‘ಪ್ರಗತಿ ಮೈದಾನದ ಸುರಂಗವನ್ನು ದುರಸ್ತಿಗೊಳಿಸಲು ಸಾಧ್ಯವಾಗುತ್ತಿಲ್ಲ; ಕಾಮಗಾರಿ ಕುರಿತು ಕೂಲಂಕುಷ ಪರೀಕ್ಷೆಯ ಅಗತ್ಯವಿದೆ’ ಎಂದು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ. ಕಾಮಗಾರಿ ವಿಳಂಬ ಹಾಗೂ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಸುರಂಗ ಬಿರುಕು ಬಿಟ್ಟಿದೆ ಎಂದು ಪಿಡಬ್ಲ್ಯುಡಿ ಅಧಿಕಾರಿ ತಿಳಿಸಿದ್ದಾರೆ. ಇನ್ನು ಮುಂದೆ ಪ್ರಯಾಣಿಕರಿಗೆ ಈ ಮಾರ್ಗವು ಸುರಕ್ಷಿತವಲ್ಲ ಮತ್ತು ಸಂಪೂರ್ಣ ನವೀಕರಣವಿಲ್ಲದೆ ಅದನ್ನು ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ₹777 ಕೋಟಿ ವೆಚ್ಚದ ಸುರಂಗದಲ್ಲಿ ಕಳಪೆ ಕಾಮಗಾರಿ ಆರೋಪದ ಮೇಲೆ ‘ಲಾರ್ಸೆನ್ ಮತ್ತು ಟೂಬ್ರೊ’ಗೆ ಕಂಪನಿಗೆ ನೋಟಿಸ್ ನೀಡಿದೆ. ಇಲಾಖೆಯು ಎಲ್ ಅಂಡ್ ಟಿಯಿಂದ ₹500 ಕೋಟಿಯನ್ನು “ಟೋಕನ್ ಮೊತ್ತ” ವಾಗಿ ಬೇಡಿಕೆಯಿಟ್ಟಿದ್ದು, ನಿರ್ಮಾಣ ಸಂಸ್ಥೆಯಿಂದ ಇದೇ ಮೊತ್ತದ ಪ್ರತಿಹಕ್ಕನ್ನು ಪ್ರೇರೇಪಿಸಿದೆ. ಲೋಕೋಪಯೋಗಿ ಇಲಾಖೆ ಕೂಡ ಕಂಪನಿಗೆ ಕೂಡಲೇ ದುರಸ್ತಿ ಕಾರ್ಯ ಆರಂಭಿಸುವಂತೆ ಸೂಚಿಸಿದೆ.
ತಾನು ನಿರ್ಮಿಸಿದ ಸುರಂಗದ ಸೋರಿಕೆ ಮತ್ತು ಬಿರುಕುಗಳ ಬಗ್ಗೆ ಮಾತನಾಡಿದ ಎಲ್ ಅಂಡ್ ಟಿ ವಕ್ತಾರರು, “ಪಿಡಬ್ಲ್ಯೂಡಿ ನಮ್ಮ ಗೌರವಾನ್ವಿತ ಗ್ರಾಹಕ; ನಾವು ಅವರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿದ್ದೇವೆ. ಕಂಪನಿಯು ₹500 ಕೋಟಿಯ ಕ್ಲೈಮ್ ಅನ್ನು ಇಲಾಖೆ ಯಾಕೆ ಸಲ್ಲಿಸಿದೆ ಎಂದು ತಿಳಿಸಲು ಬಯಸುತ್ತದೆ’ ಎಂದು ಹೇಳಿದ್ದಾರೆ.
ಒಂದು ವರ್ಷದ ಹಿಂದೆ ನಿರ್ಮಿಸಲಾದ ಸುರಂಗದ ಗೋಡೆಗಳಿಂದ ನೀರು ಸೋರುವ ಮೂಲಕ ಸಮಸ್ಯೆ ಕಾಣಿಸಿಕೊಂಡಿದೆ. ರಸ್ತೆಯ ಮಧ್ಯದಿಂದ ನೀರು ಹುಕ್ಕುತ್ತಿದ್ದು, ನೀರು ನುಗ್ಗಿದ್ದರಿಂದ ಸುರಂಗದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಸುರಂಗದ ರಸ್ತೆಯಲ್ಲಿಯೂ ಸಹ ಭಾರೀ ಬಿರುಕುಗಳು ಕಾಣಿಸಿಕೊಂಡಿದೆ ಎಂದು ಎನ್ಡಿಟಿವಿಯ ಗ್ರೌಂಡ್ ರಿಪೋರ್ಟ್ ತೋರಿಸಿದೆ. ಹಲವೆಡೆ ನೀರು ಸೋರಿಕೆಯಾಗಿರುವುದರಿಂದ ಸುರಂಗ ಮಾರ್ಗ ಬಳಕೆಯು ಜನರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ನಗರ ಯೋಜನಾ ತಜ್ಞ ಅರ್ಚಿತ್ ಸಿಂಗ್ ಮಾತನಾಡಿ, ‘ಜಲನಿರೋಧಕ ಸಮಸ್ಯೆ ಕಾಣಿಸಿಕೊಂಡಿದೆ, ಮಣ್ಣು ಪರೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ತೋರುತ್ತದೆ. ಮೊದಲನೆಯದಾಗಿ, ಈ ಸುರಂಗದ ಬಳಕೆಯನ್ನು ನಿಲ್ಲಿಸಬೇಕು. ಸರ್ಕಾರವು ಸಮಿತಿ ರೂಪಿಸಬೇಕು; ಭೌಗೋಳಿಕ ತಜ್ಞರು, ವಾಸ್ತುಶಿಲ್ಪಿಗಳು, ಸುರಂಗ ಎಂಜಿನಿಯರ್ಗಳು ಮತ್ತು ಎಂಜಿನಿಯರ್ಗಳ ತಂಡವು ಸೋರಿಕೆಗೆ ಕಾರಣ ಮತ್ತು ಬಿರುಕುಗಳಿಗೆ ಕಾರಣಗಳನ್ನು ಕಂಡುಹಿಡಿಯಬೇಕು. ಸುರಂಗವನ್ನು ದುರಸ್ತಿ ಮಾಡಬಹುದೇ ಅಥವಾ ಏನು ಮಾಡಬೇಕು ಎಂದು ಕಂಡುಹಿಡಿಯಬೇಕು’ ಎಂದಿದ್ದಾರೆ.
ಸುರಂಗ ಮತ್ತು ಐದು ಅಂಡರ್ಪಾಸ್ಗಳು ಪ್ರಗತಿ ಮೈದಾನ್ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಪ್ರಾಜೆಕ್ಟ್ ಅನ್ನು ರೂಪಿಸುತ್ತವೆ. ಇದು ನಗರದ ಪೂರ್ವ ಭಾಗಗಳು ಮತ್ತು ಹತ್ತಿರದ ನಗರಗಳಾದ ನೋಯ್ಡಾ ಮತ್ತು ಗಾಜಿಯಾಬಾದ್ನೊಂದಿಗೆ ಮಧ್ಯ ದೆಹಲಿಯ ನಡುವಿನ ಸಂಪರ್ಕವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ. 2022ರಲ್ಲಿ ಉದ್ಘಾಟನೆಗೊಂಡ 1.3 ಕಿಮೀ ಸುರಂಗವು ಕಳೆದ ವರ್ಷ ಪ್ರವಾಹದ ಸಮಯದಲ್ಲಿ ಅನೇಕ ಬಾರಿ ಬಂದ್ ಮಾಡಬೇಕಾಯಿತು.
ಸರಂಗ ಸೋರಿಕೆಯ ಬಗ್ಗೆ ಮಾತನಾಡಿರುವ ದೆಹಲಿ ಅಧಿಕಾರಿಯೊಬ್ಬರು, ‘ಎಲ್ಲ ಭೂಗತ ಸುರಂಗಗಳಲ್ಲಿ ಸೋರಿಕೆ ಸಾಮಾನ್ಯ. ಅದರ ನಿರ್ವಹಣೆಯನ್ನು ವಹಿಸಿಕೊಟ್ಟಿರುವ ಎಲ್ & ಟಿ ಕಂಪನಿಯು ಕಳೆದ ಎರಡು ತಿಂಗಳಿನಿಂದ ಹಲವಾರು ಬಾರಿ ದುರಸ್ತಿ ಕಾರ್ಯವನ್ನು ಕೈಗೊಳ್ಳದ ಕಾರಣ ಸಮಸ್ಯೆ ಕಾಣಿಸಿಕೊಂಡಿದೆ. ಎಂದರು.
ಇದನ್ನೂ ಓದಿ; ಮುಸ್ಲಿಮರ ಮನೆ, ಪ್ರಾರ್ಥನಾ ಸ್ಥಳಗಳ ‘ಕಾನೂನುಬಾಹಿರ ಧ್ವಂಸ’ವನ್ನು ತಕ್ಷಣ ನಿಲ್ಲಿಸಿ: ಅಮ್ನೆಸ್ಟಿ ಇಂಟರ್ನ್ಯಾಶನಲ್