ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಬಂದು ನಿಂತಿದೆ. ದೀಪಾವಳಿ ಹಿನ್ನೆಲೆ ಸಿಡಿಸಿದ ಪಟಾಕಿಯಿಂದ ದೆಹಲಿಯ ವಾಯು ಮತ್ತಷ್ಟು ವಿಷವಾಗಿದೆ ಎಂದು ಮೂಲಗಳು ತಿಳಿಸಿವೆ.
ನಸುಕಿನ ಜಾವ ದಟ್ಟ ಹೊಗೆ ಆವರಿಸಿತ್ತು. ರಾಜಧಾನಿಯಲ್ಲಿ ಈಗ ಹರಡಿರುವ ಅತ್ಯಂತ ಕಳಪೆ ಮಟ್ಟದ ವಾಯು ಉಸಿರಾಟಕ್ಕೆ ಯೋಗ್ಯವಲ್ಲ ಎಂದು ತಜ್ಞರು ತಿಳಿಸಿದ್ದಾರೆ. ದೆಹಲಿಯ ಲೋಧಿಯಲ್ಲಿ ವಾಯು ಸೂಚ್ಯಂಕ ೫೦೦ ದಾಖಲಾಗಿದೆ. ದೆಹಲಿಯಲ್ಲಿ ೩೦೬ ಮತ್ತು ನೋಯ್ಡಾದಲ್ಲಿ ೩೫೬ ದಾಖಲಾಗಿದೆ.
ಇನ್ನು ದೆಹಲಿಯಲ್ಲಿ ಪಟಾಕಿ ಸಿಡಿಸದಂತೆ ನಿರ್ಬಂಧ ಹೇರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನತೆ ನಿಯಮ ಮೀರಿ ಪಟಾಕಿ ಸಿಡಿಸಿ, ಹಬ್ಬವನ್ನು ಸಂಭ್ರಮಿಸಿದ್ದಾರೆ. ಪರಿಣಾಮ ವಾಯು ಗುಣಮಟ್ಟ ತೀವ್ರ ಹದಗೆಟ್ಟು ಹೋಗಿದೆ. ಇನ್ನು ದೆಹಲಿಗೆ ಹೋಲಿಸಿದರೆ ಮುಂಬೈನಲ್ಲಿ ಐದು ವರ್ಷದಲ್ಲಿ ವಾಯು ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ.
ಇನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿ, ದೆಹಲಿಯ ವಾಯು ಗುಣಮಟ್ಟ ಕಳೆದ ಐದು ವರ್ಷಗಳಲ್ಲಿ ಉತ್ತಮ ಸ್ಥಿತಿ ತಲುಪಿದೆ. ಆದರೆ ದೀಪಾವಳಿ ಆಚರಣೆಯ ಒಂದು ದಿನದ ನಂತರ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದೆ ಅಂತಾ ವಾಯು ಗುಣಮಟ್ಟದ ಬಗ್ಗೆ ಕೇಜ್ರಿವಾಲ್ ಸ್ಪಷ್ಟನೆ ನೀಡಿದ್ದಾರೆ.
ಪಟಾಕಿ ಸಿಡಿಸುವಲ್ಲಿ ದೆಹಲಿ ಜನತೆ ಸಂಯಮದಿಂದ ವರ್ತಿಸಿದ್ದಾರೆ. ಕಡಿಮೆ ಪಟಾಕಿ ಸಿಡಿಸಿದ್ದಾರೆ. ಇದು ಖುಷಿಪಡಬೇಕಾದ ಸಂಗತಿ. ಆದರೆ ದೆಹಲಿ ಅಕ್ಕಪಕ್ಕದ ನಗರಗಳಾದ ಗಾಜಿಯಾಬಾದ್, ಗುರುಗ್ರಾಮ್, ನೋಯ್ಡಾ, ಫರಿದಾಬಾದ್ ಗಳಲ್ಲಿ ಹೆಚ್ಚು ಪಟಾಕಿ ಸಿಡಿಸಿದ್ದರಿಂದ ಅದರ ಎಫೆಕ್ಟ್ ದೆಹಲಿಗೂ ತಲುಪಿದೆ. ಆದ್ದರಿಂದ ದೆಹಲಿ ವಾಯು ಗುಣಮಟ್ಟ ದೀಪಾವಳಿಯ ಒಂದೇ ದಿನದ ನಂತರ ಅತ್ಯಂತ ಕಳಪೆ ಮಟ್ಟ ದಾಖಲಿಸಿದೆ ಎಂದು ಹೇಳಿದರು.