ಇಂದು ರಾಜ್ಯಸಭೆಯಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಗೃಹಮಂತ್ರಿ ಅಮಿತ್ ಷಾ ಘೋಷಿಸಿದ ನಂತರ ಇದನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ಆರಂಭವಾಗಿದೆ. ನೂರಾರು ಜನ ಸ್ವಯಂಪ್ರೇರಿತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರ ಕುರಿತ ಅಧ್ಯಕ್ಷೀಯ ಆದೇಶವು ಸಂವಿಧಾನದ ವಿರುದ್ಧದ ಮೋದಿ ಸರ್ಕಾರದ ದಂಗೆಯಾಗಿದೆ. ನೋಟು ರದ್ಧತಿಯು ಹೇಗೆ ಕಪ್ಪು ಹಣದ ಕಡಿವಾಣಕ್ಕೆ ಪರಿಹಾರವಾಗಲಿಲ್ಲವೋ ಹಾಗೆಯೇ ಈ ದಂಗೆಯೂ ಸಹ ಕಾಶ್ಮೀರಕ್ಕೆ ಯಾವುದೇ ಪರಿಹಾರವಲ್ಲ. ತುರ್ತು ಪರಿಸ್ಥಿತಿಯು ಮಧ್ಯರಾತ್ರಿಯೇ ಕಾಶ್ಮೀರವನ್ನು ತಲುಪಿದೆ. ಶೀಘ್ರದಲ್ಲೇ ಇಡೀ ಭಾರತವನ್ನು ತಲುಪಲಿದೆ. ಇದನ್ನು ವಿರೋಧಿಸಿ ಇಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೋರಾಟಗಾರ್ತಿ ಕವಿತಾ ಕೃಷ್ಣನ್ ತಿಳಿಸಿದ್ದಾರೆ.
ಇಂದು ಸಂಜೆ 5:30ಕ್ಕೆ ಪ್ರಜಾಪ್ರಭುತ್ವ ಪ್ರೇಮಿ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಬೆಂಗಳೂರಿನ ಟೌನ್ ಹಾಲ್ ಎದುರು ಕ್ಯಾಂಡಲ್ ಲೈಟ್ ಪ್ರತಿರೋಧವನ್ನು ಹಮ್ಮಿಕೊಂಡಿದ್ದಾರೆ.
ಇನ್ನು “ಭಾರತದ ಕಾಶ್ಮೀರ್ ನೀತಿಯ ಬಗ್ಗೆ ವಾಜಪೇಯಿಯವರು ಮೂರು ಸೂತ್ರಗಳನ್ನು ಹೇಳಿದ್ದರು, ಇನ್ಸಾನಿಯತ್ (ಮನುಷ್ಯತ್ವ), ಜಂಭೂರಿಯತ್ (ಪ್ರಜಾ ಪ್ರಭುತ್ವ), ಕಶ್ಮೀರಿಯತ್(ಸ್ಥಳೀಯವಾದ, ಕಾಶ್ಮೀರಿಯತೆ)
ಈ ಮೂರೂ ಸೂತ್ರಗಳನ್ನು ಕಡೆಗಣಿಸಿರುವ ಸರ್ಕಾರದ ಇವತ್ತಿನ ನಿರ್ಧಾರ, ಪ್ರತ್ಯೇಕತಾವಾದಿಗಳ ಮತ್ತು ಆತಂಕವಾದಿಗಳ ಕೈ ಬಲಪಡಿಸಲಿದೆ.
ಅಪ್ಪಿಕೊಳ್ಳುವ ಬದಲು ಕುತ್ತಿಗೆ ಹಿಚುಕುವ ನೀತಿಗೆ ಮುಂದಾಗಿರುವ ಈ ನಿರ್ಧಾರದ ದುಷ್ಪರಿಣಾಮವನ್ನು ನಮ್ಮ ಭವಿಷ್ಯದ ಪೀಳಿಗೆ ಅನುಭವಿಸಲಿದೆ. ಇದಕ್ಕೆ ಇತಿಹಾಸದಲ್ಲಿ ಹಲವಾರು ಸಾಕ್ಷಿಗಳಿವೆ.” ಎಂದು ಯೋಗೇಂದ್ರ ಯಾದವ್ ರವರು ಟ್ವೀಟ್ ಮಾಡಿದ್ದಾರೆ.
ಕಾಶ್ಮೀರಕ್ಕೆ ಹೆಚ್ಚಿನ ಭದ್ರತಾ ಪಡೆಗಳ ನಿಯೋಜನೆ
ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಮುಂಜಾಗ್ರತೆಯಾಗಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ದೇಶಾದ್ಯಂತ ಸುಮಾರು 8000 ಗುಂಪು ಸಿ.ಆರ್.ಪಿ.ಎಫ್ ಯೋಧರನ್ನು/ಅರೆಸೇನಾಪಡೆಯನ್ನು ಕೂಡಲೇ ಜಮ್ಮು ಕಾಶ್ಮೀರಕ್ಕೆ ತೆರಳುವಂತೆ ಆದೇಶಿಸಲಾಗಿದೆ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ.