ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸೇಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಶಾಲೆಯು 6 ವರ್ಷದ UKG ಮಗು ಶಿಶುಗೀತೆ (ರೈಮ್ಸ್) ಹೇಳಲಿಲ್ಲ ಎಂಬ ಕಾರಣಕ್ಕೆ ಫೇಲ್ ಎಂದು ಘೋಷಿಸಿ ವಿವಾದಕ್ಕೆ ಕಾರಣವಾಗಿದೆ. ಇದರಿಂದ ಆಕ್ರೋಶಗೊಂಡ ಪೋಷಕರು ಶಾಲೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
“ನಮ್ಮ ಒಬ್ಬಳೆ ಮಗಳು ಕಲಿಕೆಯಲ್ಲಿ ಮುಂದಿದ್ದಾಳೆ. ಇಂಗ್ಲಿಷ್ನಲ್ಲಿ 40ಕ್ಕೆ 31 ಅಂಕ, ಗಣಿತದಲ್ಲಿ 40ಕ್ಕೆ 35 ಅಂಕ ಮತ್ತು ಪರಿಸರ ವಿಜ್ಞಾನದಲ್ಲಿ 40ಕ್ಕೆ 28 ಅಂಕ ಗಳಿಸಿದ್ದಾಳೆ. ಆದರೆ ಶಾಲೆಯ ಮೌಖಿಕ ಪರೀಕ್ಷೆಯಲ್ಲಿ ಶಿಶುಗೀತೆ ಹೇಳಲಿಲ್ಲ ಎಂಬ ಕಾರಣಕ್ಕೆ ಶಾಲೆಯ ಪ್ರಗತಿ ಪತ್ರದಲ್ಲಿ ಫೇಲ್ ಎಂದು ನಮೂದಿಸಲಾಗಿದೆ” ಎಂದು ಪೋಷಕರಾದ ಮನೋಜ್ ಬಾದಲ್ ಆರೋಪಿಸಿದ್ದಾರೆ.
ಮಗುವಿನ ಅಂಕಪಟ್ಟಿ ನೋಡಿ ನಮಗೆ ಘಾಸಿಯಾಗಿದೆ. ಅಧಿಕೃತವಾಗಿ ಅನುತ್ತೀರ್ಣ ಎಂದು ಬರೆದಿರುವುದರಿಂದ ಮಗುವಿಗೆ ಮಾನಸಿಕ ಹಿಂಸೆಯಾಗುತ್ತದೆ. ಹಾಗಾಗಿ ಅಂಕಪಟ್ಟಿಯನ್ನು ಮಗುವಿಗೆ ತೋರಿಸಿಲ್ಲ. ದಯವಿಟ್ಟು ಈ ಕುರಿತು ಗಮನವಹಿಸಿ ಸರಿಪಡಿಸಿ ಎಂದು ಅವರು ಶಾಲೆಗೆ ಇಮೇಲ್ ಮೂಲಕ ಮನವಿ ಮಾಡಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲರು ಅಸೂಕ್ಷ್ಮವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.
“ರೈಮ್ಸ್ ಕಲಿಸುವ ಶಿಕ್ಷಕರ ಪ್ರಕಾರ, ವಿದ್ಯಾರ್ಥಿಯು ಪರೀಕ್ಷೆಯ ಸಮಯದಲ್ಲಿ ಶಿಶುಗೀತೆಗಳನ್ನು ಹೇಳಲಿಲ್ಲ. ಶಿಕ್ಷಕರು 2 ಅವಕಾಶ ನೀಡಿದರೂ ಮಗು ಎರಡೂ ಬಾರಿಯೂ ಓದಲಿಲ್ಲ. ಆದ್ದರಿಂದ ಶಿಕ್ಷಕರು ಕನಿಷ್ಠ 05 ಅಂಕವನ್ನು ನೀಡಿದ್ದಾರೆ. ಮೊಬೈಲ್ ಅಪ್ಲಿಕೇಶನ್ನಲ್ಲಿನ ನಮ್ಮ ಪರೀಕ್ಷೆಯ ಫಲಿತಾಂಶವು ಯಾವುದೇ ವಿದ್ಯಾರ್ಥಿ ಒಂದು ವಿಷಯದಲ್ಲಿ ಅನುತ್ತೀರ್ಣರಾಗಿದ್ದರೂ ಸಹ “ಫೇಲ್” ಎಂದು ತೋರಿಸುವಂತೆ ಹೊಂದಿಸಲಾಗಿದೆ. ಮಗುವು ಎಲ್ಲಾ ವಿಷಯಗಳಿಗೆ 35% ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದರೆ ಮಾತ್ರ “ಪಾಸ್” ಆಗುತ್ತದೆ. ಒಂದು ವಿಷಯದಲ್ಲಿ ಅನುತ್ತೀರ್ಣರಾದರು ನಾವು ಆ ಮಗುವನ್ನು ಮುಂದಿನ ತರಗತಿಗೆ ಕಳಿಸುತ್ತೇವೆ. ನಾವು ಉತ್ತಮ ಉದ್ದೇಶದಿಂದ ಅಂಕ ಪಟ್ಟಿ ರಚಿಸಿದ್ದೇವೆ ಮತ್ತು ನಿಮ್ಮ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೂ ಮುದ್ರಿತ ಪ್ರಗತಿ ವರದಿ ಕಾರ್ಡ್ನಲ್ಲಿ ನಿಮ್ಮ ಮಗುವನ್ನು “ಫೇಲ್” ಎಂದು ಸೂಚಿಸುವುದಿಲ್ಲ. ಆದ್ದರಿಂದ, ನಿಮ್ಮ ಮಗು ಫೇಲ್ ಎಂದು ತೋರಿಸಲು ನೀವು ಬಯಸದಿದ್ದರೆ, ನೀವು ಅವಳ ಮುದ್ರಿತ ಪ್ರಗತಿ ವರದಿಯನ್ನು ತೋರಿಸಬಹುದು. ಆದರೆ ನೀವು ಮೊಬೈಲ್ ಅಪ್ಲಿಕೇಶನ್ನಲ್ಲಿನ ಅಂಕಪಟ್ಟಿಯಲ್ಲಿನ ಪರೀಕ್ಷೆಯಲ್ಲಿ ಶಿಶುಗೀತೆ ಹೇಳಲಿಲ್ಲದ್ದಾರಿಂದ ಆ ವಿಷಯದಲ್ಲಿ ಫೇಲ್ ಆಗಿದ್ದಾರೆ ಎಂದು ಮಗುವಿಗೆ ವಿವರಿಸಿದರೆ ಉತ್ತಮ ಎಂದು ನಾವು ಶಿಫಾರಸು ಮಾಡುತ್ತೇವೆ” ಎಂದು ಶಾಲೆಯು ಇಮೇಲ್ ಮೂಲಕ ಸ್ಪಷ್ಟೀಕರಣ ನೀಡಿದೆ ಎಂದು ಮನೋಜ್ ಬಾದಲ್ ತಿಳಿಸಿದ್ದಾರೆ.
ಶಾಲೆಯ ಸ್ಪಷ್ಟೀಕರಣದಿಂದ ಮತ್ತಷ್ಟು ಆಕ್ರೋಶಗೊಂಡ ಬಾದಲ್, “06 ವರ್ಷದ ಮಗುವಿನ ಅರ್ಥಕ್ಕೆ ನಿಲುಕದ ಫೇಲ್ ಎಂಬ ವಿಚಾರವನ್ನು ತಿಳಿಸಿದರೆ ಮಾನಸಿಕ ಹಿಂಸೆಯಾಗುತ್ತದೆ. ಇದು ಸರ್ಕಾರಿ ಅದೇಶಗಳಿಗೆ ವಿರುದ್ಧವಾಗಿದೆ ಎಂದು ನಂಬುತ್ತೇವೆ. ಹಾಗಾಗಿ ನಮ್ಮ ಮಗುವನ್ನು ಫೇಲ್ ಎಂದು ಘೋಷಿಸಿದ ಶಾಲೆಯ ವಿರುದ್ಧ ಶಿಕ್ಷಣ ಸಚಿವಾಲಯ ಮತ್ತು ಐಸಿಎಸ್ಸಿ ಕೇಂದ್ರವನ್ನು ಸಂಪರ್ಕಿಸಿ ಇಂತಹ ಕಾನೂನುಬಾಹಿರ ಕೆಲಸಗಳನ್ನು ನಿಲ್ಲಿಸುವಂತೆ ಮತ್ತು ನಮ್ಮ ಮಗುವಿನ ಫಲಿತಾಂಶವನ್ನು ಸರಿಪಡಿಸುವಂತೆ ಒತ್ತಾಯಿಸಿಸುತ್ತೇವೆ” ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಶಾಲೆಯ ಮಾನ್ಯತೆ ರದ್ದುಗೊಳಿಸಬೇಕು: ಡಾ.ವಿ.ಪಿ ನಿರಂಜನಾರಾಧ್ಯ
5ನೇ ಮತ್ತು 8ನೇ ತರಗತಿಯ ಪರೀಕ್ಷೆಗಳಲ್ಲಿಯೇ ನಾವು ಫೇಲ್ ಮಾಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಪಬ್ಲಿಕ್ ಪರೀಕ್ಷೆಯಲ್ಲಿಯೇ ಫೇಲ್-ಪಾಸ್ ಮುಖ್ಯವಲ್ಲವೆಂದ ಮೇಲೆ ಯುಕೆಜಿ ಮಗುವನ್ನು ಫೇಲ್ ಮಾಡುವುದರಲ್ಲಿ ಯಾವ ಅರ್ಥವಿದೆ? ಇದು RTE ಕಾಯಿದೆಯ ಸೆಕ್ಷನ್ 16, 17 ಮತ್ತು 29 ರ ಉಲ್ಲಂಘನೆಯಾಗಿದೆ ಎನ್ನುತ್ತಾರೆ ಶಿಕ್ಷಣ ತಜ್ಞರಾದ ಡಾ.ವಿ.ಪಿ ನಿರಂಜನಾರಾಧ್ಯರವರು.
ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಮಕ್ಕಳಲ್ಲಿ ಭಯ, ಆತಂಕ ಉಂಟು ಮಾಡಬಾರದು, ಮಾನಸಿದ ಹಿಂಸೆ ನೀಡಬಾರದು ಮತ್ತು 8ನೇ ತರಗತಿಯವರೆಗೆ ಫೇಲ್ ಮಾಡಬಾರದು, ತಡೆ ಹಿಡಿಯಬಾರದು ಮತ್ತು ಶಾಲೆಯಿಂದ ಹೊರಹಾಕಬಾರದು ಎಂದು ಆರ್ಟಿಇ ಕಾಯ್ದೆ ಹೇಳುತ್ತದೆ. ಸಣ್ಣ ಮಕ್ಕಳು ಆಗ ತಾನೇ ಸಮಾಜಕ್ಕೆ ತೆರೆದುಕೊಳ್ಳುತ್ತ, ಕಲಿಕೆಯಲ್ಲಿ ತೊಡಗಿರುತ್ತಾರೆ. ಆ ಸಮಯದಲ್ಲಿ ಅವರಿಗೆ ಆಟ-ಪಾಠದ ಮೂಲಕ ಕಲಿಕೆ ನಡೆಯಬೇಕೆ ಹೊರತು ಆ ಹಂತದಲ್ಲಿ ಪಾಸ್-ಫೇಲ್ ಎನ್ನುವುದೇ ಅರ್ಥಹೀನ. ಈ ಮಗವಿನ ವಿಚಾರದಲ್ಲಿ ಆ ಶಾಲೆ ನಡೆಸುವವರಿಗೆ ಮತ್ತು ಮುಖ್ಯೋಪಾಧ್ಯಯರಿಗೆ ಶಿಕ್ಷಣದ ಬಗ್ಗೆಯಾಗಲಿ, ಶಿಕ್ಷಣದ ಶಾಸ್ತ್ರದ ಎಷ್ಟು ಕಳಪೆ ಜ್ಞಾನವಿದೆ ಎಂಬುದುನ್ನು ತೋರಿಸುತ್ತದೆ. ಆ ಶಾಲೆಯ ವಿರುದ್ಧ ಆರ್ಟಿಇ ಕಾಯ್ದೆ ನಿಯಮಗಳ ಪ್ರಕಾರ ಪ್ರಕರಣ ದಾಖಲಿಸಬೇಕು” ಎಂದರು.
“ಏನು ಸಾಧಿಸಬೇಕೆಂದು ಈ ರೀತಿ ಫೇಲ್ ಮಾಡಲಾಗಿದೆ. ಅಂದುಕೊಂಡಿದ್ದನ್ನು ಮಗು ಕಲಿತಿಲ್ಲ ಎಂದರೆ ಮಗುವಿನಲ್ಲಿನ ಯಾವುದೇ ಅಂತರ್ಗತ ನ್ಯೂನತೆಯಿಂದಾಗಿ ಕಲಿತಿಲ್ಲ ಎಂದಲ್ಲ. ಕಲಿಕೆಯ ವಾತಾವರಣ ಮತ್ತು ನಿಮ್ಮ ಬೋಧನಾ ಕ್ರಮ ಸರಿಯಿಲ್ಲ ಎಂದರ್ಥ. ಅದಕ್ಕೆ ಶಿಕ್ಷಕರು ಮತ್ತು ಶಾಲೆ ಜವಾಬ್ದಾರಿಯೇ ಹೊರತು ಮಗು ಅಲ್ಲ. ನಿಮ್ಮ ವೈಫಲ್ಯ ಎದ್ದು ಕಾಣುತ್ತಿರುವುದರಿಂದ ಮಗುವಿಗೆ ಕಟ್ಟಿಸಿಕೊಂಡಿದ್ದ ಶುಲ್ಕವನ್ನು ಮರುಪಾವತಿ ಮಾಡಬೇಕು” ಎಂದು ಒತ್ತಾಯಿಸಿದರು.
ಮಾಜಿ ಶಿಕ್ಷಣ ಸಚಿವರ ಕಿಡಿ
UKG ತರಗತಿಯಲ್ಲಿ ಓದುತ್ತಿರುವ ಈ ಎಳೆಯ ಮಗುವನ್ನು “ಫೇಲ್” ಮಾಡಿರುವ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ, ಹೃದಯ ಮೊದಲೇ ಇಲ್ಲ. ಆ ಮಗುವನ್ನು ಏನು ಮಾಡಲು ಹೊರಟಿದೆ ಈ ಮಹಾ ಶಿಕ್ಷಣ ಸಂಸ್ಥೆ!
ನನ್ನ ಗಮನಕ್ಕೆ ಈ “ಮಹಾಕೃತ್ಯ” ಬಂದ ಕೂಡಲೇ ಶಿಕ್ಷಣ ಇಲಾಖೆಯ ಆ ತಾಲೂಕಿನ ಪ್ರಮುಖರಿಗೆ ತಲುಪಿಸಿ ಈ ಶಾಲೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿದ್ದೇನೆ. ನಾನು ಕೂಡ ಈ ಮಹಾ ಶಾಲೆಗೆ ಸದ್ಯದಲ್ಲಿಯೇ ಒಮ್ಮೆ ಭೇಟಿ ನೀಡಿ “ಪಾವನ” ನಾಗಲು ಬಯಸಿದ್ದೇನೆ ಎಂದು ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.
ಎಚ್ಚೆತ್ತುಕೊಂಡ ಶಾಲೆ; ಕ್ಷಮೆಯಾಚನೆ
ಶಾಲೆ ಬಳಸುತ್ತಿರುವ ಸಾಫ್ಟ್ವೇರ್ನಲ್ಲಿ ‘ಫೇಲ್’ ಎಂಬ ಪದವನ್ನು ನಮೂದಿಸಲಾಗಿದೆ. ಒಮ್ಮೆ ಪೋಷಕರು ಈ ಸಮಸ್ಯೆಯನ್ನು ನಮಗೆ ತಿಳಿಸಿದ ನಂತರ, ಆಪ್ನ ಅಂಕಪಟ್ಟಿಯಿಂದ ‘ಫೇಲ್’ ಪದವನ್ನು ತೆಗೆದುಹಾಕಲು ನಾವು ಸಾಫ್ಟ್ವೇರ್ ಕಂಪನಿಯನ್ನು ಕೇಳಿದ್ದೇವೆ ಮತ್ತು ಆದ್ಯತೆಯ ಮೇರೆಗೆ ಮಾಡುವಂತೆ ನೆನಪಿಸಿದ್ದೇನೆ. ಇದರಿಂದ ಉಂಟಾದ ಯಾವುದೇ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಶಾಲೆಯ ಪ್ರಾಂಶುಪಾಲರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ ಸಂಘಟನೆಯಿಂದ ಬೃಹತ್ ರ್ಯಾಲಿ