ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿಗೆ ನೀಡಿದ್ದ ಜಾಮೀನು ಪ್ರಶ್ನಿಸಿ, ದಾಭೋಲ್ಕರ್ ಪುತ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಐವರು ಆರೋಪಿಗಳಲ್ಲಿ ಓರ್ವನಾದ ವಿಕ್ರಮ್ ಭಾವೆಗೆ ಬಾಂಬೆ ಹೈಕೋರ್ಟ್ 2021ರ ಮೇ 6ರಂದು ಜಾಮೀನು ನೀಡಿತ್ತು. ದಾಭೋಲ್ಕರ್ ಪುತ್ರಿ ಮುಕ್ತಾ ದಾಭೋಲ್ಕರ್ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎಸ್.ವಿಎ.ನ್ ಭಟ್ಟಿ ಅವರಿದ್ದ ಪೀಠ, ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ವೇಳೆ ಹೈಕೋರ್ಟ್ ಸ್ಪಷ್ಟ ಕಾರಣಗಳನ್ನು ನೀಡಿತ್ತು ಎಂದು ಹೇಳಿದೆ.
ಮುಕ್ತಾ ದಾಭೋಲ್ಕರ್ ಪರ ಹಾಜರಿದ್ದ ಹಿರಿಯ ವಕೀಲ ಆನಂದ್ ಗ್ರೋವರ್, ಇದು ಗಂಭೀರ ಪ್ರಕರಣವಾಗಿದ್ದು, ವಿಕ್ರಮ್ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷಿಯೊಬ್ಬರು ವಿಧಿವಿಜ್ಞಾನ ಪರೀಕ್ಷೆಯ ವೇಳೆ ಮಾಹಿತಿ ನೀಡಿರುವ ಬಗ್ಗೆ ಪೀಠದ ಗಮನಕ್ಕೆ ತಂದಿದ್ದಾರೆ.
ಆದರೆ ಕೋರ್ಟ್ ಹೇಳಿಕೆಯು ತಾಳೆಯಾಗುವುದಿಲ್ಲ ಎಂಬುದನ್ನು ಹೈಕೋರ್ಟ್ ಗಮನಿಸಿದೆ. ಮಾತ್ರವಲ್ಲ ಆರೋಪಿಯು 2021ರ ಮೇ 6 ರಿಂದಲೂ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಹೇಳಿ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ.
ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರನ್ನು 2013ರ ಆಗಸ್ಟ್ 20ರಂದು ಪುಣೆಯಲ್ಲಿ ದ್ವಿಚಕ್ರವಾಹನದಲ್ಲಿ ಬಂದಿದ್ದ ಹಂತಕರು ಗುಂಡಿಟ್ಟು ಹತ್ಯೆ ಮಾಡಿದ್ದರು. ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸನಾತನ ಸಂಸ್ಥೆಯ ವೀರೇಂದ್ರ ಸಿನ್ಹ ತಾವ್ಡೆ, ಸಚಿನ್ ಅದುರೆ ಮತ್ತು ಶರದ್ ಕಲಾಸ್ಕರ್ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿತ್ತು. ದಾಭೋಲ್ಕರ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರು ಸ್ಥಳದಿಂದ ಪರಾರಿಯಾಗಲು ನೆರವಾದ ಆರೋಪ ವಿಕ್ರಮ್ ಮೇಲಿತ್ತು.
ವಿಚಾರವಾದಿ ದಾಬೋಲ್ಕರ್ ಅವರ ಹತ್ಯೆಯಂತೆಯೇ ಗೋವಿಂದ ಪನ್ಸಾರೆ ಅವರನ್ನು 2015ರ ಫೆಬ್ರವರಿ 20ರಂದು, ಎಂಎಂ ಕಲ್ಬುರ್ಗಿ ಅವರನ್ನು 2015ರ ಆಗಸ್ಟ್ 30ರಂದು, ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟಂಬರ್ 5ರಂದು ಹತ್ಯೆಗೈಯಲಾಗಿತ್ತು.
ಇದನ್ನು ಓದಿ: ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ ಬಹಿಷ್ಕರಿಸಿದ ಪ್ರಮುಖ ವಿರೋಧ ಪಕ್ಷ: ದೇಶದಾದ್ಯಂತ ಹಿಂಸಾಚಾರ