ಹಾಸನ ಜೆಡಿಎಸ್ ಸಂಸದ, ಎನ್ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಕರಣಕ್ಕೆ ಇದೀಗ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ವಿಶೇಷ ತನಿಖಾ ತಂಡದ ಅಧಿಕಾರಿಗಳು (ಎಸ್ಐಟಿ) ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡ ಆಪ್ತ ಲಿಖಿತ್ ಮತ್ತು ಕಚೇರಿ ಸಿಬ್ಬಂದಿ ಚೇತನ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಗೌಡ ಮತ್ತು ಪುಟ್ಟರಾಜುಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಆದರೆ, ಬಿಜೆಪಿ ಮುಖಂಡ ಪ್ರೀತಂ ಗೌಡ ಮಾತ್ರ, ‘ಇಬ್ಬರು ಬಂಧಿತರು ನನ್ನ ಆಪ್ತ ಸಹಾಯಕರಲ್ಲ, ಕಚೇರಿ ಕೆಲಸಗಾರರು; ಹಾಸನ ಜಿಲ್ಲೆಯ ಎರಡು ಲಕ್ಷ ಜನರ ಬಳಿ ವಿಡಿಯೊ ಇವೆ’ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಕಳೆದ ತಿಂಗಳು ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಗಂಭೀರವಾಗುತ್ತಿದ್ದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ, ಪ್ರಕರಣವನ್ನು ಎಸ್ಐಟಿಗೆ ವರ್ಗಾಯಿಸಲಾಗಿತ್ತು. ಹಿರಿಯ ಪೊಲೀಸರ ಹಲವು ತಂಡಗಳನ್ನು ರಚಿಸಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಎಸ್ಐಟಿ ತಂಡ ಹಾಸನದಲ್ಲಿ ಬೀಡುಬಿಟ್ಟಿದೆ. ಈ ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟವರನ್ನು ಬಂಧಿಸಲಾಗುತ್ತಿದೆ. ಇದೀಗ ಮಾಜಿ ಶಾಸಕ ಪ್ರೀತಂ ಗೌಡ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಮತ್ತು ಆತನ ಸ್ನೇಹಿತ ಲಿಖಿತ್ ನನ್ನು ಪೆನ್ ಡ್ರೈವ್ ಇಟ್ಟುಕೊಂಡಿದ್ದ ಆರೋಪದ ಮೇಲೆ ಅಧಿಕಾರಿಗಳು ಬಂಧಿಸಿದ್ದಾರೆ. ಲಿಖಿತ್ ಮತ್ತು ಚೇತನ್ ಪ್ರೀತಂ ಗೌಡ ಜೊತೆ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಸದ್ಯ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.
ಈ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಆರೋಪಿಯನ್ನು ಕುದುರೆಮುಖ ಪೊಲೀಸರು ಬಂಧಿಸಿದ್ದಾರೆ. ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಬಂಧಿತ ಆರೋಪಿ. ಆರೋಪಿ ಪ್ರಜ್ವಲ್ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಫೇಸ್ ಬುಕ್, ಯೂಟ್ಯೂಬ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದ. ಪ್ರಜ್ವಲ್ ವಿರುದ್ಧ ಕುದೇರಮುಖ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 67, 67 (ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪ್ರಜ್ವಲ್ ಟ್ರೋಲ್ ಪೇಜ್ ಅಡ್ಮಿನ್ ಆಗಿದ್ದಾನೆ.
ಪ್ರೀತಂ ಗೌಡ ಹೇಳಿದ್ದೇನು?
ಪ್ರಜ್ವಲ್ ರೇವಣ್ಣ ವಿಡಿಯೊ ಹಂಚಿದ ಆರೋಪ ಮೇಲೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಹಾಸನ ಮಾಜಿ ಶಾಸಕ ಪ್ರೀತಂ ಗೌಡ, “ಹಾಸನದಲ್ಲಿ ಸಣ್ಣ ಯುವಕರಿಂದ 75 ವರ್ಷದ ಮುದುಕರವರೆಗೂ ಎಲ್ಲರ ಬಳಿಯೂ ವೀಡಿಯೊ ಇದೆ; ಎಲ್ಲರನ್ನೂ ಬಂಧನ ಮಾಡೋಕಾಗುತ್ತಾ” ಎಂದು ಪ್ರಶ್ನಿಸಿದ್ದಾರೆ.
“ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಅಮಾಯಕ ಯುವಕನಿಗೂವೀಡಿಯೋ ಬಂದಿದೆ. ಅದನ್ನೇ ಅಪರಾಧ ಅಂದ್ರೆ ಹೇಗೆ? ವೀಡಿಯೋ ನೋಡಿದವರೆಲ್ಲ ತಪ್ಪಿತಸ್ಥರು ಅಂದ್ರೆ ಹಾಸನದ 15 ಲಕ್ಷ ಜನ ತಪ್ಪಿತಸ್ಥರಾಗ್ತಾರೆ. ತನಿಖೆ ಸರಿಯಾದ ರೀತಿಯಲ್ಲಿ ಆಗಬೇಕು” ಎಂದು ಹೇಳಿದ್ದಾರೆ.
“ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ; ಈ ಬಗ್ಗೆ ಚರ್ಚೆಯನ್ನೂ ನಾನು ಮಾಡಿಲ್ಲ. ನಮ್ಮ ಕಾರ್ಯಕರ್ತರ ಬಂಧನ ಆಗಿದ್ದಕ್ಕೆ ಮಾತನಾಡುತ್ತಿದ್ದೇನೆ. ನಮಗೂ ವೀಡಿಯೋಗೂ ಸಂಬಂಧ ಇಲ್ಲ” ಎಂದಿದ್ದಾರೆ.
ಇದನ್ನೂ ಓದಿ; ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ವಿಡಿಯೊ ತುಣುಕುಗಳನ್ನು ಪ್ರಸಾರ ಮಾಡಿದ ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ