ಬಾಂಗ್ಲಾದೇಶದಲ್ಲಿ ನಾಳೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇಂದು ರಾಜಧಾನಿ ಢಾಕಾದ ಹೊರವಲಯದಲ್ಲಿ 4 ಮತಗಟ್ಟೆಗಳು ಸೇರಿದಂತೆ ಕನಿಷ್ಠ 5 ಪ್ರಾಥಮಿಕ ಶಾಲೆಗಳಿಗೆ ಅಪರಿಚಿತರು ಬೆಂಕಿ ಹಚ್ಚಿದ್ದು, ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ದೇಶದಾದ್ಯಂತ ಹಿಂಸಾಚಾರಗಳು ವರದಿಯಾಗುತ್ತಿದೆ.
ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ದೇಶದಲ್ಲಿನ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸಿದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಉಸ್ತುವಾರಿ ಸರಕಾರದ ನೇತೃತ್ವದಲ್ಲಿ ಚುನಾವಣೆ ನಡೆಯಬೇಕು ಎಂದು ಬಿಎನ್ಪಿ ಆಗ್ರಹಿಸಿತ್ತು. ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷ ನಾಲ್ಕನೇ ಬಾರಿಗೆ ನೇರ ಅಧಿಕಾರವನ್ನು ಪಡೆಯಲು ನಕಲಿ ಮತದ ಮೂಲಕ ಷಡ್ಯಂತರ ನಡೆಸಿದೆ ಎಂದು ಆರೋಪಿಸಿತ್ತು.
ಪ್ರತಿಪಕ್ಷ BNP ಮತದಾನದಿಂದ ದೂರವಿರಲು ನಾಗರಿಕರನ್ನು ಕೇಳಿಕೊಂಡಿದ್ದು, ಶನಿವಾರದಿಂದ ದೇಶದಲ್ಲಿ 2 ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಸಾಮಾನ್ಯ ದಿನಗಳಲ್ಲಿ ದಟ್ಟಣೆಯಿಂದ ಕೂಡಿದ್ದ ಢಾಕಾದ ರಸ್ತೆಗಳು ಇಂದು ಬಹುತೇಕ ನಿರ್ಜನವಾಗಿದ್ದವು, ಭದ್ರತಾ ಪಡೆಗಳು ಶಸ್ತ್ರಸಜ್ಜಿತ ವಾಹನಗಳಲ್ಲಿ ನಗರದಲ್ಲಿ ಗಸ್ತು ತಿರುಗುತ್ತಿದ್ದರು.
ರಾಜೀನಾಮೆ ನೀಡಲು ಮತ್ತು ಉಸ್ತುವಾರಿ ಸರಕಾರದ ನೇತೃತ್ವದಲ್ಲಿ ಚುನಾವಣೆಯನ್ನು ನಡೆಸಲು ಅಧಿಕಾರವನ್ನು ಬಿಟ್ಟುಕೊಡಲು ಹಸೀನಾ ಅವರು ನಿರಾಕರಿಸಿದ್ದಾರೆ. ಸರ್ಕಾರ ವಿರೋಧಿ ಪ್ರತಿಭಟನೆಗೆ ಪ್ರತಿಪಕ್ಷಗಳು ಜನರನ್ನು ಪ್ರಚೋದಿಸುತ್ತಿದೆ. ಇದರಿಂದಾಗಿ ಅಕ್ಟೋಬರ್ ಅಂತ್ಯದಿಂದ ಢಾಕಾದಲ್ಲಿ ಕನಿಷ್ಠ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹಸೀನಾ ಪ್ರತ್ಯಾರೋಪ ಮಾಡಿದ್ದಾರೆ.
ಗಾಜಿಪುರ ಪೊಲೀಸ್ ಮುಖ್ಯಸ್ಥ ಕಾಜಿ ಶಫೀಕುಲ್ ಆಲಂ ಈ ಕುರಿತು ಮಾಹಿತಿಯನ್ನು ನೀಡಿದ್ದು, ಚುನಾವಣೆಗೆ ಅಡ್ಡಿಪಡಿಸುವ ಗುರಿಯಿಂದ ಕೃತ್ಯ ನಡೆಸಲಾಗುತ್ತಿದೆ. ನಾವು ಗಸ್ತು ತಿರುಗುವಿಕೆಯನ್ನು ಹೆಚ್ಚಿಸಿದ್ದೇವೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೆಚ್ಚಿನ ಕ್ರಮವನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಈಶಾನ್ಯ ಜಿಲ್ಲೆಗಳಾದ ಮೌಲವಿಬಜಾರ್ ಮತ್ತು ಹಬಿಗಂಜ್ನಲ್ಲಿ ಮತಗಟ್ಟೆಗಳ ಮೇಲೆ ಬೆಂಕಿ ಹಚ್ಚಲಾಗಿದೆ. ಕಳೆದ ಎರಡು ದಿನಗಳಿಂದ ದೇಶಾದ್ಯಂತ ಇದೇ ರೀತಿಯ ಘಟನೆಗಳು ವರದಿಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಗ್ಲಾ ಕರಾವಳಿ ಜಿಲ್ಲೆ ಖುಲ್ನಾದಲ್ಲಿ, ಶಾಲೆಗೆ ಬೆಂಕಿ ಹಚ್ಚಲು ಯತ್ನಿಸಿದವರನ್ನು ಹಿಡಿದು ಸ್ಥಳೀಯ ನಾಗರಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಶುಕ್ರವಾರ ಅದೇ ಪ್ರದೇಶದಲ್ಲಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಬೆಂಕಿ ಹಚ್ಚುವ ಮತ್ತೊಂದು ಪ್ರಯತ್ನವನ್ನು ಸ್ಥಳೀಯರು ತಪ್ಪಿಸಿದ್ದಾರೆ ಎಂದು ಖುಲ್ನಾ ಪೊಲೀಸ್ ಮುಖ್ಯಸ್ಥ ಸೈದುರ್ ರೆಹಮಾನ್ ಹೇಳಿದ್ದಾರೆ.
ಸುಮಾರು 8,00,000 ಪೊಲೀಸರು, ಅರೆಸೇನಾ ಪಡೆಯನ್ನು ಮತದಾನಕ್ಕೆ ನಿಯೋಜಿಸಲಾಗಿದೆ. ಶಾಂತಿ ಕಾಪಾಡಲು ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳನ್ನು ದೇಶಾದ್ಯಂತ ನಿಯೋಜಿಸಲಾಗಿದೆ.
ಶುಕ್ರವಾರ ರಾತ್ರಿ ನಡೆದ ಪ್ರತ್ಯೇಕ ಘಟನೆಯಲ್ಲಿ ಪ್ಯಾಸೆಂಜರ್ ರೈಲಿಗೆ ಬೆಂಕಿ ಹಚ್ಚಿದ ಶಂಕಿತ ದಾಳಿಯಲ್ಲಿ ಮಗು ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ. ಕಳೆದ ತಿಂಗಳು ಪ್ರತಿಪಕ್ಷಗಳು ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರದ ವೇಳೆ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿ ನಾಲ್ವರು ಸಾವನ್ನಪ್ಪಿದ್ದರು.
ಬೆನಾಪೋಲ್ ಎಕ್ಸ್ಪ್ರೆಸ್ನಲ್ಲಿ ಶುಕ್ರವಾರ ನಡೆದ ಘಟನೆಯು ನಿಸ್ಸಂದೇಹವಾಗಿ ಮಾನವೀಯತೆಯ ವಿರುದ್ಧದ ವಿಧ್ವಂಸಕ ಕ್ರೌರ್ಯ ಎಂದು ಬಿಎನ್ಪಿಯ ಹಿರಿಯ ನಾಯಕ ರುಹುಲ್ ಕಬೀರ್ ರಿಜ್ವಿ ಹೇಳಿದ್ದಾರೆ. ಘಟನೆಗೆ ಆಡಳಿತ ಪಕ್ಷವನ್ನು ದೂಷಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಭಾನುವಾರ (ನಾಳೆ) ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಪ್ರಮುಖ ಪ್ರತಿಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ ಪ್ರಧಾನಿ ಶೇಖ್ ಹಸೀನಾ ಅವರು ಸತತ ನಾಲ್ಕನೇ ಅವಧಿಗೆ ಗೆಲುವು ಸಾಧಿಸುವ ನಿರೀಕ್ಷೆಯಿದೆ. ಭ್ರಷ್ಟಾಚಾರದ ಆರೋಪದಲ್ಲಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ ನಾಯಕ, ಮಾಜಿ ಪ್ರಧಾನಿ ಖಲೀದಾ ಜಿಯಾ (78) ಗೃಹಬಂಧನದಲ್ಲಿದ್ದಾರೆ.
ಇದನ್ನು ಓದಿ: ‘ಒಂದು ರಾಷ್ಟ್ರ ಒಂದು ಚುನಾವಣೆ‘: ಸಾರ್ವಜನಿಕ ಸಲಹೆ ಕೇಳಿದ ಕೋವಿಂದ್ ಸಮಿತಿ