ರಾಜ್ಯ ಸರ್ಕಾರದಿಂದ ಕೆಲ ದಿನಗಳಲ್ಲಿ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ ವಿವಿಧ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತಿದ್ದು, ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಬೃಹತ್ ರ್ಯಾಲಿ ಹಮ್ಮಿಕೊಳ್ಳುತ್ತಿದೆ.
ಸಂಯುಕ್ತ ಹೋರಾಟ-ಕರ್ನಾಟಕ ವತಿಯಿಂದ ಫೆಬ್ರವರಿ 16, 2023ರಂದು ಬೃಹತ್ ರ್ಯಾಲಿ ನಡೆಯಲಿದ್ದು, ಈ ಬಗ್ಗೆ ಸಂಘಟನೆಯ ಸಂಯೋಜಕರಾದ ಬಡಗಲಪುರ ನಾಗೇಂದ್ರ, ಜಿ.ಸಿ. ಬಯ್ಯಾರೆಡ್ಡಿ, ಮಾವಳ್ಳಿ ಶಂಕರ್, ಕೆ.ಎ. ಭಟ್, ನೂರ್ ಶ್ರೀಧರ್, ದೇವಿ ಮತ್ತಿತರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ರಾಜ್ಯ ಸರ್ಕಾರದ ಎದುರು ವಿವಿಧ ಬೇಡಿಕೆಗಳನ್ನಿಟ್ಟಿರುವ ಸಂಘಟಕರು, ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳು, ಎಪಿಎಂಸಿ ಕಾಯ್ದೆ ತಿದ್ದುಪಡಿಗಳು, ಜಾನುವಾರು ಹತ್ಯೆ ಕಾಯ್ದೆ ತಿದ್ದುಪಡಿಗಳು, ಭೂಸ್ವಾಧೀನ ಕಾಯ್ದೆ ತಿದ್ದುಪಡಿಗಳು ರದ್ದಾಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: 32ನೇ ದಿನಕ್ಕೆ ಕಾಲಿಟ್ಟ ಪಿಟಿಸಿಎಲ್ ಹೋರಾಟ; ಎಸ್ಆರ್ ಹಿರೇಮಠ ಬೆಂಬಲ
ಬಡವರಿಗೆ ಬಗರ್ ಹುಕ್ಕುಂ ಮತ್ತಿತರ ಸರ್ಕಾರಿ ಭೂಮಿಗಳ ಹಂಚಿಕೆ, ಎಪಿಎಂಸಿಗಳನ್ನು ಬಲಪಡಿಸುವ ನೀತಿ, ರೈತರ ಒಪ್ಪಿಗೆ ಇಲ್ಲದೇ ಭೂಸ್ವಾಧೀನ ಮಾಡುವುದಿಲ್ಲ ಎನ್ನುವ ಭೂಸ್ವಾಧೀನ ಕಾಯ್ದೆ- 2013ರ ಕಾಯ್ದೆಯ ಜಾರಿ, ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿಗೊಳಿಸುವ ಕಾನೂನು, ಸಾಲ ಮನ್ನಾದಂತಹ ಅಂಶಗಳನ್ನು ಒಳಗೊಂಡ ಋಣ ಮುಕ್ತ ಕಾಯ್ದೆ ಜಾರಿಯಾಗಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಬೇಕು, ವೃದ್ಧ ರೈತರು, ಕೂಲಿಕಾರರಿಗೆ ಪಿಂಚಣಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಯಾಗಬೇಕು. ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಾಡಿ, ನಾಲ್ಕು ಸಂಹಿತೆಗಳನ್ನು ರಚಿಸುವ ಪ್ರಯತ್ನ ಕೈಬಿಡಬೇಕು, ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ನಿರುದ್ಯೋಗ, ಶಿಕ್ಷಣದ ವ್ಯಾಪಾರೀಕರಣ, ಭ್ರಷ್ಟಾಚಾರ, ಕೋಮುವಾದೀಕರಣ ನಿಲ್ಲಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಶೋಷಿತರಿಗೆ ಮೀಸಲಾತಿಯನ್ನು ಖಾತ್ರಿಗೊಳಿಸಬೇಕು, ಒಳ ಮಿಸಲಾತಿಯನ್ನು ಅಸ್ತ್ರವಾಗಿಸಿಕೊಂಡು ಶೋಷಿತರನ್ನು ಒಡೆದು ಆಳುವ ತಂತ್ರವಾಗಿ ಬಳಸುವ ಬದಲಿಗೆ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಪರಿಹಾರ ನೀಡಬೇಕು. ಬಸವಣ್ಣ, ಕುವೆಂಪುರಂತಹ ಕನಸಿನ ‘ಕರ್ನಾಟಕ’ವನ್ನು ಉಳಿಸಿಕೊಳ್ಳಲು ‘ಕೋಮುವಾದಿ ದ್ವೇಷ ರಾಜಕಾರಣ’ ನಿಲ್ಲಬೇಕು ಎಂದಿದ್ದಾರೆ.
ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆಬ್ರವರಿ 16, 2023 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯದ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಯಲ್ಲಿ ರಾಜ್ಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಯುಕ್ತ ಹೋರಾಟ-ಕರ್ನಾಟಕ ವಿನಂತಿಸಿಕೊಂಡಿದೆ.
ಫೆಬ್ರವರಿ 16, 2023 ರಂದು ನಡೆಯಲಿರುವ ರ್ಯಾಲಿಯಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ಜೊತೆಗೆ ಇತರೆ ಕೆಲವು ಜನ ಚಳವಳಿಗಳು ಸಹ ಭಾಗವಹಿಸಲಿವೆ. ರಾಜ್ಯದ ಸಮಸ್ತ ದುಡಿಯುವ ಜನರ ಹಕ್ಕುಗಳನ್ನು ರಕ್ಷಿಸುವ ಮತ್ತು ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಬಲಪಡಿಸಬೇಕು ಎನ್ನುವ ಎಲ್ಲಾ ಪ್ರಗತಿಪರ, ಜಾತ್ಯತೀತ ಸಂಘಟನೆಗಳು ಸಹ ಈ ರ್ಯಾಲಿಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.