೂರ್ತಿ ಟ್ರಾಫಿಕ್ ಜಾಮ್ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಇಂದು ಎಲ್ಲಾ ಟ್ರಾಫಿಕ್ಗಳನ್ನು ಬದಲಿಸಲಾಗಿದೆ.
ಒಟ್ಟಿನಲ್ಲಿ ದೆಹಲಿ ಸುತ್ತಾ ಪೊಲೀಸ್ ಸರ್ಪಗಾವಲಿಟ್ಟು ರೈತರನ್ನು ಒಳಬರದಂತೆ ಪೊಲೀಸರು ತಡೆಯುತ್ತಿದ್ದಾರೆ. ಆದರೆ ರೈತರ ತಾವು ಇದ್ದಲ್ಲಿಯೇ ಧರಣಿ ಮುಂದುವರೆಸುವುದಾಗಿ, ಅದಕ್ಕೆ ಬೇಕಾದ ಆಹಾರ ಸಾಮಾಗ್ರಿಗಳು ಇವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ದೇಶವ್ಯಾಪಿ ಕಾರ್ಮಿಕ ಮುಷ್ಕರ: ಕರ್ನಾಟಕದಲ್ಲೂ ಯಶಸ್ವಿ – ಒಂದು ಝಲಕ್!